ಬೆಂಗಳೂರು: ಅಧ್ಯಕ್ಷರಾದ ರವೀಂದ್ರ ಶೆಟ್ಟಿ(Ravindra Shetty) ಮಾತನಾಡಿ, 2023ರಲ್ಲಿ ಕಾನೂನುಬದ್ಧವಾಗಿ ಗಣಿ ನಡೆಸಲು ಸಾಧ್ಯವಾಗುತ್ತಿಲ್ಲವೆಂದು ಬೆಳಗಾವಿ ವಿಧಾನಸಭೆಯ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗಿತ್ತು ಎಂದು ಹೇಳಿದರು. ಕಳೆದ 10 ವರ್ಷಗಳಿಂದ ವಿವಿಧ ಬೇಡಿಕೆಗಳಿಗಾಗಿ ಹೋರಾಟ ನಡೆಸಲಾಗುತ್ತಿದೆ. ಅಕ್ರಮ ಗಣಿಗಾರಿಕೆಗೆ ತಡೆ ಹಾಕಿ, ಪ್ರಾಮಾಣಿಕ ಗಣಿ ಮಾಲೀಕರಿಗೆ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯು ವೈಜ್ಞಾನಿಕ ಮಾನದಂಡಗಳನ್ನು ಪಾಲಿಸದೆ ಹಾಗೂ ಕ್ವಾರಿ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಡೆಸಿರುವ ಡ್ರೋನ್ ಸಮೀಕ್ಷೆಯನ್ನು ಆಧರಿಸಿ ರಾಜಧನ ಪಾವತಿ ಬಾಕಿ ಮತ್ತು ದಂಡ ವಿಧಿಸಲು ಮುಂದಾಗಿರುವ ಕ್ರಮವನ್ನು ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ (FKQSCOA) ತೀವ್ರವಾಗಿ ವಿರೋಧಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರವೀಂದ್ರ ಶೆಟ್ಟಿ ಅವರು, “ಒಮ್ಮೆ ಮಾತ್ರದ ಇತ್ಯರ್ಥ (OTS) ಯೋಜನೆಯಡಿ ರಾಜಧನ ಪಾವತಿ ಬಾಕಿಯನ್ನು ಪಾವತಿಸುವಂತೆ ಸರ್ಕಾರ ಸೂಚಿಸಿದೆ. ಆದರೆ ವೈಜ್ಞಾನಿಕವಲ್ಲದ ಡ್ರೋನ್ ಸಮೀಕ್ಷೆಯನ್ನು ಆಧರಿಸಿ ಕೋಟ್ಯಂತರ ರೂಪಾಯಿ ದಂಡ ವಿಧಿಸಲಾಗುತ್ತಿದೆ. ಒಬ್ಬೊಬ್ಬ ಮಾಲೀಕರಿಗೆ ವಿಭಿನ್ನ ಪ್ರಮಾಣದಲ್ಲಿ ದಂಡ ನಿಗದಿಪಡಿಸಲಾಗಿದ್ದು, ಕನಿಷ್ಠ ₹50 ಲಕ್ಷದವರೆಗೆ ದಂಡ ವಿಧಿಸಲಾಗಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಪಾವತಿಸುವುದು ಸಾಧ್ಯವಿಲ್ಲ” ಎಂದು ಹೇಳಿದರು.
ಈ ಸಂಬಂಧ ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ರಾಜಧನ ಪಾವತಿ ಸಂಗ್ರಹಣೆ ಕುರಿತಂತೆ ಎಲ್ಲಾ ಸಂಬಂಧಿತ ಇಲಾಖೆಗಳಿಗೆ ಗೌರವಾನ್ವಿತ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ ಎಂದು ಅವರು ತಿಳಿಸಿದರು. ಒಕ್ಕೂಟದ ಉಪಾಧ್ಯಕ್ಷ ಕಿರಣ್ ಜೈನ್ ಮಾತನಾಡಿ, “ಸಾರ್ವಜನಿಕ ಕಾಮಗಾರಿ ಇಲಾಖೆ, ವಸತಿ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಕಾಮಗಾರಿಗಳಿಗೆ ಕಲ್ಲು ಮತ್ತು ಖನಿಜಗಳನ್ನು ಪೂರೈಸುವ ಗುತ್ತಿಗೆದಾರರ ಬಿಲ್ಗಳಿಂದಲೇ ಸಂಬಂಧಿತ ಇಲಾಖೆಗಳು ರಾಜಧನ ಪಾವತಿ ಮೊತ್ತವನ್ನು ಈಗಾಗಲೇ ಕಡಿತಗೊಳಿಸುತ್ತಿವೆ. ಹೀಗಿರುವಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತೆ ಅದೇ ರಾಜಧನ ಪಾವತಿಯನ್ನು ಕ್ವಾರಿ ಮಾಲೀಕರಿಂದ ವಸೂಲಿ ಮಾಡುವುದು ದ್ವಿಗುಣ ವಸೂಲಿ ಆಗಿದ್ದು, ಇದು ಸಂಪೂರ್ಣ ಅನ್ಯಾಯ” ಎಂದು ಆರೋಪಿಸಿದರು.
ರಾಜಧನ ಪಾವತಿ ಸಂಗ್ರಹಣೆಯ ವ್ಯವಸ್ಥೆಯನ್ನು ಸರ್ಕಾರ ಪಾರದರ್ಶಕವಾಗಿ ನಿಯಮಿತಗೊಳಿಸಬೇಕು ಹಾಗೂ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಮೇಲೆ ವಿಧಿಸಿರುವ ದಂಡವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವ ಸಂದರ್ಭದಲ್ಲಿ ದಂಡ ವಿಧಿಸುವುದು ಮತ್ತು ಪ್ರಸ್ತುತ ರಾಜಧನ ಪಾವತಿ ವಸೂಲಾತಿ ವಿಧಾನ ಕಾನೂನುಬಾಹಿರವಾಗಿದೆ ಎಂದು ಅವರು ಹೇಳಿದರು.
ರಾಮನಗರದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿ ಎದುರು ಅಧಿಕಾರಿಗಳ ಕಿರುಕುಳದಿಂದ ಲಾರಿ ಮಾಲೀಕ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುಃಖಕರ ಘಟನೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ₹1 ಕೋಟಿ ಪರಿಹಾರ ಘೋಷಿಸಬೇಕು ಎಂದು ಒಕ್ಕೂಟ ಒತ್ತಾಯಿಸಿತು.
ಸರ್ಕಾರ ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ಎಚ್ಚರಿಕೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ರವೀಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಗೌರವಾಧ್ಯಕ್ಷ ಆಶಾ ಪ್ರಸನ್ನ, ಉಪಾಧ್ಯಕ್ಷರು ಕಿರಣ್ ಜೈನ್, ಪ್ರದೀಪ್, ಪ್ರಶಾಂತ್ ಉಪ್ಪರಗಿ, ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಹಾಗೂ ಬಸವರಾಜ್, ವೆಂಕಟೇಶ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

