ಕನ್ನಡ ಪ್ರಭ ವರದಿಗಾರ ಕೆ.ವಿ. ಪ್ರಭಾಕರ್ (Media Advisor KV Prabhakar) ಅವರಿಗೆ 2013 ರ ಒಂದು ಸಂಜೆ ಮಾಜಿ ಮೇಯರ್ ರಾಮಚಂದ್ರಪ್ಪನವರಿಂದ (M Ramachandrappa) ಫೋನ್ ಬರುತ್ತೆ. ಮುಖ್ಯಮಂತ್ರಿಗಳು ನಿಮ್ಮನ್ನು ಭೇಟಿಯಾಗಲು ಹೇಳಿದ್ದಾರೆ, ಬನ್ನಿ ಎಂಬುದು ಸೂಚನೆ ಅಥವಾ ಆಹ್ವಾನ. ಸಂಜೆ ಎಂದರೆ ಪತ್ರಿಕಾ ಕಚೇರಿಗಳಲ್ಲಿ ಪೀಕ್ ಟೈಮ್, ಹಾಗಾಗಿ ಪ್ರಭಾಕರ್ ಅವರಿಗೆ ಸುದ್ದಿ ಬರೆಯುವುದು ಆಧ್ಯತೆಯಾಗಿತ್ತು. ಇವತ್ತಾಗಲ್ಲ ನಾಳೆ ಬರ್ತೀನಿ ಎಂದಿದ್ದಾರೆ. ಇಲ್ಲಾ ಇವತ್ತೇ ಬನ್ನಿ ಎಂದಾಗ ಕೊಂಚ ಗಲಿಬಿಲಿಗೊಂಡು ಆಗಿನ ಸಂಪಾದಕರಾದ ವಿಶ್ವೇಶ್ವರ್ ಭಟ್ (Vishweshwar Bhat) ಅವರ ಬಳಿ ಹೇಳಿದ್ದಾರೆ.
ಭಟ್ವರು ಕೂಡಲೇ ಹೋಗಿ ಎಂದು ಸೂಚಿಸಿದಾಗ ಪ್ರಭಾಕರ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ.
ಸಿದ್ದರಾಮಯ್ಯ: ಪ್ರಭಾಕರ್ ನೀನೇನೋ…
ಕೆ ವಿ ಪಿ: ಹೌದು ಸರ್…
ನೀನು ನಾಳೆಯಿಂದ ಸ್ವಲ್ಪ ಮೀಡಿಯಾ ಎಲ್ಲಾ ನೋಡ್ಕೋ ಅಂತಾ ಸಿದ್ದರಾಮಯ್ಯ ಫರ್ಮಾನು ಹೊರಡಿಸಿದ್ದಾರೆ. ಪ್ರಭಾಕರ್ ಗೆ ಕಕರು ಮಕರು. ಮೀಡಿಯಾ ನೋಡ್ಕೋಳ್ಳೋದು ಅಂದ್ರೆ ಏನ್ ನೋಡಿಕೊಳ್ಳೋದು…!
ಸಾರ್ ನಾನು ಕನ್ನಡ ಪ್ರಭ ಪತ್ರಿಕೆಯಲ್ಲಿ ಕೆಲ್ಸಾ ಮಾಡ್ತಿದ್ದೀನಿ ಅಂದಾಗ, ಹೂನಪ್ಪ ಗೊತ್ತು, ಬಿಟ್ಟು ಬಾ ಅಂದಿದ್ದಾರೆ.
ಅರೆ ನಾಳೆ ಇವರ ಸರ್ಕಾರ ಹೋದ್ರೆ ನಾನೇನು ಮಾಡೋದು ಅಂದುಕೊಂಡು, ಯಾವುದಕ್ಕೂ ಇರ್ಲಿ ಅಂತಾ ’ಸಾರ್ ಸಂಬಳ ಎಷ್ಟು ಕೊಡ್ತೀರಿ ಅಂದಿದ್ದಾರೆ.
ಏಯ್ ನೋಡಪ್ಪಾ… ಇವನ್ ಯಾರ್ರೀ… ಸಂಬಳ ಅದೆಷ್ಟು ಕೇಳ್ತಾನೋ ಅಷ್ಟು ಕೊಡ್ರಿ ಎಂದು ನಾಳೆಯಿಂದ ಬಾ ಎಂದಾಗ, “ ಇಲ್ಲಾ ಸಾರ್ ನನಗೆ ಟೈಂ ಬೇಕು. ಒಂದು ವಾರ ಯೋಚನೆ ಮಾಡಿ ಹೇಳ್ತೀನಿ” ಎಂದು ಕಚೇರಿಗೆ ಬಂದು ಯಥಾವತ್ ವರದಿಯನ್ನ ಭಟ್ ಅವರಿಗೆ ತಲುಪಿಸಿದ್ದಾರೆ.
