Home Blog Page 40

ಜುಲೈ 29ರಂದು ನಾಗರಪಂಚಮಿ ನಿಮಿತ್ತ ವಿಶೇಷ ಲೇಖನ !

ತಿಥಿ : ಶ್ರಾವಣ ಶುಕ್ಲ ಪಂಚಮಿ
ಇತಿಹಾಸ : ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನವು ಪಂಚಮಿಯಾಗಿತ್ತು.
ನಾಗರಪಂಚಮಿ – ಸಾತ್ತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ
ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು – ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ.’ ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ. ಸ್ಥೂಲ ದೇಹವು ಪ್ರಾಣಹೀನವಾಗಿದೆ ಮತ್ತು ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ.
ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವ
೫ ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕನಿಷ್ಠ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ.
ನಾಗನ ಪೂಜೆ ಮಾಡುವುದರ ಹಿಂದಿನ ಶಾಸ್ತ್ರ
ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.
ನಾಗನ ಮಹಾತ್ಮೆ
೧. ‘ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ವಜ್ರವಿದೆ. ಅವನು ಶ್ರೀವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಶಯನ ಮಾಡುತ್ತಾನೆ. ತ್ರೇತಾಯುಗದಲ್ಲಿ ಶ್ರೀವಿಷ್ಣು ರಾಮನ ಅವತಾರವನ್ನು ತೆಗೆದುಕೊಂಡಾಗ ಶೇಷನು ಲಕ್ಷ್ಮಣನ ಅವತಾರವನ್ನು ತೆಗೆದುಕೊಂಡಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು.
೨. ‘ಶ್ರೀಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಲಿಯಾ ನಾಗನನ್ನು ಮರ್ದನ ಮಾಡಿದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು.
೩. ‘ನಾಗಗಳಲ್ಲಿನ ಶ್ರೇಷ್ಠನಾದ ‘ಅನಂತ’ನೇ ನಾನು’, ಎಂದು ಗೀತೆಯಲ್ಲಿ (೧೦.೨೯) ಶ್ರೀಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ.
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್|
ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ||
ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯವಿರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.’
ಪೂಜೆ
ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಸೂಕ್ಷ್ಮಾತಿಸೂಕ್ಷ್ಮ ದೈವೀ ಕಣಗಳು (ಚೈತನ್ಯಕಣಗಳು).
ನಿಷೇಧ: ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು, ಒಲೆಯ ಮೇಲೆ ತವೆಯನ್ನು ಇಡಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯಬಾರದು.
(ಆಧಾರ : http://www.sanatan.org )
ಸಂಕಲನ – ಶ್ರೀ. ವಿನೋದ ಕಾಮತ, ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ.
ಸಂಪರ್ಕ – 9342599299

ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ

ಬೆಂಗಳೂರು, ಜುಲೈ 26 : ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರ ತನಗೆ ಬೇಕಾದಂತೆ ಬೆಂಗಳೂರನ್ನು ವಿಭಜನೆ ಮಾಡಿದೆ. ಇದನ್ನು ವಿರೋಧಿಸಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರನ್ನು ಅತಂತ್ರವಾಗಿ ಐದು ಭಾಗ ಮಾಡಲಾಗಿದೆ. ರಾಜಕೀಯ ದೃಷ್ಟಿಯಿಂದ ಹಾಗೂ ಕಾಂಗ್ರೆಸ್‌ ಗೆಲ್ಲಬೇಕೆಂಬ ಗುರಿಯಿಂದ ವಿಭಜನೆ ಮಾಡಲಾಗಿದೆ. ಐದು ಪಾಲಿಕೆಗಳ ನಡುವೆ ತಾರತಮ್ಯ ಉಂಟಾಗಲಿದೆ. ಇದರ ವಿರುದ್ಧ ಕೋರ್ಟ್‌ ಮೊರೆ ಹೋಗಿ ಹೋರಾಟ ಮಾಡಲಾಗುವುದು. ಬೆಂಗಳೂರನ್ನು ಒಡೆಯಿರಿ ಎಂದು ಜನರು ಕೇಳಿಲ್ಲ. ಈಗಾಗಲೇ ನಗರದಲ್ಲಿ ತೆರಿಗೆ, ಸೆಸ್‌, ಇ ಖಾತಾದಿಂದ ಸಮಸ್ಯೆ ಉಂಟುಮಾಡಿದ್ದಾರೆ. ಇಂತಹ ಸಮಯದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತವಾಗಿದೆ. ಅದನ್ನು ತಪ್ಪಿಸಲು ಹೀಗೆ ಭಾಗ ಮಾಡಿದ್ದಾರೆ ಎಂದರು.

ಕಪ್ಪು ಪಟ್ಟಿಯಲ್ಲಿರುವ ಗುತ್ತಿಗೆದಾರರಿಗೆ ಸುರಂಗ ರಸ್ತೆ ಯೋಜನೆಯನ್ನು ನೀಡಲಾಗುತ್ತಿದೆ. ಸುರಂಗ ರಸ್ತೆಗೆ ಟೋಲ್‌ ಕೂಡ ಇರುವುದರಿಂದ ಶ್ರೀಮಂತರು ಮಾತ್ರ ಇದನ್ನು ಬಳಸಬಹುದು. ಜನಸಾಮಾನ್ಯರಿಗೆ ಇದರಿಂದ ಪ್ರಯೋಜನವಿಲ್ಲ. ಅಭಿವೃದ್ಧಿಗೆ ನಮ್ಮ ಸಹಕಾರವಿದೆ. ಆದರೆ ದುಡ್ಡು ಕೊಳ್ಳೆ ಹೊಡೆಯುವ ಯೋಜನೆಗಳನ್ನು ವಿರೋಧಿಸುತ್ತೇವೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಭೂಕಂಪದ ನಾಡು ಮಾಡಬಾರದು ಎಂದರು.

ಹೆಬ್ಬಾಳ ಮೇಲ್ಸೇತುವೆ ಬಳಿಯ ಜಂಕ್ಷನ್‌ಗೆ ಎಲ್ಲ ಕಡೆಯಿಂದ ವಾಹನಗಳು ಬರುತ್ತವೆ. ಅಂತಹ ಜಾಗವನ್ನು ಖಾಸಗಿ ಭೂ ಮಾಲೀಕರಿಗೆ ನೀಡಲು ಸರ್ಕಾರ ಮುಂದಾಗಿದೆ. ಇದನ್ನು ವಿರೋಧಿಸಿ ಸದನದಲ್ಲಿ ಚರ್ಚಿಸಲಾಗುವುದು. ಇ ಖಾತಾ ವಿಚಾರದಲ್ಲಿ ಜನರಿಗೆ ತೊಂದರೆ ನೀಡಲಾಗುತ್ತಿದೆ. ಹಣ ಲೂಟಿ ಮಾಡಲು ಬೆಂಗಳೂರನ್ನು ಬಳಸಬಾರದು ಎಂದರು.

ಕಾಂಗ್ರೆಸ್‌ ಸರ್ಕಾರ ಬೆಂಗಳೂರನ್ನು ಹೋಳು ಮಾಡುತ್ತಿದೆ. ಎಲ್ಲೆಡೆ ಟ್ರಾಫಿಕ್‌ ಹಾಗೂ ಕಸದ ಸಮಸ್ಯೆ ಕಾಣುತ್ತಿದೆ. ಹೋಳು ಮಾಡುವುದರಿಂದ ಅಭಿವೃದ್ಧಿಯಾಗುವುದಿಲ್ಲ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು. ಅನುದಾನವಿಲ್ಲದೆ ಅಭಿವೃದ್ಧಿ ಶೂನ್ಯವಾಗಿದೆ. ಹೊಸ ಪಾಲಿಕೆಗಳ ರಚನೆಯಿಂದ ಬೆಂಗಳೂರು ಜನರ ಹೃದಯ ಚೂರಾಗಲಿದೆ. ಇದರ ವಿರುದ್ಧ ಹೋರಾಟ ಮಾಡಲು ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಹಳೆ ಮೈಸೂರು ಭಾಗಕ್ಕೆ ನೀಡಿದ ಕೊಡುಗೆಯನ್ನು ನಾವು ಸ್ಮರಿಸಬೇಕು. ಕೆಆರ್‌ಎಸ್‌ ಜಲಾಶಯದಿಂದಾಗಿ ಜನರಿಗೆ ಜೀವಜಲ ದೊರೆತಿದೆ. ಅವರ ಸಾಧನೆಗಳಿಂದಾಗಿ ಜನರು ಅನ್ನ ತಿನ್ನುತ್ತಿದ್ದಾರೆ. ಸೋಪ್‌ ಫ್ಯಾಕ್ಟರಿ, ವಿಶ್ವವಿದ್ಯಾಲಯಗಳ ನಿರ್ಮಾಣ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದವರೇ ಅವರು. ಚಿನ್ನಾಭರಣ ಅಡವಿಟ್ಟು ಜಲಾಶಯ ನಿರ್ಮಿಸಿದವರಿಗೂ, ಮುಡಾದಲ್ಲಿ 14 ಸೈಟುಗಳನ್ನು ಕೊಳ್ಳೆ ಹೊಡೆದವರಿಗೂ ಹೋಲಿಕೆ ಮಾಡಬಾರದು. ಯತೀಂದ್ರ ಸಿದ್ದರಾಮಯ್ಯ ಮಹಾರಾಜರ ಕುಟುಂಬಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದರು.

ಹುಲಿಗಳು ಸಾಯುವುದನ್ನು ನೋಡಿದರೆ ಅರಣ್ಯ ಇಲಾಖೆ ಸತ್ತುಹೋಗಿದೆ ಎಂದೆನಿಸುತ್ತದೆ. ಈ ನಡುವೆ ಗೋವುಗಳನ್ನು ಅರಣ್ಯದಲ್ಲಿ ಮೇಯಿಸುವಂತಿಲ್ಲ ಎಂಬ ಆದೇಶ ನೀಡಲಾಗಿದೆ. ಇಂತಹ ಕ್ರಮ ಒಳ್ಳೆಯದಲ್ಲ ಎಂದರು.

136 ಸೀಟುಗಳನ್ನು ಗೆದ್ದಿರುವ ಬಗ್ಗೆ ನಮಗೂ ಅನುಮಾನವಿದೆ ಎಂದು ನಾವು ಹೇಳಬಹುದು. ಚುನಾವಣೆಯಲ್ಲಿ ಸೋತಾಗ ಸಾಕ್ಷಿ ಕೇಳುತ್ತಾರೆ. ಭಯೋತ್ಪಾದಕರ ಮೇಲೆ ದಾಳಿ ಮಾಡಿದಾಗಲೂ ಹೀಗೆ ಸಾಕ್ಷಿ ಕೇಳಿದ್ದರು ಎಂದರು.

ಶಿಕ್ಷಕರು ರಾಷ್ಟ್ರ ನಿರ್ಮಾಣದ ಶಿಲ್ಪಿಗಳು: ರಾಜ್ಯಪಾಲರು  ರಾಜ್ಯಪಾಲರಿಂದ “ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ” 

