Home Blog Page 41

ನೈಸರ್ಗಿಕ ಕೃಷಿಗೆ ಒತ್ತು ನೀಡಿ

ಶಿಡ್ಲಘಟ್ಟ : ಶ್ರಮ ಜೀವಿಯಾಗಿರುವ ರೈತರು ಆರ್ಥಿಕ ಸಂಕಷ್ಠದಿಂದ ಹೊರ ಬರಲು ನೈಸರ್ಗಿಕ ಕೃಷಿ ಹೊರತುಪಡಿಸಿ ಪರ್ಯಾಯ ಮಾರ್ಗವಿಲ್ಲ ಎಂದು ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕಿ ಚೇತನ ಅವರು ಅಭಿಪ್ರಾಯ ಪಟ್ಟರು.

ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಅಜ್ಜ ಕದರೆನಹಳ್ಳಿ ಗ್ರಾಮದ ಶ್ರೀ ಕೃಷ್ಣ ದೇವಾಲಯದ ಆವರಣದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ಏಕ ಬೆಳೆ ಪದ್ಧತಿ ಕೈಬಿಡಬೇಕು, ಮಿಶ್ರ ಬೆಳೆಗಳಾದ ಹುಚ್ಚೆಳ್ಳು, ಅವರೆ, ಅಲಸಂದೆ, ಸಾಸಿವೆ, ರಾಗಿ, ತೊಗರಿಯನ್ನು ಬೆಳೆಯಬೇಕು. ತರಕಾರಿ ಬೇಡಿಕೆಯನ್ನು ಮೊದಲೇ ಅರಿತು ಉತ್ಪಾದನೆಗೆ ಮುಂದಾಗಬೇಕು, ದರ ಇಳಿಕೆ ಎಂದು ರಸ್ತೆಗೆ ತರಕಾರಿ ಸುರಿಯುವ ಪ್ರಮೇಯವೇ ಬರುವುದಿಲ್ಲ. ಮಾನವನಿಗೆ ಯಾವ ರೀತಿ ಪೌಷ್ಠಿಕಾಂಶಯುಕ್ತ ಆಹಾರ ಅವಶ್ಯಕತೆ ಇದೆಯೋ ಅದೇ ರೀತಿ ಬೇಳೆಗಳಿಗೂ ಲಘು ಪೋಷಕಾಂಶಗಳಿರಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಶ್ರೀರಾಮಪ್ಪ ಮಾತನಾಡಿ, ಶೂನ್ಯ ಬಂಡವಾಳದಲ್ಲಿ ಕೃಷಿ ಮಾಡಲು ಲೋಡ್‌ ಗಟ್ಟಲೆ ಕೊಟ್ಟಿಗೆ ಗೊಬ್ಬರದ ಅವಶ್ಯಕತೆ ಇಲ್ಲ, ನಾಟಿ ಹಸುವಿನ ಸಗಣಿ ಮತ್ತು ಗಂಜಲ, ಕಡಲೆ ಹಿಟ್ಟು ಬೆಲ್ಲ ಇಂತಿಷ್ಟು ಪ್ರಮಾಣದಲ್ಲಿ ನೀರಿನಲ್ಲಿ ಮಿಶ್ರಣ ಮಾಡಿ ಐದು ದಿನಗಳು ನಂತರ ಬಿತ್ತನೆ ಮತ್ತು ಬಿತ್ತನೆ ಮಾಡಿದ ನಂತರ ಬೆಳವಣಿಗೆ ಸಂದರ್ಭದಲ್ಲಿ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೆ ನಾಟಿ ಹಸುವಿನ ಸಗಣಿ ಮತ್ತು ಗಂಜಲ ಹೊರತು ಪಡಿಸಿ ಇತರೆ ಹಸುಗಳ ಗಣಿ ಮತ್ತು ಗಂಜಲ ವ್ಯರ್ಥ ಕಸರತ್ತು ಎಂದು ಹೇಳಿದರು.
ಶೂನ್ಯ ಬಂಡವಾಳದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಯಲ್ಲಿ ಬೀಜೋಪಚಾರ ಕಡ್ಡಾಯ, ರೋಗ ನಿರೋಧಕ ಶಕ್ತಿ ಜೀವಾಮೃತದಿಂದ ಸಾಧ್ಯವಿದೆ, ಆಕಸ್ಮಿಕ ಕೀಟ ಮತ್ತು ರೋಗ ಬಾಧೆಗೆ ಬೇವಿನ ಬೀಜದ ಕಶಾಯ ಸೂಕ್ತ ನೀರುಣಿಸುವ ಪದ್ಧತಿಯು ಅತಿಮುಖ್ಯ ಎಂದರು.

ಈ ಸಂದರ್ಭದಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ (ಆತ್ಮ) ಆಶಾರಾಣಿ, ರೈತರಾದ ಟಿ ಎಸ್ ಆಂಜನೇಯರೆಡ್ಡಿ, ಮುನಿಶಾಮಿ, ಆನಂದ, ದ್ಯಾವಪ್ಪ, ನರಸಿಂಹಪ್ಪ, ಬೈರಪ್ಪ, ದೇವರಾಜು, ಚನ್ನಮ್ಮ ,ಪ್ರಮೀಳಾ, ಅನಿತಾ ಕೃಷಿ ಸಖಿ, ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಶಿಡ್ಲಘಟ್ಟ