ಇಲ್ಲೇ ನಿನಗೊಂದು ಚೇರ್ ಇಟ್ಟಿರ್ತೀನಿ ಹೋಗು:
ಭಟ್ ಅವರು… ಇದು ಒಳ್ಳೇ ಅವಕಾಶ ಹೋಗು ಎಂದು ಕಳುಹಿಸಿದ್ದಾರೆ. ಮತ್ತೆ ಈ ಸರ್ಕಾರ ಹೋದ್ಮೇಲೆ ನನಗೆ ಕೆಲಸ ಎಂದಾಗ ಇಲ್ಲೇ ನಿನಗೊಂದು ಚೇರ್ ಇಟ್ಟಿರ್ತೀನಿ ಹೋಗು ಎಂದು ಆಶ್ವಾಸನೆ ನೀಡಿದ್ದಾರೆ. ಹೀಗೆ ಕೆ.ವಿ. ಪ್ರಭಾಕರ್ 13 ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಅಂಗಳಕ್ಕೆ ಹೋದವರು.
ಮುಖ್ಯಮಂತ್ರಿಗಳ ಕಚೇರಿಗೆ ಹೋದಾಗ ದಿನೇಶ್ ಅಮೀನ್ ಮಟ್ಟು ಅವರ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದರು. ಸರ್ಕಾರದ ಅವಧಿ ಮುಗೀತು. ಅಷ್ಟರಲ್ಲಿ ಪ್ರಭಾಕರ್ ಅಂದ್ರೆ ಸಿದ್ದರಾಮಯ್ಯ ನವರ ಶಿಷ್ಯ ಅಂತಾಗಿತ್ತು. ಇನ್ನೇನು ಯಾರಾತ್ರಾದ್ರೂ ಯಾಕೆ ಕೆಲ್ಸಕ್ಕೆ ಹೋಗೋದು? ಅಂತಾ ಸರ್ ನಿಮ್ಮ ಜೊತೆಲೇ ಇರ್ತೀನಿ ಎಂದಿದ್ದಾರೆ. ಆ ದಿನಗಳಲ್ಲೂ ಸಿದ್ದರಾಮಯ್ಯ ಪ್ರಭಾಕರ್ ಅವರನ್ನು ಚೆನ್ನಾಗಿ ನೋಡಿಕೊಂಡರೆಂದು ಪ್ರಭಾಕರ್ ಇಂದಿಗೂ ಅಭಿಮಾನದಿಂದಲೇ ಹೇಳಿಕೊಳ್ಳುತ್ತಾರೆ.
ಈ ಚಿತ್ರವನ್ನೊಮ್ಮೆ ಗಾಢವಾಗಿ ಅವಲೋಕಿಸಿ – ಚಿತ್ರವೇ ಎಲ್ಲವನ್ನೂ ಹೇಳುತ್ತಿದೆ!
ಮುಂದೆ ಮತ್ತೊಂದು ಎಲೆಕ್ಷನ್. ಸಿದ್ದರಾಮಯ್ಯ ಮುಖ್ಯಮಂತ್ರಿ. ಆಗ ಕೆ.ವಿ. ಪ್ರಭಾಕರ್ ಅವರನ್ನು ಸಿದ್ದರಾಮಯ್ಯನವರು ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುತ್ತಾರೆ. ಅದಾಗಿ ಮೊನ್ನೆ 22.05.2026ಕ್ಕೆ ಮೂರು ವರ್ಷ ಸಂದಿತು.
ಲಾಸ್ಟ್ (ಭಟ್) ಬಟ್ ನಾಟ್ ದಿ ಲೀಸ್ಟ್!
ಅಂದು ವಿಶ್ವೇಶ್ವರ್ ಭಟ್ ಪ್ರಭಾಕರ್ ಅವರನ್ನು ಡಿಸ್ಕರೇಜ್ ಮಾಡಿದ್ದರೆ! ಅಲ್ಲೋಗಿ ಏನ್ರೀ ಮಾಡ್ತೀರಿ… ಎಂದಿದ್ದರೆ! ಕೋಲಾರದ ಅಪ್ಪಟ ಪ್ರತಿಭೆ, ನ್ಯೂಸ್ ಪೇಪರ್ ಹಾಕುತ್ತಿದ್ದ ಹುಡುಗನೊಬ್ಬ ಇಂದು ಸಚಿವ ದರ್ಜೆ ಸ್ಥಾನಮಾನದ ಹುದ್ದೆಯೊಂದನ್ನು ಪಡೆಯುವಲ್ಲಿ ಅವಕಾಶ ವಂಚಿತನಾಗುತ್ತಿದ್ದ. ಹಾಗಾಗಿ ಭಟ್ಟರಿಗೂ ಅಭಿನಂದನೆಗಳು ಸಲ್ಲುತ್ತದೆ.
ಹಿರಿಯ ಪತ್ರಕರ್ತ ಶ್ರೀ ನಾಗೇಶ್ ಕಾಳೇನಹಳ್ಳಿ (Journalist Nagesh Kalenahalli) ಅವರ ಆ ಒಂದು ಫೇಸ್ಬುಕ್ ಪೋಸ್ಟ್ನಲ್ಲಿ ಅಷ್ಟೂ ವಿವರ ಇದೆ, ನೋಡಿ: