ಬೆಂಗಳೂರು: ಆರ್ಸಿಬಿ ಫ್ರ್ಯಾಂಚೈಸಿಯ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದ ಕ್ಷಣವಾಗಬೇಕಿತ್ತು, ಆದರೆ, ಅಲ್ಲಿ ಆದದ್ದೇ ಬೇರೆ. ಅಂದು ಆ ದುರಂತದ ಕ್ಷಣವಾಯಿತು ಎಂದು ಚಿನ್ನಸ್ವಾಮಿ ಕಾಲ್ತುಳಿತ ನೆನೆದು ವಿರಾಟ್ ಕೊಹ್ಲಿ ದುಃಖಭರಿತರಾಗಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಪ್ರಕರಣ ದುರಂತವಾದ 3 ತಿಂಗಳ ಬಳಿಕ ಆರ್ಸಿಬಿ ಆಟಾಗಾರ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿರುವರು.
ಆರ್ಸಿಬಿ ಅಧಿಕೃತ ಎಕ್ಸ್ ಖಾತೆಯ ಮೂಲಕ ಸಂದೇಶ ನೀಡಿರುವ ಕೊಹ್ಲಿ, ಜೂ.4ರ ಬುಧವಾರದಂದು ನಡೆದ ಆ ದುಃಖದ ಘಟನೆಯನ್ನು ಎದುರಿಸಲು ಜೀವನದಲ್ಲಿ ಯಾರಿಂದಲೂ ಸಾಧ್ಯವಿಲ್ಲ.
ಆರ್ಸಿಬಿ ಫ್ರ್ಯಾಂಚೈಸಿಯ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದ ಕ್ಷಣವಾಗಬೇಕಿತ್ತೋ, ಅದು ದುರಂತವಾಗಿ ಬದಲಾಯ್ತು. ಆ ಸಮಯದಲ್ಲಿ ಜೀವ ಕಳೆದುಕೊಂಡವರು ಮತ್ತು ಗಾಯಾಳುಗಳ ಬಗ್ಗೆ ನಾನು ಬಹಳ ಚಿಂತಿತನಾಗಿದ್ದೇನೆ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸಿದ್ದೇನೆ. ನೀವೆಲ್ಲರೂ ಇದೀಗ ನಮ್ಮ ಕಥೆಯ ಭಾಗವಾಗಿದ್ದೀರಿ. ಇನ್ಮುಂದೆ ನಾವು ಒಟ್ಟಾಗಿ ಕಾಳಜಿ, ಜವಾಬ್ದಾರಿ ಹಾಗೂ ಗೌರವದೊಂದಿಗೆ ಮುಂದುವರಿಯೋಣ ಎಂದು ತಮ್ಮ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.
ಜೂ.3ರಂದು ನಡೆದ ಅಂತಿಮ ಪಂದ್ಯದಲ್ಲಿ ಆರ್ಸಿಬಿ ತಂಡ 18 ವರ್ಷಗಳ ಬಳಿಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಜೂ.4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಹಲವರು ಆರ್ಸಿಬಿ ಅಭಿಮಾನಿಗಳು ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