ಸಂಗೀತ ಪ್ರಿಯರ ಮನಸೂರೆಗೊಂಡ ಶಿಶಿರ ಗಾಯನ

ಬೆಂಗಳೂರು : ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ (ಜುಲೈ 24ರಂದು) ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವಪ್ರತಿಭೆ ಶ್ರೀ ಶಿಶಿರ ಕೆ.ಪಿ. ಅವರು ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಅಪರೂಪದ ಹರಿದಾಸರ ಪದಗಳ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶ್ರೀ ಪುರಂದರದಾಸರ “ಗಜವದನ ಬೇಡುವೆ” ಎಂಬ ವಿಘ್ನನಿವಾರಕನ ಕೃತಿಯೊಂದಿಗೆ ಗಾಯನ ಆರಂಭಿಸಿದ ಶಿಶಿರ “ಗುರು ರಾಘವೇಂದ್ರರ ಚರಣ ಕಮಲವನ್ನು” (ಗೋಪಾಲದಾಸರು),
“ವಾಸುದೇವನ ಚರಣ” (ಪುರಂದರದಾಸರು), “ಶಿವನೇ ನಾ ನಿನ್ನ ಸೇವಕನಯ್ಯ (ಶ್ರೀಧವಿಠ್ಠಲದಾಸರು), “ನಂಬಿದೆ ನಿನ್ನ ಪಾದವ” (ಗುರು ವಿಜಯವಿಠ್ಠಲದಾಸರು), “ಬಾರೆ ಭಾಗ್ಯದ ನಿಧಿಯೇ” (ಅನಂತಾದ್ರೀಶದಾಸರು),
“ಸ್ಮರಣೆ ಒಂದೇ ಸಾಲದೆ ಗೋವಿಂದನ” (ಪುರಂದರದಾಸರು), “ಬನ್ನಿ ಮುರಳಿಯ ನಾದವ ಕೇಳಿ” (ಶ್ರೀ ವಿದ್ಯಾಪ್ರಸನ್ನತೀರ್ಥರು), “ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ” (ಪುರಂದರದಾಸರು), “ನಾರಸಿಂಹ ಶ್ರೀ ನಾರಸಿಂಹ” (ಶ್ರೀ ಸಂಕರ್ಷಣ ಒಡೆಯರು),:”ಶ್ರೀಪತಿಯ ಕಟಾಕ್ಷ ವೀಕ್ಷಣ” (ಪುರಂದರದಾಸರು),
“ಆಡಿದನೋ ರಂಗ”(ಪುರಂದರದಾಸರು)
“ಕರೆದು ತಾರೆಲೆ ರಂಗನ”(ಶ್ರೀ ವ್ಯಾಸರಾಜರು), “ಕರುಣಿಸೋ ರಂಗ ಕರುಣಿಸೋ” (ಪುರಂದರದಾಸರು), “ಶ್ರೀನಿಕೇತಾನ ಪಾಲಯಮಾಂ” (ಜಗನ್ನಾಥದಾಸರು), “ಕರಿಯ ಕಾಯ್ದವನ” (ಶ್ರೀ ವಾದಿರಾಜರು), “ನೀ ಕರುಣಿಸೋ ವಿಠ್ಠಲ” (ಪ್ರಸನ್ನ ವೆಂಕಟದಾಸರು), “ಹರೇ ವಿಠ್ಠಲ ಪಾಂಡುರಂಗ” (ವಿಜಯದಾಸರು) ಕೃತಿಗಳನ್ನು ಪ್ರಸ್ತುತ ಪಡಿಸಿ, ಸಂದರ್ಭಕ್ಕೆ ತಕ್ಕಂತೆ ಕೆಲವು ಉಗಾಭೋಗಗಳನ್ನೂ ಹಾಡಿದ್ದು ಅಂದಿನ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿತು. ಇವರ ಗಾಯನಕ್ಕೆ ಕು|| ಸಂಸ್ಕೃತಿ ಎಸ್. ಬಾಣಾವರ್ (ಹಾರ್ಮೋನಿಯಂ), ಶ್ರೀ ಅವೀಕ್ಷಿತ್ ಶ್ರೀನಿವಾಸನ್ (ತಬಲಾ) ಮತ್ತು ಕು|| ಇಂಚರ ಎಸ್.ಆರ್ (ತಾಳ) ಸಾಥ್ ನೀಡಿದರು. ಎಲ್ಲಾ ಕಲಾವಿದರೂ ಭಕ್ತಿಭಾವಪರವಶರಾಗಿ ಕಾರ್ಯಕ್ರಮವನ್ನು ಗುರುಗಳಿಗೆ ಸಮರ್ಪಣೆ ಮಾಡಿದರು.
ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರು ಕಲಾವಿದರನ್ನು ಸನ್ಮಾನಿಸಿ, ಗುರುಗಳ ಪ್ರಸಾದವನ್ನು ನೀಡಿ. ಶುಭಕೋರಿದರು.

ಅಪ್ಪು ಕಪ್‌ ಸೀಸನ್‌ 3 ಬ್ಯಾಡ್‌ಮಿಂಟನ್ ಪಂದ್ಯಾವಳಿಗೆ ಚಾಲನೆ

ಬೆಂಗಳೂರು:  ದಿವಂಗತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥ ಆಯೋಜಿಸಲಾಗುವ ʼಅಪ್ಪುಕಪ್‌ ಸೀಸನ್‌ 3ʼರ ಬ್ಯಾಡ್‌ಮಿಂಟನ್ ಪಂದ್ಯಾವಳಿಗೆ ಇಂದು ನಗರದ ಕಿಂಗ್ಸ್‌ ಕ್ಲಬ್‌ನಲ್ಲಿ ಚಾಲನೆ ನೀಡಲಾಯಿತು.  ತೆರೆ ಮೇಲೆ ಮನರಂಜಿಸುವ ತಾರೆಯರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಕಾತುರದಿಂದ ಕಾಯುತ್ತಿದ್ದುದು ಕಣ್ಣಿಗೆ ಹಬ್ಬದಂತಿತ್ತು.
ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಗೆ ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಲಾಯಿತು. ವೇದಿಕೆಯ ಮೇಲೆ ನಟ ಅನಿರುದ್ಧ್‌,  ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಸೇರಿದಂತೆ ವಿವಿಧ ತಂಡದ ನಾಯಕರು ಮತ್ತು ಮಾಲೀಕರು, ಪಂದ್ಯಾವಳಿಯ ನಿರ್ದೇಶಕರಾದ ಉಮೇಶ್‌,  ಆಯೋಜಕರಾದ ಚೇತನ್‌ ಸೂರ್ಯ ಉಪಸ್ಥಿತರಿದ್ದರು.
ಪಂದ್ಯದ ಆರಂಭವು ʼಜೇಮ್ಸ್‌ ವಾರಿಯರ್ಸ್‌ʼ  ಮತ್ತು ʼಯುವರತ್ನ ಚಾಂಪಿಯನ್ಸ್‌ʼ ತಂಡದ ನಡುವೆ ನಡೆಯಿತು. ಈ ಪಂದ್ಯದ ನಾಲ್ಕು ವಿಭಾಗಗಳಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮುಂದಾಳತ್ವವಹಿಸಿರುವ ʼಯುವರತ್ನ ಚಾಂಪಿಯನ್ಸ್‌ʼ ತಂಡ ಮೂರರಲ್ಲಿ ಮುಂಚೂಣಿಯಲ್ಲಿದ್ದು, ಗೆಲುವನ್ನು ಸಾಧಿಸಿದೆ. ʼಯುವರತ್ನ ಚಾಂಪಿಯನ್ಸ್‌ʼ ತಂಡದಲ್ಲಿ ಮಹೇಶ್, ಸಿದ್ಧೇಶ್, ಮಂಜು, ಸ್ಪೂರ್ತಿ, ಕಾರ್ತಿಕ್ (ನಿರ್ದೇಶಕ), ರಂಜನ್, ಅರ್ಪಿತಾ ಗೌಡ, ರಿತ್ವಿ ಜಗದೀಶ್, ಹರಿ, ಲಾವಣ್ಯ, ಮತ್ತು ಐಶ್ವರ್ಯ ಸೇರಿದಂತೆ ಇನ್ನೂ ಹಲವಾರು ಕಲಾವಿದರಿದ್ದರು.
ನಂತರದಲ್ಲಿ ವೀರ ಕನ್ನಡಿಗ ಬುಲ್ಸ್‌, ಗಂಧದ ಗುಡಿ ವಾರಿಯರ್‌, ಜಾಕಿ ರೈಡರ್ಸ್‌, ಜೇಮ್ಸ್‌ ವಾರಿಯರ್ಸ್‌, ಅರಸು ಹಂಟರ್ಸ್‌, ಬಿಂದಾಸ್‌ ರಾಯಲ್‌ ಚಾಲೆಂಜರ್ಸ್‌, ದೊಡ್ಮನೆ ಡ್ರಾಗನ್ಸ್‌, ಪೈಥಾನ್ಸ್‌, ಮೌರ್ಯ ವೀವರ್ಸ್‌ ತಂಡಗಳ ನಡುವೆ ಸ್ಪರ್ಧೆಯು ಬಿರುಸಾಗಿ ಜರುಗಿತು. ಪಂದ್ಯಾವಳಿಯನ್ನು ವೀಕ್ಷಿಸಲು ಅನೇಕ ನಟ ಮತ್ತು ನಟಿಯರು ಪಾಲ್ಗೊಂಡಿದ್ದುದ್ದು ಕ್ರೀಡಾಸ್ಪೂರ್ತಿಗೆ ಸಾಕ್ಷಿಯಾಯಿತು

ಪರಮಾತ್ಮ ಶ್ರೀಕೃಷ್ಣನ ಸಂದೇಶದಂತೆ ಧರ್ಮದ ಮಾರ್ಗದಲ್ಲಿ ನಡೆದು, ಸಮಾಜದ ಒಳಿತಿಗೆ ಶ್ರಮಿಸೋಣ”: ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಕರೆ

ಉಡುಪಿ 25.07.2025: ಪರಮಾತ್ಮ ಶ್ರೀಕೃಷ್ಣನ ಉಪದೇಶಗಳು ಜೀವನದಲ್ಲಿ ಕರ್ಮ, ಧರ್ಮ, ಭಕ್ತಿ, ಜ್ಞಾನ ಮತ್ತು ಸೇವೆಯನ್ನು ಸಮತೋಲನಗೊಳಿಸಲು ಮಾರ್ಗದರ್ಶಕವಾಗಿವೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಉಡುಪಿ ಶ್ರೀ ಕೃಷ್ಣಮಠ ಪರ್ಯಾಯ ಶ್ರೀ ಪುತ್ತಿಗೆ ಮಠಗಳ ವತಿಯಿಂದ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ““ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ, ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್” ಈ ಶ್ಲೋಕವು ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಉಪದೇಶವಾಗಿದೆ. ಇದರಲ್ಲಿ ಧರ್ಮ ಸ್ಥಾಪನೆ ಮತ್ತು ದುಷ್ಟರ ನಾಶಕ್ಕಾಗಿ ದೇವರ ಅವತಾರವನ್ನು ವಿವರಿಸಲಾಗಿದೆ. ಈ ರೀತಿ ಶ್ರೀ ಕೃಷ್ಣನ ಉಪದೇಶಗಳನ್ನು ಆಳವಾಗಿ ಅರ್ಥಮಾಡಿಕೊಂಡರೆ, ಧರ್ಮ ಕಾಪಾಡುವುದುರ ಜೊತೆಗೆ ಜೀವನದಲ್ಲಿ ಯಶಸ್ಸುಗಳಿಸುವು ಮಾರ್ಗದತ್ತ ಸಾಗಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಉಡುಪಿಯ ಆಧ್ಯಾತ್ಮಿಕ ಪರಂಪರೆಯ ಸಮಾನಾರ್ಥಕ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಿಂದ ಆಯೋಜಿಸಲಾದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ಅದೃಷ್ಟವಾಗಿದೆ. ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠವು ಅಷ್ಟಮಠಗಳಲ್ಲಿ ಒಂದು ವೈಭವಯುತ ಮಠವಾಗಿದೆ. ಈ ಮಠವು ದ್ವೈತ ವೇದಾಂತದ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದೆ ಮತ್ತು ಆಧುನಿಕ ಜಗತ್ತಿನಲ್ಲಿಯೂ ಅದನ್ನು ಸ್ಥಾಪಿಸುತ್ತಿದೆ. ಭಕ್ತಿ, ಜ್ಞಾನ ಮತ್ತು ಸೇವೆಯನ್ನು ಒಟ್ಟಿಗೆ ಕಾಣುವ ಸ್ಥಳ ಇದು. ಈ ಮಠದ ಮುಖ್ಯಸ್ಥರು ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಅವರು ಜಾಗತಿಕ ವೇದಿಕೆಯಲ್ಲಿ ಮಠದ ಸಂಪ್ರದಾಯಕ್ಕೆ ಪ್ರತಿಷ್ಠೆಯನ್ನು ನೀಡಿದ್ದಾರೆ. ಅವರು ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ವೇದಾಂತ ಮತ್ತು ಸನಾತನ ಧರ್ಮವನ್ನು ಪ್ರಚಾರ ಮಾಡುವ ಮೂಲಕ ಜಗತ್ತನ್ನು ಭಾರತೀಯತೆಯೊಂದಿಗೆ ಸಂಪರ್ಕಿಸಿರುವುದು ಹೆಮ್ಮೆಯ ವಿಚಾರವಾಗಿದೆ” ಎಂದು ಶ್ಲಾಘಿಸಿದರು.

“ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಿಂದ ಆಚರಿಸಲ್ಪಡುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಆರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ. ಈ ಸಮಾರಂಭವು ಧಾರ್ಮಿಕ ಆಚರಣೆಯ ಜೊತೆಗೆ ನಮ್ಮ ಸಾಂಸ್ಕೃತಿಕ ಪ್ರಜ್ಞೆ, ಆಧ್ಯಾತ್ಮಿಕ ಸ್ಫೂರ್ತಿ ಮತ್ತು ಸಾಮಾಜಿಕ ಏಕತೆಯ ಪವಿತ್ರ ಹಬ್ಬವಾಗಿದೆ. ಯೋಗೇಶ್ವರನಾಗಿರುವ  ಭಗವಾನ್ ಶ್ರೀ ಕೃಷ್ಣನ ಮಾತುಗಳು ಧರ್ಮವನ್ನು ರಕ್ಷಿಸುವ ಮತ್ತು ಅಧರ್ಮವನ್ನು ತೊಡೆದುಹಾಕುವ ಸಂದೇಶವನ್ನು ಒಳಗೊಂಡಿವೆ” ಎಂದು ಅವರು ಹೇಳಿದರು.

“ಶ್ರೀಕೃಷ್ಣನು ಜೀವನದ ಪ್ರತಿಯೊಂದು ಅಂಶವನ್ನು ಮುಟ್ಟುತ್ತಾನೆ – ಬಾಲ್ಯ, ಯೌವನ, ರಾಜಕೀಯ, ಭಕ್ತಿ, ಜ್ಞಾನ, ಕರ್ಮ ಮತ್ತು ನಿಸ್ವಾರ್ಥ ಸೇವೆ. ಶ್ರೀ ಕೃಷ್ಣನ ಬಾಲ್ಯದ ಲೀಲೆಗಳಿಂದ ಹಿಡಿದು ಮಹಾಭಾರತ ಯುದ್ಧದವರೆಗಿನ ಜೀವನವು ಒಂದು ಆಳವಾದ ಮತ್ತು ಸ್ಪೂರ್ತಿದಾಯಕ ಪ್ರಯಾಣವನ್ನು ಚಿತ್ರಿಸುತ್ತದೆ ಮತ್ತು ನಮ್ಮನ್ನು ಮತ್ತು ಯುವಕರನ್ನು ಭಕ್ತರು, ಕರ್ತವ್ಯನಿಷ್ಠರು, ನಿರ್ಭೀತರು ಮತ್ತು ವಿವೇಕಯುತ ಕರ್ಮಯೋಗಿಗಳಾಗಲು ಪ್ರೇರೇಪಿಸುತ್ತದೆ” ಎಂದು ತಿಳಿಸಿದರು.

“ಮಹಾಭಾರತ ಯುದ್ಧದ ಸಮಯದಲ್ಲಿ, ಅರ್ಜುನನು ಸಂದಿಗ್ಧ ಸ್ಥಿತಿಯಲ್ಲಿದ್ದಾಗ ಮತ್ತು ತನ್ನ ಸ್ವಂತ ಸಂಬಂಧಿಕರ ವಿರುದ್ಧ ಹೋರಾಡಲು ಹಿಂಜರಿದಾಗ, ಕೃಷ್ಣನು ಅವನಿಗೆ “ಭಗವದ್ಗೀತೆ”ಯ ಉಪದೇಶವನ್ನು ನೀಡಿದನು. ಪ್ರಸ್ತುತ ಸಮಾಜದಲ್ಲಿ ದಿಗ್ಭ್ರಮೆ, ಅಸಹಿಷ್ಣುತೆ ಮತ್ತು ಸ್ವಯಂ-ಮರೆವಿನ ಭಾವನೆ ಹೆಚ್ಚುತ್ತಿರುವಾಗ, ಗೀತೆಯ ಶ್ಲೋಕ “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ್” ನಮಗೆ ದಾರಿ ತೋರಿಸುತ್ತದೆ. ಮನುಷ್ಯನು ಫಲಿತಾಂಶಗಳ ಬಗ್ಗೆ ಚಿಂತಿಸದೆ ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗಗಳ ಮೂಲಕ ತನ್ನ ಕರ್ತವ್ಯಗಳನ್ನು ನಿಸ್ವಾರ್ಥವಾಗಿ ನಿರ್ವಹಿಸಬೇಕು ಎಂದು ಶ್ರೀ ಕೃಷ್ಣನು ಬೋಧಿಸಿದನು. ಗೀತೆಯಲ್ಲಿ, ಶ್ರೀ ಕೃಷ್ಣನು ಆತ್ಮದ ಅಮರತ್ವ, ಜೀವನದ ಉದ್ದೇಶ ಮತ್ತು ಧರ್ಮವನ್ನು ಅನುಸರಿಸುವ ಮಹತ್ವವನ್ನು ಒತ್ತಿಹೇಳಿದ್ದಾನೆ. ಧರ್ಮ, ಭಕ್ತಿ ಮತ್ತು ಸತ್ಕಾರ್ಯಗಳು ಮಾತ್ರ ಜೀವನವನ್ನು ಯಶಸ್ವಿಗೊಳಿಸುತ್ತವೆ. ಅವರ ಬೋಧನೆಗಳು ಇಂದಿನ ಯುಗದಲ್ಲೂ ಅಷ್ಟೇ ಪ್ರಸ್ತುತವಾಗಿವೆ” ಎಂದು ಅಭಿಪ್ರಾಯಪಟ್ಟರು.

