ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಇಳಿಸುವ ದುಸ್ಸಾಹಸಕ್ಕೆ ಮುಂದಾದ ಕಾಂಗ್ರೆಸ್ ಸರಕಾರ: ವಿಜಯೇಂದ್ರ (BY Vijayendra)
ಬೆಂಗಳೂರು: ಗ್ಯಾರಂಟಿಯಿಂದ (Guarantee Scheme) ಆರ್ಥಿಕ ಸಂಕಷ್ಟ, ಪೆಟ್ಟು ಬಿದ್ದಿದೆ. ಒಂದೊಂದೇ ನೆಪಗಳನ್ನು ಒಡ್ಡಿ ಈಗ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆಯನ್ನು ಲಕ್ಷ ಲಕ್ಷದಷ್ಟು ಇಳಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ (Congress) ಸರಕಾರ ಕೈ ಹಾಕಿದೆ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರು ಅರ್ಹರಿದ್ದಾರೋ ಅವರಿಗೆ ಕೊಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. 3 ರ್ಷದ ಕೆಳಗೆ ಇವರದೇ ಸರಕಾರ ಇತ್ತಲ್ಲವೇ? ಗ್ಯಾರಂಟಿ ಕೊಡುವಾಗ ಅರ್ಹತೆ, ಅನರ್ಹತೆಯನ್ನು ಯಾಕೆ ಯೋಚಿಸಿಲ್ಲ ಎಂದು ಪ್ರಶ್ನಿಸಿದರು. ಗ್ಯಾರಂಟಿಯಿಂದ ಕ್ಷೇತ್ರದ ಅಭಿವೃದ್ಧಿ ಆಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ಶಾಸಕರಾದ ದೇಶಪಾಂಡೆ ಹೇಳುತ್ತಾರೆ. ಗ್ಯಾರಂಟಿಯಿಂದ ಅಭಿವೃದ್ಧಿ ಆಗದೇ ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿ ಇದೆ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಯ ರಾಯರೆಡ್ಡಿ ಅವರೂ ಗ್ಯಾರಂಟಿಗಳಿಂದ ಸಂಕಷ್ಟ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ನುಡಿದರು.
ಈ ಎಲ್ಲಾ ವಾಸ್ತವ ಸತ್ಯ ಮರೆಮಾಚಿ ಲಕ್ಷ ಲಕ್ಷ ಅನರ್ಹ ಫಲಾನುಭವಿಗಳಿಗೆ ಚುನಾವಣೆ ವೇಳೆ ಗ್ಯಾರಂಟಿ ಕೊಟ್ಟರು ಆಗ ಹೇಳಿದ್ದು ಒಂದು; ಈಗ ಹೇಳೋದು ಒಂದು ಎಂದರು. ಚುನಾವಣೆ ಮೊದಲು ಅರ್ಹರಾದವರು ಚುನಾವಣೆ ಆದ ನಂತರ ಅನರ್ಹ ಎಂದು ಹೇಳುವುದು ಜನರಿಗೆ ಮಾಡಿದ ಅಪಮಾನ. ಇದು ಸರಿ ಅಲ್ಲ ಎಂದು ವಿವರಿಸಿದರು.
ಬಿಡದಿ ಟೌನ್ ಶಿಪ್ ಗೆ ವಿರೋಧ…
ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ ರೈತರ ಪರವಾಗಿ ನಾವು ನಿಲ್ಲುತ್ತೇವೆ. ಒತ್ತಾಯವಾಗಿ ರೈತರ ಜಮೀನು ಕಸಿಯಲು ನಾವು ಬಿಡುವುದಿಲ್ಲ. ಸ್ವತಃ ಸಿಎಂ ಅವರೇ ಆಸಕ್ತಿ ವಹಿಸಿ ರೈತರನ್ನು ಒಕ್ಕಲೆಬ್ಬಿಸಲು ಹೋಗಿರುವುದು ಸರಿ ಅಲ್ಲ. ಇದು ಅಕ್ಷಮ್ಯ ಅಪರಾಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾವು ಜಮೀನು ಬಿಡಲ್ಲ ಎಂದು ರೈತರೇ ಹೇಳಿದ್ದಾರೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರೇ ಸಿಎಂ ಮೇಲೆ ಒತ್ತಡ ಹೇರಿ ಇದನ್ನು ತಡೆಯಬೇಕು ರೈತರಿಗೆ ತೊಂದರೆ ಆಗುವುದನ್ನು ಖಂಡಿಸಿ ಬಿಜೆಪಿ ಹೋರಾಟ ಮಾಡಲಿದೆ. ಟೌನ್ ಶಿಫ್ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಹೆಸರು ಹೇಳಿ ದಲ್ಲಾಳಿತನ ಮಾಡಲು ಬಿಡಲ್ಲ ಭೂಸ್ವಾಧೀನಕ್ಕೆ ಕೆಐಎಡಿಬಿ ನಿಯಮ ಪಾಲನೆ ಮಾಡಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದ ಪಡ್ಯಂತ್ರ…
ಧರ್ಮಸ್ಥಳದ ಬುರುಡೇ ಪ್ರಕರಣ ಕಾಂಗ್ರೆಸ್ ಸರ್ಕಾರದ ಪಡ್ಯಂತ್ರ. ಆಗಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಾದಿಬೀದಿಯಲ್ಲಿ ಹೋಗುವ ನಗರ ನಕ್ಸಲರ ಮಾತು ಕೇಳಿ ಎಸ್ಐಟಿ ರಚಿಸಿದರು. ಅದರ ಅಗತ್ಯ ಇರಲಿಲ್ಲ. ಇದೇ ಈಗ ಸರ್ಕಾರಕ್ಕೆ ಗಂಡಾಂತರ ತಂದಿದೆ. ಇಡೀ ದೇಶದ ಮೂಲೆ ಮೂಲೆಯಿಂದ ಕೋಟಿ ಭಕ್ತರು ಧರ್ಮಸ್ಥಳಕ್ಕೆ ಬರ್ತಾರೆ. ಎಸ್ ಐಟಿ ರಚಿಸಲು ಸಿಎಂ ವಿವೇಚನೆ ಬಳಸಬೇಕಿತ್ತು ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ತಿಳಿಸಿದರು. ಬುರುಡೆ ಪ್ರಕರಣದಲ್ಲಿ ನೂರಾರು ಕೋಟಿ ಅವ್ಯವಹಾರ ಆಗಿದೆ ಎಂಬ ವರದಿಗಳಿವೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ಹೊಣೆ. ಅವರ ಆಸಕ್ತಿ ಏನಿತ್ತು ಎಂಬುದು ತಿಳಿಯಲಿ ಎಂದರು.
ಸಚಿವ ಸಂಪುಟಕ್ಕೆ ಎರಡೇ ಕೋಟಾ..
ಸಚಿವ ಸಂಪುಟಕ್ಕೆ ಸೇರಲು ಎರಡು ಕೋಟಾಗಳಿವೆ. ಒಂದು ಮ್ಯಾನೇಜ್ ಮೆಂಟ್ ಕೋಟ ಮತ್ತೊಂದು ಪೇಮೆಂಟ್ ಕೋಟ ಎರಡರಲ್ಲಿ ಯಾವುದು ಬೇಕು ಎಂದು ಮೊದಲೇ ತೀರ್ಮಾನ ಆಗಿ ಸಚಿವರಾಗ್ತಾರೆ ಎಂದು ವ್ಯಂಗ್ಯವಾಡಿದರು.

