ಬೇಸಿಗೆ ಶಿಬಿರ ಮಕ್ಕಳಿಗೆ ಪ್ರಕೃತಿಯ ಪಾಠಶಾಲೆ – ಡಾ.ಎಸ್.ವಿ.ಸುರೇಶ
BENGALURU : ಬೇಸಿಗೆ ಶಿಬಿರವು ಮಕ್ಕಳಿಗೆ ಪ್ರಕೃತಿಯ ಪಾಠಶಾಲೆಯಾಗಿದೆ. ವಿವಿಧ ಗಿಡಗಳು, ಹಣ್ಣುಗಳು ಹಾಗೂ ಪಕ್ಷಿಗಳನ್ನು ಕಂಡು ಮಕ್ಕಳು ಹೊಸ ವಿಚಾರಗಳನ್ನು ಕಲಿತಿದ್ದಾರೆ. ಈ ರೀತಿಯ ಬೇಸಿಗೆ ಶಿಬಿರಗಳು (Summer Camps) ಮಕ್ಕಳಿಗೆ ಪಠ್ಯಪುಸ್ತಕದ ಹೊರಗಿನ ಬದುಕಿನ ಪಾಠಗಳನ್ನು ಕಲಿಸುವ ನೈಜ ಅನುಭವದ ಶಾಲೆಯಾಗಿದೆ ಎಂದು ಕೃಷಿ ವಿಶ್ವವಿದ್ಯಾನಿಲಯದ (GKVK) ಗೌರವಾನ್ವಿತ ಕುಲಪತಿಗಳಾದ ಡಾ. ಎಸ್.ವಿ. ಸುರೇಶ (Dr.SV Suresh) ಅವರು ತಿಳಿಸಿದರು.

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಆವರಣದಲ್ಲಿ ಮಕ್ಕಳ ಕಲಿಕೆಯ ಅಂಗವಾಗಿ ಮೇ 18 ರಿಂದ 22 ರವರೆಗೆ 5 ದಿನಗಳ ಕಾಲ ಆಯೋಜಿಸಲಾಗಿದ್ದ “ಮಕ್ಕಳ ಆಟ ಇನ್ ತೋಟ” ಗಿಡ, ಮರ, ಕೀಟ, ಚಿಟ್ಟೆಗಳ ಜೊತೆ ಒಂದು ವಾರ ಎಂಬ ಶೀರ್ಷಿಕೆಯಡಿಯ ವಿಶೇಷ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ತೋಟದಲ್ಲಿ ಮಕ್ಕಳ ಆಟವು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ, ಪ್ರಕೃತಿಯೊಂದಿಗೆ ಬೆರೆಯುವ ಅದ್ಭುತ ಅನುಭವವನ್ನು ನೀಡಿತು. ಹಸಿರು ವಾತಾವರಣದಲ್ಲಿ ಗಿಡ, ಮರಗಳು, ಬಣ್ಣ ಬಣ್ಣದ ಚಿಟ್ಟೆಗಳು ಹಾಗೂ ವಿವಿಧ ಕೀಟಗಳೊಂದಿಗೆ ಬೆರೆಯುವ ಮೂಲಕ ಮಕ್ಕಳು ಪ್ರಕೃತಿಯ ಸೌಂದರ್ಯವನ್ನು ಹತ್ತಿರದಿಂದ ಆಸ್ವಾದಿಸಿದರು. ಶಿಬಿರದ ಅವಧಿಯಲ್ಲಿ ಮಕ್ಕಳಿಗೆ ತೋಟದಲ್ಲಿ ಓಡಾಟ, ಗಿಡ ನೆಡುವುದು, ಗಿಡಗಳಿಗೆ ನೀರು ಹಾಕುವುದು, ಸಸ್ಯಗಳ ಆರೈಕೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.
ಶಿಬಿರದ ಕೊನೆಯ ದಿನವಾದ ಇಂದು ಮಕ್ಕಳು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ತೋಟದಲ್ಲಿನ ಹೂ, ಹಣ್ಣು, ಸುಗಂಧದ್ರವ್ಯ ಹಾಗೂ ಔಷಧೀಯ ಸಸ್ಯಗಳ ಬಗ್ಗೆ ತಮಗಿರುವ ಜ್ಞಾನವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಪರಿಸರ ಮಾಲಿನ್ಯ, ಪರಿಸರದ ಅಸಮತೋಲನ ಮತ್ತು ಪ್ರಕೃತಿ ಸಂರಕ್ಷಣೆಯ ಅಗತ್ಯತೆಯನ್ನು ಸರಳವಾಗಿ ಬಿಂಬಿಸುವ, ಪ್ಲಾಸ್ಟಿಕ್ ನಿವಾರಣೆಯಂತಹ ಜಾಗೃತಿ ಮೂಡಿಸುವ ಹಾಗೂ ಗಿಡಗಳನ್ನು ನೆಟ್ಟು ಪರಿಸರವನ್ನು ಹಸಿರಾಗಿಸುವ ಸಂದೇಶವುಳ್ಳ ಅದ್ಭುತ ಮೂಕಾಭಿನಯವನ್ನು ಮಕ್ಕಳು ಪ್ರದರ್ಶಿಸಿದರು. ಈ ಶಿಬಿರದಲ್ಲಿ ಒಟ್ಟು 70 ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಸ್ತರಣಾ ನಿರ್ದೇಶಕರಾದ ಡಾ: ವೈ.ಎನ್. ಶಿವಲಿಂಗಯ್ಯ ಮತ್ತು ಸಹ ವಿಸ್ತರಣಾ ನಿರ್ದೇಶಕರಾದ ಡಾ: ಕೆ.ಪಿ. ರಘುಪ್ರಸಾದ್, ಡಾ: ಸಿ.ಕೆ. ಪ್ರಮಿಳ, ಡಾ: ಪ್ರಹ್ಲಾದ್ ಪಿ ಭಟ್ ಮತ್ತು ಡಾ: ಕೆ. ಪಲ್ಲವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