“ಈ ಮಂಡಲೋತ್ಸವದ ಮೂಲಕ, ಎಲ್ಲರೂ ಶ್ರೀಕೃಷ್ಣ ಪರಮಾತ್ಮನು ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ಜೀವನವನ್ನು ಯಶಸ್ವಿಗೊಳಿಸಿಕೊಳ್ಳಬೇಕು ಮತ್ತು ನಡವಳಿಕೆ ಮತ್ತು ಆಲೋಚನೆಗಳಲ್ಲಿ ಸದಾಚಾರವನ್ನು ತಂದುಕೊಂಡು ಧರ್ಮ ಮಾರ್ಗದಲ್ಲಿ ನಡೆದು ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ರಾಜ್ಯಪಾಲರು ಕರೆ ನೀಡಿದರು.

ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪೂಜ್ಯ ವಿಶ್ವಪ್ರಿಯ ತೀರ್ಥ ಸ್ವಾಮಿಜಿ, ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು, ಶಾಸಕ ಯಶಪಾಲ್ ಸುವರ್ಣ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಇ-ಆಸ್ತಿ ನೋಂದಣಿ ಸೇವೆ ಸ್ಥಗಿತ – ಜುಲೈ 25ರಿಂದ 8 ದಿನಗಳ ನಿರ್ವಹಣೆ ಕೆಲಸ

ಬೆಂಗಳೂರು, ಜುಲೈ 25:
ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ (KMDS) ತಮ್ಮ ಇ-ಆಸ್ತಿ ಸೇವೆಯನ್ನು ಜುಲೈ 25ರಿಂದ 8 ದಿನಗಳ ಕಾಲ ಸ್ಥಗಿತಗೊಳಿಸಿದೆ. ಡೇಟಾಬೇಸ್ ನಿರ್ವಹಣೆಯೊಂದಿಗೆ ಸಂಬಂಧಿಸಿದ ತಾಂತ್ರಿಕ ಕಾರ್ಯಗಳ ಕಾರಣ ಈ ತಾತ್ಕಾಲಿಕ ಸ್ಥಗಿತ ಘೋಷಿಸಲಾಗಿದೆ.

📢 ಪ್ರಮುಖ ಮಾಹಿತಿ:

  • ಜು.25ರಿಂದ 8 ದಿನಗಳ ಕಾಲ ಇ-ಆಸ್ತಿ ನೋಂದಣಿ ಸೇವೆ ತಾತ್ಕಾಲಿಕವಾಗಿ ಸ್ಥಗಿತ

  • Mutation Module ಸೇರಿದಂತೆ ಇ-ಆಸ್ತಿ ಸಂಬಂಧಿತ ಎಲ್ಲಾ ಚಟುವಟಿಕೆಗಳು ನಿಲ್ಲಿಕೆ

  • ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಎಲ್ಲಾ ಆಸ್ತಿ ನೋಂದಣಿಗೆ ಇದು ಪರಿಣಾಮ.

  • ಮಾಹಿತಿ ಏನು ಹೇಳುತ್ತದೆ?
    ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿಯ ಅಧಿಕೃತ ಪ್ರಕಟಣೆಯ ಪ್ರಕಾರ, ಇ-ಆಸ್ತಿ ಚಟುವಟಿಕೆಗಳಿಗೆ ಬಳಸಲಾಗುವ Mutation Module ಕಾರ್ಯ ನಿರ್ವಹಣೆಯಲ್ಲಿರಲಿದ್ದು, ಈ ಅವಧಿಯಲ್ಲಿ ಯಾವುದೇ ಹೊಸ ಆಸ್ತಿ ನೋಂದಣಿ ಅಥವಾ ಹಕ್ಕು ವರ್ಗಾವಣೆಯ ಕಾರ್ಯ ಕೈಗೊಳ್ಳಬಾರದು ಎಂದು ನಗರ ಸ್ಥಳೀಯ ಸಂಸ್ಥೆಗಳಿಗೆ ತಿಳಿಸಲಾಗಿದೆ.

    📌 ಹಿನ್ನಲೆ:
    2023ರ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರವು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮನೆ ಮತ್ತು ಜಾಗದ ನೋಂದಣಿಗೆ ಇ-ಆಸ್ತಿ ತಂತ್ರಾಂಶ ಬಳಕೆ ಕಡ್ಡಾಯವಾಯಿತು. ಬಳ್ಳಾರಿ ಜಿಲ್ಲೆಯಲ್ಲಿ ಈ ತಂತ್ರಾಂಶವನ್ನು ಕಾವೇರಿ ತಂತ್ರಾಂಶದೊಂದಿಗೆ ಸಂಯೋಜಿಸಿ, ಸರ್ವರ್ ನಿರ್ವಹಣೆ ಕಾಮಗಾರಿ ನಡೆಯುತ್ತಿದೆ.

  • ಬಳ್ಳಾರಿ ಜಿಲ್ಲೆಯಲ್ಲಿ ಪರಿಣಾಮ:
    ಸೆಪ್ಟೆಂಬರ್ 23ರಿಂದ ಬಳ್ಳಾರಿ ಜಿಲ್ಲೆಯ ಉಪ ನೋಂದಣಿ ಕಚೇರಿಗಳಲ್ಲಿ ಇ-ಆಸ್ತಿ ತಂತ್ರಾಂಶದ ಮೂಲಕ ಹಕ್ಕು ವರ್ಗಾವಣೆ ಮತ್ತು ಆಸ್ತಿ ನೋಂದಣಿ ಕಡ್ಡಾಯವಾಗಿದೆ. ಇದರಿಂದ ಇ-ಆಸ್ತಿ ವ್ಯವಸ್ಥೆಯ ಪೂರ್ಣ ಸಮನ್ವಯ ಸಾಧಿಸಲು ನಿರ್ಧರಿಸಲಾಗಿದೆ.