ಮೂಡಬಿದರೆ 26.07.2025: “ದೀಪವು ತನ್ನ ಬೆಳಕಿನಿಂದ ಕತ್ತಲೆಯನ್ನು ಹೋಗಲಾಡಿಸುವಂತೆಯೇ, ಶಿಕ್ಷಕರು ಸಹ ಜ್ಞಾನ, ಮೌಲ್ಯಗಳು ಮತ್ತು ವಿಚಾರಗಳ ಬೆಳಕನ್ನು ಹರಡುವ ಮೂಲಕ ಸಮಾಜವನ್ನು ಬೆಳಗಿಸುತ್ತಾರೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಆಯೋಜಿಸಿದ್ದ ಪ್ರೇರಣಾ ದಿವಸ ಹಾಗೂ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “
ಶಿಕ್ಷಕರು ಜ್ಞಾನ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಸೃಷ್ಟಿಸುವ ಸಮಾಜದ ಆಧಾರಸ್ತಂಭಗಳು. ಜ್ಞಾನದ ಜೊತೆಗೆ, ಅವರು ವಿದ್ಯಾರ್ಥಿಗಳ ಜೀವನಕ್ಕೆ ನಿರ್ದೇಶನ, ದೃಷ್ಟಿ ಮತ್ತು ಉದ್ದೇಶವನ್ನು ಸಹ ಒದಗಿಸುತ್ತಾರೆ” ಎಂದರು.
“ಗುರು-ಶಿಷ್ಯ ಸಂಪ್ರದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಆಧಾರವಾಗಿದೆ, ಅಲ್ಲಿ ಶಿಕ್ಷಕರನ್ನು “ಗುರು ಬ್ರಹ್ಮ, ಗುರು ವಿಷ್ಣು…” ಎಂದು ವಿವರಿಸಲಾಗಿದೆ. ಆಚಾರ್ಯ ಚಾಣಕ್ಯರಾಗಿರಲಿ ಅಥವಾ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರಂತಹ ಆಧುನಿಕ ಶಿಕ್ಷಣ ತಜ್ಞರಾಗಿರಲಿ, ಅವರೆಲ್ಲರೂ ಶಿಕ್ಷಕರು ಜ್ಞಾನವನ್ನು ನೀಡುವುದರ ಜೊತೆಗೆ ಸಮಾಜದ ಸೃಷ್ಟಿಕರ್ತ ಕೂಡ ಎಂದು ಸಾಬೀತುಪಡಿಸಿದ್ದಾರೆ. ಶಿಕ್ಷಕರು ರಾಷ್ಟ್ರ ನಿರ್ಮಾಣದ ಶಿಲ್ಪಿಗಳು. ಇಂದಿನ ಸಮಾಜದಲ್ಲಿ ನಾವು ನೈತಿಕ ಬಿಕ್ಕಟ್ಟುಗಳು, ತಾಂತ್ರಿಕ ಬದಲಾವಣೆಗಳು ಮತ್ತು ಜಾಗತಿಕ ಸವಾಲುಗಳಿಂದ ಸುತ್ತುವರೆದಿದ್ದೇವೆ, ಶಿಕ್ಷಕರು ನಾವೀನ್ಯತೆ, ಬುದ್ಧಿವಂತಿಕೆ ಮತ್ತು ನೈತಿಕತೆಯ ಅಡಿಪಾಯವನ್ನು ಹಾಕುವ ಅಡಿಪಾಯವಾಗಿದ್ದಾರೆ” ಎಂದು ಹೇಳಿದರು.
“ಪ್ರಸ್ತುತ ಕಾಲದಲ್ಲಿ, ತಾಂತ್ರಿಕ ಕ್ರಾಂತಿ, ಕೃತಕ ಬುದ್ಧಿಮತ್ತೆ ಮತ್ತು ಜಾಗತಿಕ ಸ್ಪರ್ಧೆಯು ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಕನ್ನು ನೀಡಿವೆ, ಅಂತಹ ಪರಿಸ್ಥಿತಿಯಲ್ಲಿ ಶಿಕ್ಷಕರ ಪಾತ್ರವು ಇನ್ನಷ್ಟು ಮುಖ್ಯವಾಗುತ್ತದೆ. ಶಿಕ್ಷಕರ ಸಮರ್ಪಣೆ ಮತ್ತು ನಾವೀನ್ಯತೆಯಿಂದ ನಮ್ಮ ಶಿಕ್ಷಣ ವ್ಯವಸ್ಥೆಯು ಹೊಸ ಎತ್ತರವನ್ನು ಸಾಧಿಸುತ್ತಿದೆ. “ಪದಗಳಿಗಿಂತ ಕ್ರಿಯೆಗಳು ಜೋರಾಗಿ ಮಾತನಾಡುತ್ತವೆ.” ನಮ್ಮ ಶಿಕ್ಷಕರು ತರಗತಿಗೆ ಸಮಯಕ್ಕೆ ಸರಿಯಾಗಿ ಬಂದಾಗ, ವಿದ್ಯಾರ್ಥಿಯ ಪ್ರತಿಭೆಯನ್ನು ಪೋಷಿಸಿದಾಗ ಅಥವಾ ತಮ್ಮ ವೈಯಕ್ತಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಸರಳತೆಯಿಂದ ಬದುಕಿದಾಗ ಸ್ಫೂರ್ತಿಯ ನಿಜವಾದ ಅರ್ಥವನ್ನು ಸಾಕಾರಗೊಳಿಸುತ್ತಾರೆ” ಎಂದು ತಿಳಿಸಿದರು.
“ಶಿಕ್ಷಕರ ಘನತೆಯನ್ನು ಕಾಪಾಡಿಕೊಳ್ಳುವಲ್ಲಿ, ನೀತಿ ನಿರೂಪಣೆಯಲ್ಲಿ ಭಾಗವಹಿಸುವಲ್ಲಿ ಮತ್ತು ಶಿಕ್ಷಣದ ಗುಣಮಟ್ಟವನ್ನು ಖಾತ್ರಿಪಡಿಸುವಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘವು ನೀಡಿದ ಕೊಡುಗೆ ಅನುಕರಣೀಯವಾಗಿದೆ. ಈ ಸಂಘವು ವರ್ಷಗಳಿಂದ ಶಿಕ್ಷಣವನ್ನು ಕ್ರಿಯೆಯೊಂದಿಗೆ ಸಂಪರ್ಕಿಸುವ ಸ್ಫೂರ್ತಿಯನ್ನು ಶಿಕ್ಷಣ ಸಂಸ್ಥೆಗಳಲ್ಲಿ ತುಂಬುತ್ತಿರುವುದು ಪ್ರಶಂಶನೀಯ” ಎಂದು ಶ್ಲಾಘಿಸಿದರು.
“ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಅತ್ಯುತ್ತಮ ಶಿಕ್ಷಕರಿಗೆ “ಅಧ್ಯಾಪಕ ಭೂಷಣ” ಪ್ರಶಸ್ತಿ ಮತ್ತು ಶಿಕ್ಷಣ ಕ್ಷೇತ್ರದ ಗಣ್ಯ ವ್ಯಕ್ತಿಗಳಿಗೆ “ಜೀವಮಾನ ಸಾಧನೆ ಪ್ರಶಸ್ತಿ” ನೀಡಿ ಗೌರವಿಸಿದ್ದಕ್ಕಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು.
” ‘ಅಧ್ಯಾಪಕ ಭೂಷಣ’ ಮತ್ತು ‘ಜೀವಮಾನ ಸಾಧನೆ ಪ್ರಶಸ್ತಿ’ ಯಿಂದ ಗೌರವಿಸಲ್ಪಟ್ಟ ಎಲ್ಲಾ ಗಣ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಒದಗಿಸುವ ಮೂಲಕ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಸಾಧಕರು ಅಮೂಲ್ಯ ಕೊಡುಗೆಯನ್ನು ನೀಡುವುದನ್ನು ಮುಂದುವರಿಸಬೇಕು. ನೀವೆಲ್ಲರೂ ಶಿಕ್ಷಣ ಪ್ರಪಂಚದ ದಾರಿದೀಪಗಳು. ಮುಂಬರುವ ಪೀಳಿಗೆಗೆ ನೀವು ಈ ರೀತಿ ದಾರಿ ಮಾಡಿಕೊಡುವುದನ್ನು ಮುಂದುವರಿಸಬೇಕೆಂದು ಮನವಿ ಮಾಡಿದ ಅವರು, ಪ್ರೇರಣಾ ದಿವಸದಂದು ನಾವೆಲ್ಲರೂ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮೌಲ್ಯಾಧಾರಿತ, ವಿದ್ಯಾರ್ಥಿ ಕೇಂದ್ರಿತ ಮತ್ತು ನವೀನವಾಗಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ, ಪ್ರೇರಣಾ ದಿವಸ್ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ವಿವೇಕ್ ಎಂ ಆಳ್ವ ಮುಂತಾದ ಗಣ್ಯರು ಉಪಸ್ಥಿತರಿದ್ದರು.

‘ವೀರಗಲ್ಲು’ ಏಕಶಿಲೆ ಸ್ತಂಭ ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಇಡೀ ದೇಶದಲ್ಲಿ ಹುತಾತ್ಮ ಯೋಧರಿಗೆ ರಾಷ್ಟ್ರೀಯ ಸೈನಿಕ ಸ್ಮಾರಕ ನಿರ್ಮಿಸಿರುವ ಏಕೈಕ ರಾಜ್ಯ ಕರ್ನಾಟಕವಾಗಿದ್ದು, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಮತ್ತು ಗೌರವ ಸಲ್ಲಿಸಲು ನಿರ್ಮಾಣವಾಗಿರುವ 75 ಅಡಿ ಎತ್ತರ ಸುಮಾರು 400 ಟನ್ ತೂಕವುಳ್ಳ, ಭಾರತೀಯ ಸೇನೆಯ ವೀರರಂತೆಯೇ ಅಚಲ, ಧೃಡ, ಅಮರ ಮತ್ತು ಎಲ್ಲ ನೈಸರ್ಗಿಕ ತಾಪಗಳನ್ನು ತಡೆದುಕೊಳ್ಳಬಲ್ಲ ಶಕ್ತಿಶಾಲಿ ಏಕಶಿಲೆಯ ಸ್ತಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

ಸೈನಿಕ ಮತ್ತು ಪುನರ್ವಸತಿ ಇಲಾಖೆ ಹಾಗೂ ರಾಷ್ಟ್ರೀಯ ಸೈನಿಕ್ ಸ್ಮಾರಕ ಮ್ಯಾನೇಜ್ ಮೆಂಟ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೇಶದ ಹೆಮ್ಮೆಯ ಸೈನಿಕರ ತ್ಯಾಗ – ಬಲಿದಾನದ ಸಂಕೇತವಾದ ವೀರಗಲ್ಲನ್ನು ಲೋಕಾರ್ಪಣೆಗೊಳಿಸಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿರುವವರು ಈಗ 91 ವಸಂತಗಳನ್ನು ಪೂರೈಸಿರುವ ಮಾಜಿ ಸೇನಾಧಿಕಾರಿ ಏರ್ ಕಮೊಡೊರ್ ಎಂ.ಕೆ. ಚಂದ್ರಶೇಖರ್ ಹಾಗೂ ವೀರಗಲ್ಲನ್ನು ತಯಾರು ಮಾಡಿದ ಶಿಲ್ಪಿ ಅಶೋಕ್ ಗುಡಿಗಾರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ, ವಸತಿ ಮತ್ತು ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಜಮೀರ್ ಅಹ್ಮದ್ ಖಾನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ನಿರೀಕ್ಷಕರಾದ ಡಾ.ಎಂ.ಎ.ಸಲೀಂ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ತುಷಾರ್ ಗಿರಿನಾಥ್ ಸೇರಿದಂತೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸೈನಿಕರಿಗಾಗಿ ಉಚಿತ ಕಾನೂನು ಸೇವೆಗಳ ಕ್ಲಿನಿಕ್ ಉದ್ಘಾಟನೆ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಾಗೂ ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದÀ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ರಾಜ್ಯ ಮಂಡಳಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಹೊಸ ಯೋಜನೆಯಾದ “ವೀರ ಪರಿವಾರ ಸಹಾಯತಾ ಯೋಜನೆ-2025 ಹಾಗೂ ಉಚಿತ ಕಾನೂನು ಸೇವೆಗಳ ಕ್ಲಿನಿಕ್ ಅನ್ನು ಸರ್ವೋಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರು ಹಾಗೂ ನವದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಸೂರ್ಯ ಕಾಂತ್ ಅವರು ವರ್ಚುಯಲ್ ಮೂಲಕ ಉದ್ಘಾಟಿಸಿದರು.

ವರ್ಚುಯಲ್ ಮೂಲಕ ಸರ್ವೋಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಸೂರ್ಯ ಕಾಂತ್ ಅವರು ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಜರುಗಿದ ಪ್ರಾದೇಶಿಕ ಸಮ್ಮೇಳನದ ಅಂಗವಾಗಿ ರಕ್ಷಣಾ ಸಿಬ್ಬಂದಿಗಳಿಗೆ, ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಮತ್ತು ಪರಿಣಾಮಕಾರಿ ಕಾನೂನು ಸೇವೆಯನ್ನು ಒದಗಿಸುವ ಸಲುವಾಗಿ ಈ ಹೊಸ ಯೋಜನೆಯನ್ನು ದೇಶದಾದ್ಯಂತ ಜಾರಿಗೆ ತರಲು ರೂಪಿಸಲಾಗಿದೆ ಎಂದರು.

ಬೆಂಗಳೂರಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ರಾಜ್ಯ ಸೈನಿಕ ಮಂಡಳಿಯಲ್ಲಿ ಉಚ್ಛ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವಿಭು ಬಕ್ರು ಅವರು ಸಾಂಕೇತಿಕವಾಗಿ ಉಚಿತ ಕಾನೂನು ಸೇವೆಗಳ ಕ್ಲಿನಿಕ್ ಅನ್ನು ಉದ್ಘಾಟಿಸಿದರು. ಈ ಸೇವೆಯು ರಕ್ಷಣಾ ಸಿಬ್ಬಂದಿ, ಮಾಜಿ ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಕಾನೂನು ಸೇವೆ ಒದಗಿಸುವುದು ಈ ಕ್ಲಿನಿಕ್ ನ ಮುಖ್ಯ ಉದ್ದೇಶವಾಗಿದೆ.

ಈ ಸಂದರ್ಭದಲ್ಲಿ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀಮತಿ ಅನು ಶಿವರಾಮನ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್. ಶಶಿಧರ ಶೆಟ್ಟಿ, ಕರ್ನಾಕ ರಾಜ್ಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಪ್ರಭಾರ ನಿರ್ದೇಶಕರಾದ ಫೈಟ್ ಲೆಫ್ಟಿನೆಂಟ್ ಎಂ.ಎಸ್. ಲೋಲಾಕ್ಷ ಅಧಿಕಾರಿಗಳು, ಮಾಜಿ ಸೈನಿಕರು ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಕಲಾಸಿಪಾಳ್ಯ ಬಸ್ ನಿಲ್ದಾಣ ಮರು ನಾಮಕರಣ “ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ”

ಬೆಂಗಳೂರು, ಜುಲೈ 26 (ಕರ್ನಾಟಕ ವಾರ್ತೆ):  ಸಮಾಜಕ್ಕೆ ಶ್ರೀ ದೊಡ್ಡಣ್ಣ ಶೆಟ್ಟರು ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಕೊಡುಗೆಯನ್ನು ಪರಿಗಣಿಸಿ, ಕಲಾಸಿಪಾಳ್ಯದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣಕ್ಕೆ “ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ” ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ “ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ” ಎಂದು ಮರುನಾಮಕರಣಗೊಳಿಸುವ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಡರ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆಯನ್ನು 1906ರಲ್ಲಿಯೇ ಸ್ಥಾಪಿಸಿ, ಸಮಾಜದಲ್ಲಿನ ಬಡವರು, ಹಿಂದುಳಿದವರು ಎಂಬ ಭೇದ-ಭಾವವಿಲ್ಲದೇ ಸರ್ವ ಜನಾಂಗಕ್ಕೂ ಸಮಾನ ಶಿಕ್ಷಣವನ್ನು ನೀಡಬೇಕೆಂಬ ದೂರದೃಷ್ಟಿಯನ್ನು ಇಟ್ಟುಕೊಂಡು, ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದರು.

ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ವರ್ಷದಲ್ಲಿ ಎರಡು ಬಾರಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸುತ್ತಿದ್ದು, ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಹೆಸರಿನಲ್ಲೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲು ತೋಟಗಾರಿಕೆ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಬೆಂಗಳೂರು ನಗರ ಹಾಗೂ ಹೊರ ವಲಯದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುಲಭ, ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರತಿದಿನ ಹವಾನಿಯಂತ್ರಿತ ಸಾರಿಗೆಗಳನ್ನು ಒಳಗೊಂಡಂತೆ 1,795 ಮಾರ್ಗಗಳಲ್ಲಿ 6,187 ಅನುಸೂಚಿಗಳನ್ನು 64,975 ಸುತ್ತುವಳಿಗಳೊಂದಿಗೆ 12.79 ಲಕ್ಷ ಕಿ.ಮೀ.ಗಳಲ್ಲಿ ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ದಟ್ಟಣೆ, ಅವಶ್ಯಕತೆಗನುಗುಣವಾಗಿ ಕಾರ್ಯಾಚರಣೆ ಮಾಡುತ್ತಿದ್ದು, ಸರಾಸರಿ 42 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ ಎಂದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 25 ಕಿ.ಮೀ.ವರೆಗೆ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದ್ದು, ನಗರದ ಕೇಂದ್ರ ಭಾಗದಿಂದ ಸುಮಾರು 50.0 ಕಿ.ಮೀ ವ್ಯಾಪ್ತಿಯಲ್ಲಿ ಸಾರಿಗೆ ಸೇವೆಯನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತಿದೆ.
ಸಂಸ್ಥೆಯು ಸತತವಾಗಿ ನಾಲ್ಕು ವರ್ಷಗಳಿಂದ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸುತ್ತಿದ್ದು, ಇಲ್ಲಿಯವರೆಗೆ 1473 ಎಲೆಕ್ಟ್ರಿಕ್ ಬಸ್ಸುಗಳು ಕಾರ್ಯಾಚರಣೆಗೆ ನಿಯೋಜಿಸಲಾಗಿರುತ್ತದೆ. ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ 400 ಹವಾನಿಯಂತ್ರಿತ ಹಾಗೂ 4100 ಸಾಮಾನ್ಯ ಹವಾನಿಯಂತ್ರಣರಹಿತ ಎಲೆಕ್ಟ್ರಿಕ್ ಬಸ್ಸುಗಳನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಕಲಾಸಿಪಾಳ್ಯ ಬಸ್ ನಿಲ್ದಾಣ ಮಾಹಿತಿ:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 04 ಪ್ರಮುಖ ಬಸ್ ನಿಲ್ದಾಣಗಳು, 10 ಟಿ.ಟಿ.ಎಂ.ಸಿ ಗಳನ್ನು ಮತ್ತು 36 ಮಧ್ಯಮ, ಸಣ್ಣ ಬಸ್ ನಿಲ್ದಾಣಗಳನ್ನು ಹೊಂದಿದೆ. ಈ ಬಸ್ ನಿಲ್ದಾಣಗಳ ಪೈಕಿ ಒಂದಾದ ಕಲಾಸಿಪಾಳ್ಯದಲ್ಲಿ ಸುಸಜ್ಜಿತ, ಮೂಲಭೂತ ಸೌಕರ್ಯಗಳನ್ನು ಒಳಗೊಂಡ ನೂತನ ಬಸ್ ನಿಲ್ದಾಣವನ್ನು ನಾಗರೀಕರ ಬಳಕೆಗೆ 2023 ರ ಮಾರ್ಚ್ 10 ರಂದು ಸಮರ್ಪಿಸಲಾಗಿದೆ. ಬಸ್ ನಿಲ್ದಾಣದಲ್ಲಿ 07 ಬಸ್-ಬೇ, ಪ್ರತಿ ಬಸ್-ಬೇಯಲ್ಲಿ 6 ಪ್ಲಾಟ್ ಫಾರಂಗಳು, ವಾಣಿಜ್ಯ ಮಳಿಗೆಗಳು, ಕುಡಿಯುವ ನೀರು, ಶೌಚಾಲಯಗಳು, ದ್ವಿಚಕ್ರ ಹಾಗೂ ಕಾರುಗಳ ನಿಲುಗಡೆಗೆ ಸ್ಥಳಾವಕಾಶದ ಸೌಲಭ್ಯಗಳನ್ನು ಹೊಂದಿದೆ.

ಪ್ರಸ್ತುತ, ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ 671 ಅನುಸೂಚಿಗಳಲ್ಲಿ 2004 ಸುತ್ತುವಳಿಗಳನ್ನು ಹಾಗೂ ಚಂದ್ರಭವನನಿಂದ 505 ಅನುಸೂಚಿಗಳಲ್ಲಿ 1217 ಸುತ್ತುವಳಿಗಳನ್ನು ಒಟ್ಟಾರೆಯಾಗಿ ಕೃಷ್ಣ ರಾಜ ಮಾರುಕಟ್ಟೆಯಿಂದ ಒಟ್ಟು 1176 ಅನುಸೂಚಿಗಳಲ್ಲಿ 3221 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತಿದೆ.

ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ 62,374 ಚದರ ಅಡಿ ವಾಣಿಜ್ಯ ಜಾಗ ಹಾಗೂ 52,180 ಚದರ ಅಡಿ ಪಾಕಿರ್ಂಗ್ ಜಾಗ ಸೇರಿ ಒಟ್ಟು 1,14,914 ಚದರ ಅಡಿ ವಾಣಿಜ್ಯ ಜಾಗವಿರುತ್ತದೆ. ನಿಲ್ದಾಣದಲ್ಲಿನ ವಾಣಿಜ್ಯ, ಕಛೇರಿ ಜಾಗವನ್ನು ಪರವಾನಗಿ ಆಧಾರದಲ್ಲಿ ಹಂಚಿಕೆ ಪಡೆಯುವಂತೆ ವಿವಿಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಈ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಜಾಗಗಳಿಂದ ಮಾಸಿಕ ಅಂದಾಜು ರೂ.42,88,497/- ಸಾರಿಗೇತರ ಆದಾಯ ನಿರೀಕ್ಷಿಸಲಾಗಿದ್ದು, ಪ್ರಸ್ತುತ ಮಾಸಿಕ ರೂ.2,52,074/- ಆದಾಯ ಗಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ವೈಶ್ಯ ಸಮುದಾಯದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಚೆಕ್ ನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹಾಗೂ ಸಮುದಾಯದ ಮುಖಂಡರು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿ, ದಕ್ಷಿಣ ಕನ್ನಡ ಜಿಲ್ಲಾ ಶಾಖೆ “ಶತಾಬ್ದಿ ಭವನ”ವನ್ನು ಉದ್ಘಾಟಿಸಿದ ರಾಜ್ಯಪಾಲರು

ಮಂಗಳೂರು / ಬೆಂಗಳೂರು (ಕರ್ನಾಟಕ ವಾರ್ತೆ): ಮಂಗಳೂರಿನಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ದಕ್ಷಿಣ ಕನ್ನಡ ಜಿಲ್ಲಾ ಶಾಖೆ “ಶತಾಬ್ದಿ ಭವನ”ವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ರಾಜ್ಯಪಾಲರು ಪ್ರಸ್ತುತ, ಭಾರತದಲ್ಲಿ ಹವಾಮಾನ ಬದಲಾವಣೆ, ನಗರ ಆರೋಗ್ಯ ಬಿಕ್ಕಟ್ಟು, ಮಾನಸಿಕ ಒತ್ತಡ ಮತ್ತು ಸಾಮಾಜಿಕ ಅಸಮಾನತೆಗಳಂತಹ ಸಮಸ್ಯೆಗಳು ವೇಗವಾಗಿ ಹೊರಹೊಮ್ಮುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ರೆಡ್ ಕ್ರಾಸ್ ಸಾಂಪ್ರದಾಯಿಕ ಸೇವೆಗಳಿಗೆ ಮಾತ್ರ ಸೀಮಿತವಾಗಿರದೆ, ನಾವೀನ್ಯತೆ, ಡಿಜಿಟಲ್ ವಿಧಾನಗಳು ಮತ್ತು ಸ್ಥಳೀಯ ಭಾಗವಹಿಸುವಿಕೆಯ ಮೂಲಕ ತನ್ನ ವ್ಯಾಪ್ತಿ ಮತ್ತು ಪ್ರಭಾವವನ್ನು ವಿಸ್ತರಿಸಬೇಕಾಗಿದೆ ಎಂದು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಳೆದ 100 ವರ್ಷಗಳಿಂದ ಉತ್ಸಾಹದಿಂದ ಮುಂದುವರಿಸಿಕೊಂಡು ಬರುತ್ತಿರುವ ಸೇವೆ, ಕರುಣೆ ಮತ್ತು ಮಾನವೀಯತೆಯ ಸಂಪ್ರದಾಯವನ್ನು ಸಂಕೇತಿಸುತ್ತದೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮಾನವ ಸೇವೆಯ ಸಂಕೇತವಾಗಿದ್ದು, ವಿಪತ್ತು, ರೋಗ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಸಮಾಜದ ಅತ್ಯಂತ ಶಕ್ತಿಶಾಲಿ ಮತ್ತು ಸೂಕ್ಷ್ಮ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೆಡ್ ಕ್ರಾಸ್‍ನ ಇತಿಹಾಸವು ಮಾನವೀಯತೆ, ನಿಸ್ವಾರ್ಥ ಸೇವೆ ಮತ್ತು ಕರ್ತವ್ಯಕ್ಕೆ ಧೈರ್ಯಶಾಲಿ ಸಮರ್ಪಣೆಯಿಂದ ತುಂಬಿದೆ ಎಂದು ಅವರು ಶ್ಲಾಘಿಸಿದರು.

ರೆಡ್ ಕ್ರಾಸ್ ಸಂಸ್ಥೆಗೆ ಒಂದೇ ಒಂದು ಧರ್ಮವಿದೆ – ಮಾನವೀಯತೆ, ಅದರ ಗುರಿ ಒಂದೇ – ಎಲ್ಲರ ಕಲ್ಯಾಣಕ್ಕಾಗಿ, ಎಲ್ಲರ ಸಂತೋಷಕ್ಕಾಗಿ. ಭಾರತದಲ್ಲಿ ಇದರ ಶಾಖೆಗಳು ಗ್ರಾಮೀಣ ಪ್ರದೇಶಗಳಿಂದ ಮಹಾನಗರಗಳಿಗೆ ಹರಡಿವೆ. ಇದು ನಿರಂತರವಾಗಿ ಅಗತ್ಯವಿರುವವರಲ್ಲಿ ವೈದ್ಯಕೀಯ ಚಿಕಿತ್ಸೆ, ತುರ್ತು ನೆರವು, ರಕ್ತದಾನ, ಸ್ವಚ್ಛತೆ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಗಳನ್ನು ನಡೆಸುತ್ತದೆ. ಇದರಲ್ಲಿ ಯುವಕರ ಭಾಗವಹಿಸುವಿಕೆ ಬಹಳ ಮುಖ್ಯವಾಗಿದೆ. ರೆಡ್ ಕ್ರಾಸ್ ಯುವ ಮತ್ತು ಜೂನಿಯರ್ ರೆಡ್ ಕ್ರಾಸ್ ಮೂಲಕ ಭವಿಷ್ಯದ ಪೀಳಿಗೆಯಲ್ಲಿ ಸೇವೆ, ಶಿಸ್ತು ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಬೆಳೆಸುವುದು ಈ ಸಂಸ್ಥೆಯ ದೃಷ್ಟಿಕೋನವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಶಾಖೆಯು ವಿಪತ್ತು ನಿರ್ವಹಣೆ, ರಕ್ತದಾನ, ಪ್ರಥಮ ಚಿಕಿತ್ಸಾ ತರಬೇತಿ, ಸಮುದಾಯ ಆರೋಗ್ಯ ಸೇವೆ ಮತ್ತು ಸಾರ್ವಜನಿಕ ಜಾಗೃತಿಯಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದೆ. ಸೀಮಿತ ಸಂಪನ್ಮೂಲಗಳಿದ್ದರೂ ಅಪಾರ ಸೇವೆಯೊಂದಿಗೆ ಕೆಲಸ ಮಾಡುತ್ತಿರುವ ರೆಡ್‍ಕ್ರಾಸ್‍ನ ಎಲ್ಲಾ ಮಹಾನ್ ವ್ಯಕ್ತಿಗಳು, ವೈದ್ಯರು, ದಾದಿಯರು, ಸ್ವಯಂಸೇವಕರು ಮತ್ತು ಪಾಲುದಾರ ಸಂಸ್ಥೆಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರೆಲ್ಲರೂ ಸಮಾಜಕ್ಕೆ ಸ್ಫೂರ್ತಿಯ ಮೂಲವಾಗಿದ್ದಾರೆ ಎಂದು ತಿಳಿಸಿದರು.

ಈ “ಶತಾಬ್ದಿ ಭವನ” ಒಂದು ಸಂಕಲ್ಪ – ಮುಂದಿನ ಶತಮಾನದ ಸೇವೆಗೆ ಸಿದ್ಧರಾಗುವುದು. ಈ ಕಟ್ಟಡವು ಆಡಳಿತಾತ್ಮಕ ಕಾರ್ಯಗಳ ಕೇಂದ್ರವಾಗಲಿದೆ. ಇದರೊಂದಿಗೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಹೆಚ್ಚು ಸಂಘಟಿತ ಮತ್ತು ಪರಿಣಾಮಕಾರಿ ರೂಪ ನೀಡಲಾಗುವುದು. “ಸೇವಾ ಪರಮ ಧರ್ಮ” ಎಂಬ ಮನೋಭಾವದಿಂದ, ನಾವೆಲ್ಲರೂ ಒಟ್ಟಾಗಿ ಈ ಶತಾಬ್ದಿ ಭವನವನ್ನು ಸಾರ್ವಜನಿಕ ಕಲ್ಯಾಣ ಕೇಂದ್ರವನ್ನಾಗಿ ಮಾಡೋಣ. ನಾವೆಲ್ಲರೂ ಒಟ್ಟಾಗಿ ದಯೆ, ಸೇವೆ ಮತ್ತು ಸಾಮಾಜಿಕ ಜವಾಬ್ದಾರಿ ಯ ಈ ಮಹಾನ್ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ ಮತ್ತು ನಮ್ಮ ಸಮಾಜವನ್ನು ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡೋಣ ಎಂದು ಕರೆ ನೀಡಿದರು.

ಈ ವೇಳೆ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಶಾಸಕರಾದ ಡಿ ವೇದವ್ಯಾಸ್ ಕಾಮತ್, ಐಆರ್‍ಸಿಎಸ್ ನ ಕರ್ನಾಟಕ ಶಾಖೆಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮತ್ತು ಗಣ್ಯರು ಹಾಜರಿದ್ದರು.

ಅಬಕಾರಿ ಇಲಾಖೆಯಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ

ಬೆಂಗಳೂರು, ಜುಲೈ 26, (ಕರ್ನಾಟಕ ವಾರ್ತೆ): 2025-26ರ ಬಜೆಟ್‍ನಲ್ಲಿ ಘೋಷಿಸಿದಂತೆ, ಇನ್ಸ್ಪೆಕ್ಟರ್‍ಗಳು, ಸಬ್ ಇನ್ಸ್‍ಪೆಕ್ಟರ್‍ಗಳು, ಹೆಡ್ ಕಾನ್ಸ್ ಟೇಬಲ್‍ಗಳು ಮತ್ತು ಕಾನ್ಸ್ ಟೇಬಲ್‍ಗಳ ಗ್ರೂಪ್-ಸಿ ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮತ್ತು ನಿಯೋಜನೆ ವ್ಯವಸ್ಥೆಯನ್ನು ಅಬಕಾರಿ ಇಲಾಖೆಯಲ್ಲಿ ಪರಿಚಯಿಸಲಾಗಿದೆ. ಕರ್ನಾಟಕ ಸರ್ಕಾರವು ಕರ್ನಾಟಕ ನಾಗರಿಕ ಸೇವೆಗಳ (ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಅಧಿಕಾರಿಗೆ ವರ್ಗಾವಣೆ) ನಿಯಮಗಳನ್ನು 2025 ರಲ್ಲಿ ಜಾರಿಗೆ ತಂದಿದ್ದು, ಅದನ್ನು 14-05-2025 ರಂದು ಪ್ರಕಟಿಸಲಾಯಿತು.

ಈ ನಿಯಮಗಳ ಪ್ರಕಾರ, ಕರ್ನಾಟಕ ಸರ್ಕಾರವು 08-07-2025 ರಂದು ವರ್ಗಾವಣೆ ಮಾರ್ಗಸೂಚಿ ಹೊರಡಿಸಲಾಯಿತು. ಇದರಲ್ಲಿ ವರ್ಗಾವಣೆ, ಕೌನ್ಸೆಲಿಂಗ್ ಪ್ರಕ್ರಿಯೆ, ಆದ್ಯತೆಯ ಪಟ್ಟಿ ಸಿದ್ಧಪಡಿಸಿ, ಕೌನ್ಸೆಲಿಂಗ್ ಮೂಲಕ ನ ವರ್ಗಾವಣೆಯ ಉದ್ದೇಶಕ್ಕಾಗಿ ಸಾಫ್ಟ್‍ವೇರ್ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಅಬಕಾರಿ ಇಲಾಖೆಯ ಎಲ್ಲಾ ಉದ್ಯೋಗಿಗಳ ಸೇವಾ ಪೆÇ್ರಫೈಲ್ಗಳನ್ನು ಮಾಡ್ಯೂಲ್‍ನಲ್ಲಿ ಸೆರೆಹಿಡಿಯಲಾಗಿದೆ. ಇನ್ಸ್ ಪೆಕ್ಟರ್‍ಗಳು, ಸಬ್ ಇನ್ಸ್ ಪೆಕ್ಟರ್‍ಗಳು ಕಾನ್ಸ್‍ಟೇಬಲ್‍ಗಳು ಮತ್ತು ಕಾನ್ಸ್ ಟೇಬಲ್‍ಗಳನ್ನು ಆನ್‍ಲೈನ್ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು, ವರ್ಗಾವಣೆಗೆ ನೌಕರರ ಕರಡು ಪಟ್ಟಿಯನ್ನು 17-07-2025 ರಂದು ಪ್ರಕಟಿಸಲಾಯಿತು ಮತ್ತು ಅನ್‍ಲೈನ್‍ನಲ್ಲಿ ಆಕ್ಷೇಪಣೆಗೆ ಆಹ್ವಾನಿಸಲಾಯಿತು.

ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ, ಅರ್ಹ ನೌಕರರ ಅಂತಿಮ ಪಟ್ಟಿಯನ್ನು 23-07-2025 ಪ್ರಕಟಿಸಲಾಯಿತು. ನಂತರ ವೇಳಾಪಟ್ಟಿಯ ಪ್ರಕಾರ, 24-07-2025 ರಂದು ಅಬಕಾರಿ ಇನ್ಸ್‍ಪೆಕ್ಟರ್ ಗಳು ಮತ್ತು ಸಬ್-ಇನ್ಸ್ ಪೆಕ್ಟರ್ ಗಳಿಗೆ ಮತ್ತು 25-07-2025 ರಂದು ಅಬಕಾರಿ ಹೆಡ್ ಕಾನ್ಸ್‍ಟೇಬಲ್‍ಗಳು ಮತ್ತು ಅಬಕಾರಿ ಕಾನ್ಸ್ ಟೇಬಲ್‍ಗಳಿಗೆ ಅನ್ ಕೌನ್ಸೆಲಿಂಗ್ ನಡೆಸಲಾಯಿತು. ಕೌನ್ಸೆಲಿಂಗ್‍ನಲ್ಲಿ ಅವರ ಆಯ್ಕೆಯ ಸ್ಥಳದ ಪ್ರಕಾರ ಅಬಕಾರಿ ನಿರೀಕ್ಷಕರು – 151, ಅಬಕಾರಿ ಉಪ ನಿರೀಕ್ಷಕರು – 114, ಹೆಡ್ ಕಾನ್ಸ್‍ಟೇಬಲ್‍ಗಳು – 07 ಮತ್ತು ಕಾನ್ಸ್‍ಟೇಬಲ್‍ಗಳು – 415 ಒಟ್ಟು – 687 ನೌಕರರನ್ನು ವರ್ಗಾಯಿಸಲಾಗುತ್ತದೆ.

ಕರ್ನಾಟಕದ ಗೌರವಾನ್ವಿತ ಹೈಕೋರ್ಟ್, ಬೆಂಗಳೂರು ಪೀಠ ಮತ್ತು ಗೌರವಾನ್ವಿತ ಕರ್ನಾಟಕ ಆಡಳಿತ ನ್ಯಾಯಮಂಡಳಿ, ಬೆಂಗಳೂರು ಮತ್ತು ಬೆಳಗಾವಿ ಪೀಠದ ಮುಂದೆ ವರ್ಗಾವಣೆ ನಿಯಮಗಳನ್ನು ಪ್ರಶ್ನಿಸಲಾಗಿರುವುದರಿಂದ, ಅಬಕಾರಿ ನಿರೀಕ್ಷಕರು ಮತ್ತು ಸಬ್-ಇನ್‍ಸ್ಪೆಕ್ಟರ್‍ಗಳ ವರ್ಗಾವಣೆ ಪಟ್ಟಿಯನ್ನು ಅಂತಿಮ ತೀರ್ಪಿಗೆ ಒಳಪಟ್ಟು ಹೊರಡಿಸಲಾಗುವುದು. ಉಳಿದಂತೆ ಅಬಕಾರಿ ಹೆಡ್ ಕಾನ್ಸ್ ಟೇಬಲ್‍ಗಳು ಮತ್ತು ಅಬಕಾರಿ ಕಾನ್ಸ್‍ಟೇಬಲ್‍ಗಳ ವರ್ಗಾವಣೆ ಆದೇಶವನ್ನು ಈ ದಿನ ಅಂದರೆ ದಿನಾಂಕ: 25-07-2025 ರಂದೇ ಹೊರಡಿಸಲಾಗಿರುತ್ತದೆ ಎಂದು ಅಬಕಾರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವ್ಯಕ್ತಿತ್ವ ವಿಕಸನದ ಕನ್ನಡ ಕೃತಿಗಳಿಗೆ ಚಾಣಕ್ಯ ವ್ಯಕ್ತಿತ್ವ ಪ್ರಶಸ್ತಿಗೆ ಕೃತಿಗಳ ಆಹ್ವಾನ

ವ್ಯಕ್ತಿತ್ವ ವಿಕಸನದ ಕನ್ನಡ ಕೃತಿಗಳಿಗೆ ಚಾಣಕ್ಯ ವ್ಯಕ್ತಿತ್ವ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ -ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ

ಶಿಡ್ಲಘಟ್ಟ : ಅಪರಾಧಗಳ ಸ್ವರೂಪ ಈಗ ಡಿಜಿಟಲ್ ರೂಪ ಪಡೆದಿದೆ, ಡಿಜಿಟಲ್ ಅರೆಸ್ಟ್ ಮೂಲಕ ಹೆದರಿಸಿ ಹಣ ಕೀಳುವ, ಮೋಸ ಮಾಡುವ ಕೃತ್ಯಗಳು ಹೆಚ್ಚಾಗಿವೆ. ಬಣ್ಣದ ಮಾತು ಹೇಳಿ ಅನೇಕ ರೀತಿಯಲ್ಲಿ ಮೋಸ ನಡೆಯುತ್ತಿದ್ದು ಈ ರೀತಿ ಕಾನೂನಿನಲ್ಲಿ ಯಾವುದೇ ರೀತಿಯ ಕ್ರಮ ಜರುಗಿಸುವುದಿಲ್ಲ ಎಂದು ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ತಿಳಿಸಿದರು.

ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲಾ ಕಾಲೇಜು ಆವರಣದಲ್ಲಿ ಆಯೋಜಿಸಿದ ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಪೊಲೀಸ್‌ ಠಾಣೆಗಳ ಇ–ಬೀಟ್‌ ವ್ಯವಸ್ಥೆ ಅನ್ವಯ ವಿಂಗಡಿಸಲಾದ ಪ್ರದೇಶದಲ್ಲಿರುವ ಮನೆಗಳ ಪಟ್ಟಿ ಮಾಡಿಕೊಂಡು ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳು ಭೇಟಿ ನೀಡಿ, ಅಹವಾಲು ಆಲಿಸಲಿದ್ದಾರೆ. ಪೊಲೀಸರು ಮನೆ ಮನೆಗೆ ಭೇಟಿ ನೀಡುವುದರಿಂದ ಅಪರಾಧ ಪ್ರಕರಣಗಳನ್ನು ಕಡಿವಾಣ ಹಾಕಬಹುದು. ಜನರಲ್ಲಿ ಸುರಕ್ಷತಾ ಮನೋಭಾವವನ್ನು ಬೆಳೆಸಬಹುದು.ಪೊಲೀಸ್ ಇಲಾಖೆ ನೆರವು ಪಡೆಯುವ ವಿಧಾನ ಸೇರಿದಂತೆ ಇಲಾಖೆಯ ಸಮಗ್ರ ಸೇವೆಗಳ ಬಗ್ಗೆ ಅರಿವು ಮೂಡಿಸಲಾಗುವುದು. ಈ ಹಿಂದೆ ದೂರುದಾರರು ಠಾಣೆಗೆ ಬಂದು ದೂರು ನೀಡಿದಾಗ ಅದನ್ನು ದಾಖಲಿಸಿ ಮುಂದಿನ ಕ್ರಮಕ್ಕೆ ಮುಂದಾಗುತ್ತಿದ್ದರು, ಈಗ ಪೊಲೀಸರು ಸಾರ್ವಜನಿಕರ ಮನೆಗೆ ಹೋಗಿ ಅಹವಾಲು ಆಲಿಸುವ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆ ಸ್ನೇಹಮಯಿಯಾಗಿದೆ, ಪೊಲೀಸರು ಮನೆಗೆ ಬಂದಾಗ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆರಕ್ಷಕ ಉಪ ನಿರೀಕ್ಷಕಿ ಶ್ಯಾಮಲ, ಮನೆಮನೆಗೆ ಪೊಲೀಸ್‌ ಭೇಟಿ ಕಾರ್ಯಕ್ರಮ ಯಶಸ್ವಿಯಾಗಬೇಕು ಎಂದಾದರೆ ಸಾರ್ವಜನಿಕರ ಸಹಕಾರ ಸಹಭಾಗಿತ್ವ ಅವಶ್ಯಕ. ಕಾನೂನು ವ್ಯವಸ್ಥೆ ಕಾಪಾಡಲು ಅಪರಾಧ ತಡೆಗಟ್ಟಲು ಪೊಲೀಸರೊಂದಿಗೆ ಕೈಜೋಡಿಸಿ. ಸಮಾಜದ ಸುರಕ್ಷತೆ ಹಾಗೂ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ, ಸಮಾಜದಲ್ಲಿ ಆಗಬಹುದಾದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲಿದ್ದಾರೆ.
ಇದೇ ಸಂದರ್ಭದಲ್ಲಿ ಬಶೆಟ್ಟಹಳ್ಳಿಯನ್ನು ಮಾದರಿ ಪೊಲೀಸ್ ಗ್ರಾಮ ಎಂದು ಗುರುತಿಸಿ ಗ್ರಾಮದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಿ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.

ಪೊಲೀಸ್ ಅಂದರೆ ಭಯವಲ್ಲ, ಭರವಸೆ ಎಂಬ ವಿಶ್ವಾಸವಿದ್ದರೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಹೊಸ ಯೋಜನೆಯಡಿ ಪ್ರತಿ ದಿನ ಪೊಲೀಸ್ ಅಧಿಕಾರಿ, ಸಿಬ್ಬಂದಿ ಜನರೊಂದಿಗೆ ಬೆರೆತು, ಜನರ ಸಮಸ್ಯೆಗಳನ್ನು ಆಲಿಸಿ, ತ್ವರಿತ ಪರಿಹಾರ ಕ್ರಮ ಕೈಗೊಳ್ಳುತ್ತಾರೆ. ಮಾದಕ ವಸ್ತು ಬಳಕೆ ಜಾಗತಿಕ ಸಮಸ್ಯೆಯಾಗಿದೆ. ಇಂದು ಲಕ್ಷಾಂತರ ಜನರು ಇಂತಹ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಮಾದಕ ವ್ಯಸನಮುಕ್ತ ಜಗತ್ತನ್ನು ನಿರ್ಮಾಣ ಮಾಡುವಲ್ಲಿ ಜನರ ಸಹಕಾರ ಅತ್ಯಗತ್ಯ.

– ಕುಶಲ್ ಚೌಕ್ಸೆ,ಜಿಲ್ಲಾ ವರಿಷ್ಠಾಧಿಕಾರಿ

ಈ ಸಂದರ್ಭದಲ್ಲಿ ಎ ಎಸ್ ಪಿ ಜಗನ್ನಾಥ್ ರೈ,ಡಿವೈಎಸ್ ಪಿ ಮುರಳೀಧರ್,ಸರ್ಕಲ್ ಇನ್ಸ್‌ಪೆಕ್ಟರ್ ಎಂ ಶ್ರೀನಿವಾಸ್,ಸಬ್ ಇನ್ಪೆಕ್ಟರ್ ಶ್ಯಾಮಲ,ವೇಣುಗೋಪಾಲ್,ಗ್ರಾಮ ಪಂಚಾಯತಿ ಅಧ್ಯಕ್ಷ ಡಿಬಿ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಬಿವಿ ನಾರಾಯಣಸ್ವಾಮಿ,ಗೌಡನಹಳ್ಳಿ ಮಂಜುನಾಥ್, ಶಿವಣ್ಣ,ಶಾಲಾ ಕಾಲೇಜು ಪ್ರಾಂಶುಪಾಲರು,ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಶಿಡ್ಲಘಟ್ಟ