ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ
ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ ಬೆಂಗಳೂರಿನ ಕೃಪಾನಿಧಿ ವಿದ್ಯಾಸಂಸ್ಥೆ ಹಾಗೂ ಚಿಕ್ಕಬಳ್ಳಾಪುರದ ನಾಗಾರ್ಜುನ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಜನಿವಾರ ಹಾಗೂ ಧಾರ್ಮಿಕ ಆಚರಣೆಯ ಕುರುಹುಗಳನ್ನು ಬಲವಂತವಾಗಿ ತೆಗೆಸಿರುವುದು ಸಮಾಜಕ್ಕೆ ಮಾರಕವಾದ ಕೃತ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ರಾಘವೇಂದ್ರ ಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಘಟನೆಯನ್ನು ಕಾಶ್ಮೀರದ ಪೆಹಲ್ಗಾಂನಲ್ಲಿ ಜಾತಿ ಕೇಳಿ ಗುಂಡಿಕ್ಕಿದ ಘಟನೆಗೆ ಹೋಲಿಸಿದರು. “ವಿದ್ಯಾಸಂಸ್ಥೆಗಳಲ್ಲಿ ಜನಿವಾರ, ಶಿವದಾರ, ಕಾಶಿದಾರ, ಮಾಂಗಲ್ಯ, ಕಿವಿ ಓಲೆ, ಕಾಲುಂಗರದಂತಹ ಹಿಂದೂ ಧರ್ಮದ ಅವಿಭಾಜ್ಯ ಅಂಗಗಳ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದು ಲವ್ ಜಿಹಾದ್( Love Jihad and Coroporate Jihad ) ಹಾಗೂ ಕಾರ್ಪೊರೇಟ್ ಜಿಹಾದ್ ಮಾದರಿಯಲ್ಲೇ ನಡೆಯುತ್ತಿರುವ ‘ವಿದ್ಯಾ ಜಿಹಾದ್’ ಎಂಬ ಶಂಕೆ ಮೂಡುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ನ್ಯಾಯಾಲಯದ ಆದೇಶದ ಉಲ್ಲಂಘನೆ
ಕಳೆದ ವರ್ಷವೂ ಇಂತಹದ್ದೇ ಘಟನೆಗಳು ನಡೆದಿದ್ದವು. ಈ ಬಗ್ಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನ್ಯಾಯಾಲಯದ ಮೆಟ್ಟಿಲೇರಿತ್ತು. ಆಗ ಸಿಇಟಿ ಕೌನ್ಸಿಲ್ ಇನ್ಮುಂದೆ ಇಂತಹ ಕೃತ್ಯಗಳಿಗೆ ಆಸ್ಪದ ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು. ಹೀಗಿದ್ದರೂ ಈ ವರ್ಷವೂ ಅದೇ ಕೃತ್ಯ ಪುನರಾವರ್ತನೆಯಾಗಿರುವುದು ಸಂವಿಧಾನ ವಿರೋಧಿ ಮತ್ತು ನ್ಯಾಯಾಂಗ ನಿಂದನೆಯಾಗಿದೆ ಎಂದು ಅವರು ದೂರಿದರು.
ಮಹಾಸಭಾದ ಪ್ರಮುಖ ಬೇಡಿಕೆಗಳು:
ಪಾರದರ್ಶಕ ತನಿಖೆ: ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಘಟನೆಯ ಹಿಂದೆ ಇರುವ ಶಕ್ತಿಗಳ ಬಗ್ಗೆ ತನಿಖೆ ನಡೆಸಬೇಕು.
ವಿದ್ಯಾಸಂಸ್ಥೆಗಳ ಮಾನ್ಯತೆ ರದ್ದು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕೃಪಾನಿಧಿ ಮತ್ತು ನಾಗಾರ್ಜುನ ವಿದ್ಯಾಸಂಸ್ಥೆಗಳ ಮಾನ್ಯತೆಯನ್ನು ತಕ್ಷಣವೇ ರದ್ದುಗೊಳಿಸಬೇಕು.
ವ್ಯಕ್ತಿಗಳ ಬಂಧನ: ಜನಿವಾರ ತೆಗೆಸಿದ ಕೃತ್ಯದ ಹಿಂದಿರುವ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.
”ಇಂತಹ ಕೃತ್ಯಗಳು ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತವೆ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುವ ಪರಿಸ್ಥಿತಿಯನ್ನು ಸರ್ಕಾರವೇ ನಿರ್ಮಾಣ ಮಾಡುತ್ತಿದೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇರುವ ಬ್ರಾಹ್ಮಣ ಸಂಘಟನೆಗಳು ಹಾಗೂ ಹಿಂದೂ ಬಾಂಧವರು ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು,” ಎಂದು ರಾಘವೇಂದ್ರ ಮಯ್ಯ ಎಚ್ಚರಿಸಿದರು.