ನೊಬೆಲ್‌ಗೂ ಮೇಲು! ಸಿಎಂ ರೇವಂತ್ ರೆಡ್ಡಿಗೆ ಸೋನಿಯಾ ಗಾಂಧಿಯಿಂದ ಮೆಚ್ಚುಗೆಯ ಪತ್ರ: ಏನು ಬರೆದಿದ್ದಾರೆ?

ಹೈದರಾಬಾದ್, ಜುಲೈ 25:
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಮೆಚ್ಚುಗೆಯ ಪತ್ರವನ್ನು ತಮ್ಮ ರಾಜಕೀಯ ಜೀವನದ ಅತ್ಯುನ್ನತ ಗೌರವವೆಂದು ಘೋಷಿಸಿದ್ದು, ಈ ಭಾವನಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

📌 ಮುಖ್ಯಾಂಶಗಳು:

  • ರೇವಂತ್ ರೆಡ್ಡಿಗೆ ಸೋನಿಯಾ ಗಾಂಧಿಯಿಂದ ಮೆಚ್ಚುಗೆಯ ಪತ್ರ

  • “ಇದು ನನ್ನ ಆಸ್ಕರ್, ನೊಬೆಲ್, ಮತ್ತು ಲೈಫ್ಟೈಮ್ ಅಚೀವ್ಮೆಂಟ್ ಪ್ರಶಸ್ತಿ”

  • ಜಾತಿ ಸಮೀಕ್ಷೆ ಮಾದರಿಯಾಗಿ ತೆಲಂಗಾಣದ SEEPC ಯೋಜನೆ

  • ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ನವದೆಹಲಿಯಲ್ಲಿ ಪ್ರಸ್ತುತಪಡಿಸಿದ ಕಾರ್ಯಕ್ರಮ.

  • ಸಿಎಂ ರೇವಂತ್ ಎಮೋಷನಲ್ ಪ್ರತಿಕ್ರಿಯೆ:
    “ನಾನು ಪಡೆದ ಈ ಪತ್ರ ಯಾವ ಅಧಿಕಾರಕ್ಕಿಂತಲೂ ಶ್ರೇಷ್ಠ. ಇದು ನನ್ನ ಆಸ್ಕರ್, ನೊಬೆಲ್ ಪ್ರಶಸ್ತಿ ಹಾಗೂ ವೈಯಕ್ತಿಕ ಸಾಧನೆಯ ಶಿಖರ,” ಎಂದು ರೇವಂತ್ ಅಭಿಪ್ರಾಯಪಟ್ಟರು. ಅವರು ಈ ಪತ್ರವನ್ನು ತಮ್ಮ ಜೀವನದ ಅತ್ಯಂತ ಅಮೂಲ್ಯ ಪಾಠವೆಂದು ವರ್ಣಿಸಿದರು.

    📄 ಸೋನಿಯಾ ಗಾಂಧಿಯ ಪತ್ರದ ಅಂಶಗಳು:
    “ನಿಮ್ಮ ಆಡಳಿತದಲ್ಲಿ ನಡೆದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಶ್ಲಾಘನೀಯ. SEEPC ಸಮೀಕ್ಷೆ ಮಾದರಿಯಾಗಿದೆ. ಕಾರ್ಯಕ್ರಮದಲ್ಲಿ ಹಾಜರಾಗಲು ಆಗದಿದ್ದರೂ, ಯಶಸ್ಸಿಗೆ ಹಾರೈಸುತ್ತೇನೆ,” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

  • ನವದೆಹಲಿಯಲ್ಲಿ ನಡೆದ ಕಾರ್ಯಕ್ರಮ:
    ಕಾಂಗ್ರೆಸ್ ಸಂಸದೀಯ ನಾಯಕರ ಎದುರು, ರೇವಂತ್ ರೆಡ್ಡಿ “ತೆಲಂಗಾಣ ಸಾಮಾಜಿಕ-ಆರ್ಥಿಕ ಸಮೀಕ್ಷೆ ಮಾದರಿ” ಕುರಿತು ವಿವರಿಸಿದ್ದಾರೆ. ಈ ಸಮೀಕ್ಷೆಯನ್ನು ರಾಹುಲ್ ಗಾಂಧಿ ಮತ್ತು ರೇವಂತ್ ಆಧಾರಿತ ಮಾದರಿಯೆಂದು ಕರೆಲಾಗಿದೆ.
  • ರೇವಂತ್ ರೆಡ್ಡಿ ಅವರ ಟ್ವೀಟ್:

    “ಸೋನಿಯಾ ಗಾಂಧಿ ಮೇಡಂ – ನಮ್ಮ ನಾಯಕಿ, ತ್ಯಾಗದ ಪ್ರತಿಮೆ. ಅವರ ಮೆಚ್ಚುಗೆಯ ಪತ್ರವು ನನ್ನ ಸಾಧನೆಯ ಪರಾಕಾಷ್ಠೆ.”

ಬೆಂಗಳೂರು ಪಬ್ ಸಂಸ್ಕೃತಿಗೆ ಬಲವಂತದ ಬ್ರೇಕ್! ಬಾರ್‌ಗಳು ಏಕೆ ಮುಚ್ಚುತ್ತಿದ್ದಾರೆ? ನೋಡಿ ಕಾರಣಗಳು!

ಬೆಂಗಳೂರು: ಐಟಿ ಸಿಟಿ ಎಂದೇ ಹೆಸರುವಾಸಿಯಾದ ಬೆಂಗಳೂರು, ಉದ್ಯೋಗ ಮತ್ತು ಪಾರ್ಟಿ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ವಾರಾಂತ್ಯ ಬಂದರೆ ಸಾಕು, ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಯುವಜನತೆ ಮೋಜು-ಮಸ್ತಿ ನಡೆಸುವುದು ಸಾಮಾನ್ಯ.

ಆದರೆ ಇತ್ತೀಚೆಗೆ, ವಿಶೇಷವಾಗಿ ಕಳೆದ ಆರು ತಿಂಗಳಲ್ಲಿ, ನಗರದ ಪಬ್-ಬಾರ್ ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಪಬ್ ಸಿಟಿ ಎಂಬ ಪಟ್ಟ ಪಡೆದಿದ್ದ ಬೆಂಗಳೂರಿನಲ್ಲಿ ಇದು ತೀವ್ರ ಚರ್ಚೆಗೆ ಗುರಿಯಾಗುತ್ತಿದೆ.

ಅಬಕಾರಿ ಪರವಾನಗಿ ಶುಲ್ಕದಲ್ಲಿ ಶೇ. 50ರಷ್ಟು ಹೆಚ್ಚಳ, ಜೊತೆಗೆ ಕೋವಿಡ್ ನಂತರದ ಆರ್ಥಿಕ ಬಿಕ್ಕಟ್ಟು, ಉದ್ಯೋಗದಲ್ಲಿ ಅಸ್ಥಿರತೆ, ಮತ್ತು ಕಾರ್ಪೊರೇಟ್ ವೆಚ್ಚದಲ್ಲಿ ಕಡಿತ ಈ ಎಲ್ಲವೂ ಮದ್ಯದಂಗಡಿಗಳ ಲಾಭದಾಯಕತೆಯನ್ನು ಕೆಡಿಸಿದೆ.

ಫುಡ್ & ಬೇವರೇಜ್ (F&B) ಉದ್ಯಮದ ಮೂಲಗಳ ಪ್ರಕಾರ, ಈ ಕಾರಣಗಳಿಂದಾಗಿ ಬಹುಪಾಲು ಬಾರ್‌ಗಳು ಮುಚ್ಚಲ್ಪಟ್ಟಿವೆ, ಮತ್ತಷ್ಟು ಬಾರ್‌ಗಳು ಮುಚ್ಚುವ ಹಂತದಲ್ಲಿವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಗೋವಾ ಸರ್ಕಾರದಿಂದ ಹೊಸ ನಿಯಮ: ಕನ್ನಡಿಗರಿಗೆ ವಾಹನ ಖರೀದಿಗೆ ನಿರ್ಬಂಧ?

ಗೋವಾ: ಗೋವಾ ಸರ್ಕಾರವು ರಾಜ್ಯದಲ್ಲಿ ಇನ್ನು ಮುಂದೆ ಕನ್ನಡಿಗರು ಹಾಗೂ ಇತರ ರಾಜ್ಯದ ನಿವಾಸಿಗಳು ವಾಹನ ಖರೀದಿಸದಂತೆ ಹೊಸ ಕಾನೂನನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಹೊಸ ನಿಯಮದಡಿ, ವಾಹನ ಖರೀದಿ ಮತ್ತು ನೋಂದಣಿಗೆ ಪರವಾನಗಿ ನೀಡದಂತೆ ನಿರ್ಬಂಧ ಹೇರುವ ನಿರ್ಗಮನೆಯು ನಡೆಯುತ್ತಿದೆ.

ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಂದ ಗೋವಾಗೆ ತೆರಳಿ ಅಲ್ಲಿಯ ಉದ್ಯಮಗಳಲ್ಲಿ ತೊಡಗಿರುವ ಕನ್ನಡಿಗರ ಸಂಖ್ಯೆಯು ಗಣನೀಯವಾಗಿದ್ದು, ಬಹುತೇಕ ಕ್ಯಾಬ್, ಟ್ಯಾಕ್ಸಿ ಸೇವೆಗಳಲ್ಲಿ ಕನ್ನಡಿಗರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಕಾರಣದಿಂದ ಗೋವಾದ ಉದ್ಯೋಗಗಳು ಸ್ಥಳೀಯರಿಗೆ ಸಿಗದೆ ಕನ್ನಡಿಗರಿಗೆ ಹೋಗುತ್ತಿವೆ ಎಂಬ ಆಕ್ಷೇಪವನ್ನು ಮುಂದುವರಿಸಿ, ಸರ್ಕಾರ ಹೊಸ ನಿಯಮ ತರಲು ಉದ್ದೇಶಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಗೋವಾ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಈ ಕ್ರಮವು ಅನ್ಯರಾಜ್ಯ ನಿವಾಸಿಗಳ—ವಿಶೇಷವಾಗಿ ಕನ್ನಡಿಗರ—ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದಕ್ಕೆ ಸಂಬಂಧಿಸಿದಂತೆ ಗೋವಾ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಈ ಕ್ರಮವು ಅನ್ಯರಾಜ್ಯ ನಿವಾಸಿಗಳ—ವಿಶೇಷವಾಗಿ ಕನ್ನಡಿಗರ—ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದಕ್ಕೆ ಜೊತೆಗೆ ಈಗಾಗಲೇ ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆಗಳ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ಉಂಟುಮಾಡಿದೆ. ವಿಜಯಪುರ ಜಿಲ್ಲೆ, ಕಲಕೇರಿ ಗ್ರಾಮದ ನಿವಾಸಿ ಅನಿಲ್ ರಾಠೋಡ್ ಎಂಬ ಲಾರಿ ಚಾಲಕರ ಮೇಲೆ ಗೋವದಲ್ಲಿ ಗ್ಯಾಂಗ್‌ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಕಲ್ಲು ಸಾಗಿಸುತ್ತಿದ್ದ ಟ್ರಕ್‌ನನ್ನು ಅಡ್ಡಗಟ್ಟಿ, ಕಾರು ಮತ್ತು ಜೀಪ್‌ನಲ್ಲಿ ಬಂದ ದುಷ್ಕರ್ಮಿಗಳು ಅವನ ಮೇಲೆ ದೌರ್ಜನ್ಯ ನಡೆಸಿದ ದೃಶ್ಯಗಳನ್ನು ಅನಿಲ್‌ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

ಅನಿಲ್ ರಾಠೋಡ್ ಮಾಧ್ಯಮಗಳ ಮುಂದೆ ಮಾತನಾಡಿ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅವರ ಮನವಿಯಂತೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಗೋವಾ ಸಿಎಂ ಜೊತೆ ಮಾತನಾಡಿ ಕನ್ನಡಿಗರ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

ನರೇಂದ್ರ ಮೋದಿ ಇಂದಿರಾ ಗಾಂಧಿ ದಾಖಲೆ ಮುರಿದು ದೇಶದ ದ್ವಿತೀಯ ದೀರ್ಘಾವಧಿ ಪ್ರಧಾನಿ

ನವದೆಹಲಿ:
ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಇಂದಿರಾ ಗಾಂಧಿ ಅವರ ದಾಖಲೆ ಮುರಿದು, ದೇಶದ ದ್ವಿತೀಯ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.

ಇಂದು (ಜುಲೈ 25, 2025) ಮೋದಿಯವರು ಪ್ರಧಾನಿಯಾಗಿ 4,078 ದಿನಗಳನ್ನು ಪೂರ್ಣಗೊಳಿಸಿದ್ದಾರೆ, ಇದು ಇಂದಿರಾ ಗಾಂಧಿಯವರ 4,077 ದಿನಗಳ ಪ್ರಧಾನಮಂತ್ರಿ ಪಟ್ಟಿಗಿಂತ ಒಂದು ದಿನ ಹೆಚ್ಚು. ಇಂದಿರಾ ಗಾಂಧಿ ಅವರು 1966ರ ಜನವರಿ 24ರಿಂದ 1977ರ ಮಾರ್ಚ್ 24ರ ವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

ದೇಶದ ಅತಿ ದೀರ್ಘಾವಧಿ ಪ್ರಧಾನಿಯಾಗಿರುವ ದಾಖಲೆ ಈಗಲೂ ಪಂಡಿತ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿ ಉಳಿದಿದ್ದು, ಅವರು 1947ರ ಆಗಸ್ಟ್ 15ರಿಂದ 1964ರ ಮೇ 27ರ ತನಕ, ಅಂದರೆ 16 ವರ್ಷ 286 ದಿನಗಳ ಕಾಲ, ಪ್ರಧಾನಿಯಾಗಿ ಇದ್ದರು.

ಮೋದಿ ಅವರು ಈಗಾಗಲೇ, ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿ, ನೆಹರೂ ಅವರ ಮತ್ತೊಂದು ದಾಖಲೆ ಸರಿಗಟ್ಟಿದ್ದಾರೆ. 2014ರಲ್ಲಿ ಪ್ರಧಾನಿ ಪಟ್ಟಕ್ಕೆ ಏರಿದ ಮೋದಿ, ಸ್ವಾತಂತ್ರ್ಯ ನಂತರ ಜನಿಸಿದ ಮೊದಲ ಪ್ರಧಾನಿಯೂ ಹೌದು.

ಇಲ್ಲದೆ, ಅವರು ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ನಾಯಕ ಆಗಿರುವುದು ಕೂಡ ವಿಶಿಷ್ಟ. ಎರಡು ಅವಧಿಗಳನ್ನು ಪೂರ್ಣಗೊಳಿಸಿ, ಮೂರನೇ ಅವಧಿಯಲ್ಲಿ ಸೇವೆ ಸಲ್ಲಿಸುತ್ತಿರುವ ಏಕೈಕ ಕಾಂಗ್ರೆಸ್ಸೇತರ ನಾಯಕ ಎಂಬ ದಾಖಲೆ ಅವರ ಹೆಸರಿನಲ್ಲಿ ಲಭ್ಯವಿದೆ.

ಇನ್ನು ಚುನಾವಣಾ ಸಾಧನೆಗಳತ್ತ ಗಮನ ಹರಿಸಿದರೆ, ಮೋದಿ ಅವರು 2002, 2007, 2012ರ ಗುಜರಾತ್ ವಿಧಾನಸಭಾ ಚುನಾವಣೆಗಳು ಹಾಗೂ 2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಜಯ ಸಾಧಿಸಿದ್ದಾರೆ. ಈ ಮೂಲಕ, ಸತತ ಆರು ಚುನಾವಣಾ ಗೆಲುವು ದಾಖಲಿಸಿದ ಏಕೈಕ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಭಜನ – ಪ್ರವಚನ – ಸಂಕೀರ್ತನ 

ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಹೊಸಕೆರೆಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜುಲೈ 29 ರಿಂದ ಆಗಸ್ಟ್ 1ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ (ಸಂಜೆ 6 ರಿಂದ 7) : ಜುಲೈ 29- ಚಂದ್ರಿಕಾ ಭಜನಾ ಮಂಡಳಿ, ಜುಲೈ 30-ಶೃತಿ ಭಜನಾ ಮಂಡಳಿ, ಜುಲೈ 31-ಅಲಕನಂದ ಭಜನಾ ಮಂಡಳಿ.
ಪ್ರವಚನ ಕಾರ್ಯಕ್ರಮ (ಪ್ರತಿದಿನ ಸಂಜೆ 7 ರಿಂದ 8) : ಜುಲೈ 29 ರಿಂದ 31ರ ವರೆಗೆ ಮ||ಶಾ||ಸಂ|| ಹೊಳವನಹಳ್ಳಿ ಶ್ರೀನಿವಾಸಾಚಾರ್ಯರಿಂದ “ಶ್ರೀ ಗುರುಸಾರ್ವಭೌಮರ ವೈಭವ” ವಿಷಯವಾಗಿ ಧಾರ್ಮಿಕ ಪ್ರವಚನ.
ಹರಿನಾಮ ಸಂಕೀರ್ತನೆ : ಆಗಸ್ಟ್ 1, ಶುಕ್ರವಾರ, ಸಂಜೆ 6-30 ರಿಂದ 8-00
ವಿದುಷಿ ಶ್ರೀಮತಿ ಅನುಷಾ ರಾಘವೇಂದ್ರ ಮತ್ತು ಸಂಗಡಿಗರಿಂದ “ಹರಿನಾಮ ಸಂಕೀರ್ತನೆ” ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ.