ಬೆಂಗಳೂರು: ಯಾವುದೇ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿರಲಿ ಮೊದಲು ತಾಳ್ಮೆ, ಸಮಾಧಾನ ಮತ್ತು ಕೇಳುವ ವ್ಯವಧಾನ ಇದ್ದರೆ ಮಾತ್ರ ಅಂತಹ ಸಾಧಕ ವ್ಯಕ್ತಿ ಮಾಡಬಲ್ಲ. ಈ ಮೂರೂ ಗುಣಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾನು ರೂಢಿಸಿಕೊಂಡಿದ್ದೇನೆ. ಕೋಲಾರ ಜಿಲ್ಲೆಯ ಜನ, ರಾಜ್ಯದ ಎಲ್ಲ ಪತ್ರಕರ್ತರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ (K.V.Prabhakar) ಹೇಳಿದರು.
ಇಲ್ಲಿನ ಕೆಜಿ ರಸ್ತೆಯ ಕಂದಾಯ ಭವನದ 3ನೇ ಮಹಡಿಯಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಾಧ್ಯಮ- ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅದು 2013ರ ಸಮಯ. ಆಗ ಕನ್ನಡಪ್ರಭದಲ್ಲಿದ್ದ ನನಗೆ ಮಾಜಿ ರಾಮಚಂದ್ರಪ್ಪನವರು ಕರೆ ಮಾಡಿ ಸಿಎಂ ಅವರನ್ನು ಭೇಟಿಯಾಗುವಂತೆ ಹೇಳಿದರು. ವಿಶ್ವೇಶ್ವರ ಭಟ್ ಅವರಿಗೆ ಈ ವಿಷಯ ತಿಳಿಸಿದೆ. ಅವರ ಅನುಮತಿಯ ಮೇರೆಗೆ ಸಿಎಂ ಅವರನ್ನು ಭೇಟಿಯಾದೆ. ನಮ್ಮ ಜೊತೆ ಇದ್ದು ಮಾಧ್ಯಮ ನಿರ್ವಹಣೆ ಮಾಡುವಂತೆ ಸಿಎಂ ಹೇಳಿದರು.
ನಾನು ಒಂದು ವಾರ ಟೈಮ್ ಕೊಡಿ ಸರ್. ಎಷ್ಟು ಸಂಬಳ ಕೊಡ್ತೀರಿ ಸರ್? ಅಂತ ಕೇಳಿದೆ. ಏನು ಈ ಹುಡುಗ ಹೀಗೆ ಮಾತನಾಡ್ತಾನೆ? ಅಂತ ಸಿಎಂ ಕೇಳಿದ್ರು. ‘ಪತ್ರಿಕೆ ಬಿಡು, ನಮ್ಮೊಂದಿಗೆ ಬಂದು ಕೆಲಸ ಮಾಡು. ಇವರಿಗೆ ಸಂಬಳ ನಿಗದಿ ಮಾಡಿ’ ಅಂತ ಜೊತೆಗೆ ಇದ್ದ ಕೆಲ ಅಧಿಕಾರಿಗಳಿಗೆ ಹೇಳಿದರು. ಈ ವಿಷಯ ವಿಶ್ವೇಶ್ವರ್ ಭಟ್ ಅವರಿಗೆ ತಿಳಿಸಿದೆ. ಭಟ್ಟರು ಅನುಮತಿ ನೀಡಿದರು. ಆಗ ಸಿಎಂ ಅವರ ಮಾಧ್ಯಮ ಸಂಯೋಜಕನಾದೆ ಎಂದರು.
ಸಿದ್ದರಾಮಯ್ಯ ಅವರ ನೆರಳಿನೊಂದಿಗೆ 13 ವರ್ಷ ಕಳೆದಿದ್ದೇನೆ. ಅವರಿಂದ ಮೊಟ್ಟ ಮೊದಲು ನಾನು ಕಲಿತದ್ದು ತಾಳ್ಮೆ ಮತ್ತು ಸಮಾಧಾನ. 2013 ರಿಂದ 2018ರವರೆಗೆ ಅವರಿಂದ ಕಲಿಯಲು ಸಾಕಷ್ಟು ಸಮಯಾವಕಾಶ ಲಭಿಸಿತು. ಸಿಎಂ ಅವರಿಗೆ ಮೊದಲು ನನ್ನ ಧನ್ಯವಾದಗಳು ಸಲ್ಲುತ್ತವೆ ಎಂದರು.
ಪತ್ರಕರ್ತರ ಜೊತೆ ಇರುವಾಸೆ:
ಈ ಹೊಣೆಗಾರಿಕೆ ದೊರೆತಾಗ ಹೇಗೆ ನಿಭಾಯಿಸುವುದು? ಎನ್ನುವ ಪ್ರಶ್ನೆ ಕಾಡಿತು. ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರನ್ನು ಭೇಟಿಯಾದೆ. ನಡುವೆ ಅಧಿಕಾರದಲ್ಲಿಲ್ಲದಿದ್ದಾಗ ಸಿದ್ದರಾಮಯ್ಯನವರು ಈಗೇನು ಮಾಡುತ್ತೀಯಪ್ಪ? ಅಂತ ಕೇಳಿದರು. ಕಷ್ಟ, ಸುಖ ಏನಾದರಾಗಲಿ ಸರ್… ನಾನು ನಿಮ್ಮೊಂದಿಗೆ ಇರುತ್ತೇನೆ ಎಂದೆ. ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದರು.
ಸದಾ ಜೊತೆಯಲ್ಲಿದ್ದೇನೆ:
ಅಧಿಕಾರ ಇದ್ದಾಗ, ಇಲ್ಲದೆ ಇದ್ದಾಗಲೂ ಅವರ ಜೊತೆಯಲ್ಲಿಯೇ ಇದ್ದೇನೆ. 2023ರಲ್ಲಿ ಸಿದ್ದರಾಮಯ್ಯನವರು ಮತ್ತೆ ಸಿಎಂ ಆದರು. ನನಗೆ ಈ ಸ್ಥಾನ ಕರುಣಿಸಿದ್ದಾರೆ. ಎಲ್ಲ ಪತ್ರಕರ್ತರೂ ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಈ ಸ್ಥಾನಕ್ಕೆ ಬಂದಮೇಲೆ ಸಿಎಂ ಜೊತೆ ಕುಳಿತುಕೊಂಡು ಮನವಿ ಪತ್ರ ಸ್ವೀಕರಿಸುವುದೇ? ಅಥವಾ ಪತ್ರಕರ್ತರಿಗೆ ಏನಾದರೂ ನೆರವು ಮಾಡುವುದೇ? ಎನ್ನುವ ಪ್ರಶ್ನೆ ಕಾಡಿತು. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನ ಮಾಡಿದ್ದೇನೆ ಎಂದರು.
ಕೆಯುಡಬ್ಲೂೃಜೆಗೆ ಕೃತಜ್ಞತೆ:
ಪತ್ರಕರ್ತರ ದುಃಖ, ದುಮ್ಮಾನಗಳನ್ನು ಅರಿತಿದ್ದೇನೆ. ನಾನು ಸಿಎಂ ಮೀಡಿಯಾ ಅಡ್ವೈಸರ್ ಆಗಿದ್ದರೂ ನಿಮ್ಮೊಂದಿಗೆ ಇರುವ ಹಪ ಹಪಿ ನನ್ನದು. ಈ ವಿಷಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂೃಜೆ)ದವರಿಗೆ ಧನ್ಯವಾದಗಳನ್ನು ಸಲ್ಲಿಸಬೇಕು. ವಿಶೇಷವಾಗಿ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಜೊತೆಯಲ್ಲಿ ಇಡೀ ರಾಜ್ಯ ಸುತ್ತಿದ್ದೇನೆ. ಇದು ಸರ್ಕಾರ ಮತ್ತು ಸಂಘಟನಗಳ ನಡುವೆ ಸೇತುವೆಯಾಗಿ ಕೆಲಸ ಮಾಡಲು ಅನುಕೂಲವಾಗಿದೆ ಎಂದು ಹೇಳಿದರು.
ಬಸ್ ಪಾಸ್, ಆರೋಗ್ಯ ಸಂಜೀವಿನಿ:
ಪತ್ರಕರ್ತನಾಗಿ ನಾನು ಎಂಜಾಯ್ ಮಾಡಬಹುದಿತ್ತು. ಬದಲಾಗಿ ಪತ್ರಕರ್ತರಿಗೆ ಏನಾದರೂ ಕೊಡಬೇಕು ಎನ್ನಿಸಿದಾಗ ಬಸ್ ಪಾಸ್ ಸೌಲಭ್ಯ ಮತ್ತು ಸಿಎಂ ಆರೋಗ್ಯ ಸಂಜೀವಿನಿ ಯೋಜನೆ ರೂಪಿಸುವಲ್ಲಿ ನನಗೆ ಆತ್ಮತೃಪ್ತಿ ಇದೆ. ಇದರಲ್ಲಿರುವ ಕಠಿಣ ಷರತ್ತುಗಳನ್ನು ತೆಗೆದು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ವಾರದಲ್ಲಿಯೇ ಈ ಬಗ್ಗೆ ಗುಡ್ ನ್ಯೂಸ್ ಬರಲಿದೆ ಎಂದರು.
ನಾನು ಲ್ಟಿನಲ್ಲಿ ಬಂದವನಲ್ಲ:
ನಾನು ನೇರವಾಗಿ ಲಿಫ್ಟ್ ಹತ್ತಿಕೊಂಡು ಬಂದು ಪತ್ರಕರ್ತನಾದವನಲ್ಲ. ಒಂದೊಂದಾಗಿ ಮೆಟ್ಟಿಲುಗಳನ್ನು ಹತ್ತಿಕೊಂಡು ಈ ಸ್ಥಾನಕ್ಕೆ ಬಂದವನು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಅತ್ಯಂತ ಅವಶ್ಯ. ಮೊದಲು ನಾನು ಕೋಲಾರವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಿ, ಆ ಪರಿವಾರದಲ್ಲಿ ಊಟ ಮಾಡಿ ಬೆಳೆದಿದ್ದೇನೆ. ಸೈಕಲ್ನಲ್ಲಿ ಪತ್ರಿಕೆಗಳನ್ನು ಪೇರಿಸಿಕೊಂಡು ಪತ್ರಿಕೆಗಳನ್ನು ವಿತರಿಸುವ ಕೆಲಸ ಮಾಡಿದ್ದೇನೆ. ಅವರೊಂದಿಗೆ ಕುಟುಂಬದ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಬೆಂಗಳೂರಿಗೆ ಬರಲು ಹಿರಿಯ ಪತ್ರಕರ್ತರಾದ ವಾಸುದೇವ ಹೊಳ್ಳ, ಮಂಜುನಾಥ್, ಗೋಪಿನಾಥ್ ಮತ್ತಿತರರು ಕಾರಣ. ಅವರ ಪ್ರೀತಿ, ವಾತ್ಸಲ್ಯ ಎಂದಿಗೂ ಮರೆಯಲಾರೆ ಎಂದು ಪ್ರಭಾಕರ್ ಹೇಳಿದರು.
ಸ್ವಾತಂತ್ರವನ್ನು ಪ್ರಶ್ನಿಸಿಲ್ಲ:
ವಿದ್ಯುನ್ಮಾನ ಸುದ್ದಿ ವಾಹಿನಿಗಳಲ್ಲಿ ಸಿಎಂ ಕುರಿತ ಹಲವು ಸುದ್ದಿಗಳು ಪ್ರಕಟವಾಗುತ್ತಿರುತ್ತವೆ. ಸಿಎಂ ಆಗಲಿ, ನಾನಾಗಲೀ ಅವರ ಮಾಧ್ಯಮ ಸ್ವಾತಂತ್ರ್ಯವನ್ನು ಎಂದಿಗೂ ಪ್ರಶ್ನೆ ಮಾಡಿಲ್ಲ. ನನಗೆ ತಿಳಿದಷ್ಟು ಅವರಿಗೆ ಮನವರಿಕೆ ಮಾಡಿಕೊಟ್ಟಿರುತ್ತೇನೆ. ಆದರೂ ಸಿಎಂ ಕುರಿತ ಕೆಲವು ಸುದ್ದಿಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಇರುತ್ತವೆ. ಅಂತಹ ಸುದ್ದಿಗಳನ್ನು ಎಂದಿಗೂ ಬ್ಲಾಕ್ ಮಾಡುವ ಕೆಲಸ ಸಿಎಂ ಆಗಲಿ, ನಾನಾಗಲೀ ಮಾಡಿಲ್ಲ ಎಂದರು.

ಸತೋಷವಾಯಿತು:
ಬೀದರಿನಿಂದ ಓರ್ವ ಪತ್ರಕರ್ತರು ನನ್ನೊಂದಿಗೆ ಮಾತನಾಡಿ ಕಂಗ್ರ್ಯಾಟ್ಸ್ ಹೇಳಿದರು. ನನಗೇನಾದರೂ ವಿಶೇಷ ಪ್ರಶಸ್ತಿ ಅಥವಾ ವಿಧಾನ ಪರಿಷತ್ ಸದಸ್ಯನ ಸ್ಥಾನಮಾನ ಸಿಕ್ಕಿತಾ? ಅಂತ ಆಲೋಚಿಸಿದೆ. ನನಗೆ ಕಂಗ್ರ್ಯಾಟ್ಸ್ ಹೇಳಿದಿರಿ? ಅಂತ ಕೇಳಿದೆ. ಅದಕ್ಕವರು ಸರ್, ನೀವು ಸಿಎಂ ಮಾಧ್ಯಮ ಸಲಹೆಗಾರರಾಗಿ ಇಂದಿಗೆ ಮೂರು ವರ್ಷ ಆಯ್ತು ಸಾರ್. ಹೀಗಾಗಿ ನಿಮಗೆ ಅಭಿನಂದನೆಗಳನ್ನು ಹೇಳಿದೆ. ಆಗ ಎಲ್ಲವೂ ನೆನಪಾಯಿತು.
ನಿಜಕ್ಕೂ ಸಂತೋಷವಾಯ್ತು:
ಅಂದೇ ಶಿವಾನಂದ ತಗಡೂರು ಬೆಳಿಗ್ಗೆಯೇ ಪೋನ್ ಮಾಡಿದ್ದರು. ನೀವು ನಮ್ಮ ಸಂಘಕ್ಕೆ ಬರಬೇಕು ಅಂದರು. ಯಾಕೆ? ಅಂತ ಕೇಳಿದೆ. ನಿಮಗೆ ಸನ್ಮಾನಿಸಬೇಕು. ಈ ನೆಪದಲ್ಲಿ ನಿಮ್ಮ ಜೊತೆಗೆ ಮಾಧ್ಯಮ ಸಂವಾದ ಮಾಡಬೇಕು ಎಂದರು. ನಾನೇನು ಕಡೆದು ಕಟ್ಟೆ ಹಾಕಿದ್ದೇನೆ ಬಿಡಿ ಅಂದೆ. ಈಗ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ನಿಮ್ಮೆಲ್ಲರನ್ನೂ ನೋಡಿದಾಗ ನಿಜಕ್ಕೂ ಸಂತೋಷವಾಯಿತು ಎಂದು ಹೆಮ್ಮೆಯ ಭಾವ ವ್ಯಕ್ತಪಡಿಸಿದರು.
ಕೆವಿಪಿ ಅವರಲ್ಲಿ ತಾಯ್ತನ ಇದೆ:
ಆಶಯ ನುಡಿಗಳನ್ನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಕೆ.ವಿ.ಪ್ರಭಾಕರ್ ಅವರು ಸಿಎಂ ಮಾಧ್ಯಮ ಸಲಹೆಗಾರರಾದಾಗ 3 ವರ್ಷದ ಹಿಂದೆ ಇದೇ ಸಭಾಂಗಣದಲ್ಲಿ ಆಹ್ವಾನಿಸಿ ಸನ್ಮಾನಿಸಿ, ಅಭಿನಂದಿಸಿದ್ದೆವು. ಈಗ ಮೂರು ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂದು ಇದೇ ವೇದಿಕೆಯಲ್ಲಿ ಸನ್ಮಾನಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.
ಗರ್ವ, ದರ್ಪ ತೋರದ ಕೆವಿಪಿ:
ಕಳೆದ ಮೂರು ವರ್ಷದಲ್ಲಿ ಕೆಯುಡಬ್ಲ್ಯೂಜೆ ಗೆ ಕೆ.ವಿ.ಪ್ರಭಾಕರ್ ನೆರವು ನೀಡಿದ್ದಾರೆ. ಕಚೇರಿಯ ಅಭಿವೃದ್ಧಿಗೆ ಸಹಾಯ ಮಾಡಿದ್ದಾರೆ. ಪತ್ರಕರ್ತರ ಮನಸ್ಸಿನ ಬೇಗುದಿ ಅರಿತಿರುವ ಪ್ರಭಾಕರ್ ಅವರು, ನಮ್ಮ ನಿಮ್ಮ ಹಾಗೆ ಸಾಮಾನ್ಯ ಪತ್ರಕರ್ತರಾಗಿ ಇಂದು ಇಷ್ಟು ದೊಡ್ಡ ಸ್ಥಾನದಲ್ಲಿದ್ದಾರೆ. ಬದುಕಿನ ಹಾದಿಯಲ್ಲಿ ಕೆ.ವಿ.ಪ್ರಭಾಕರ್ ಎಂದಿಗೂ ಎಡವಿ ಬಿದ್ದಿಲ್ಲ. ಇವತ್ತಿಗೂ ಅವರಲ್ಲಿ ಗರ್ವ, ದರ್ಪಗಳು ಇಲ್ಲ. ಸೌಮ್ಯ ಭಾವ ಮತ್ತು ತಾಯ್ತನದ ಪ್ರೀತಿ ಇದೆ. ಸಾಮಾನ್ಯ ಪತ್ರಕರ್ತನೊಬ್ಬ ವಿಧಾನಸೌಧದ ಕುರ್ಚಿಯಲ್ಲಿ ಕುಳಿತುಕೊಂಡಿರುವುದನ್ನು ಕಣ್ತುಂಬಿಕೊಳ್ಳುವುದೇ ಸಂಭ್ರಮ ಎಂದರು.
ಸರ್ಕಾರ ಮತ್ತು ಪತ್ರಕರ್ತರ ನಡುವಿನ ಸೂಕ್ಷ್ಮ ಸಂಘರ್ಷಗಳನ್ನು ಬಗೆಹರಿಸಿದ್ದಾರೆ. ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ, ಆರೋಗ್ಯ ವಿಮೆ ದೊರಕಿಸಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ. ಕೆಯುಡಬ್ಲ್ಯೂಜೆ ಕಚೇರಿ ಸಭಾಂಗಣ ನವೀಕರಣ ಸೇರಿ, ಇವರ ಅವಧಿಯಲ್ಲಿ ಪತ್ರಕರ್ತರಿಗೆ ಸಾಕಷ್ಟು ಅನುಕೂಲತೆಗಳು ಆಗಿವೆ. ಪತ್ರಿಕಾ ವಿತರಕರಿಗೆ ವಿಮಾ ಯೋಜನೆ, ವಿತರಕರು ಮತ್ತು ಛಾಯಾಗ್ರಾಹಕರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿದ ಹೆಗ್ಗಳಿಕೆ ಇವರದು ಎಂದರು.
ಇವರಲ್ಲಿ ಸಾಮರ್ಥ್ಯ ಇದೆ:
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನ್ ಮಾತನಾಡಿ, ಕೆ.ವಿ.ಪ್ರಭಾಕರ್ ನಡೆದು ಬಂದ ಹಾದಿ ಸುಲಭದ್ದಲ್ಲ. ನನಗೆ ಮೂವರು ಪ್ರಭಾಕರ್ ಗೊತ್ತಿದ್ದಾರೆ. ಅವರಲ್ಲಿ ಎಲ್ ಟಿ ಟಿ ಇ ಪ್ರಭಾಕರ್ ಅಂತ ಹೆಸರು ಪ್ರಸ್ತಾಪಿಸುತ್ತಲೇ ಸಭೆಯಲ್ಲಿದ್ದ ಪತ್ರಕರ್ತರ ಮುಖದಲ್ಲಿ ನಗೆಯ ಅಲೆ ತೇಲಿ ಬಂದಿತು. ನಂತರ ಕನ್ನಡ ಚಿತ್ರರಂಗದ ಟೈಗರ್ ಪ್ರಭಾಕರ್ ಹೆಸರು ಹೇಳಿ…. ಬಳಿಕ ಕೆ.ವಿ.ಪ್ರಭಾಕರ್ ಸಿಎಂ ಅಂತ ಬ್ರಾಕೆಟ್ ನಲ್ಲಿ ಹಾಕ್ತೀವಲ್ಲ ಆ ಪ್ರಭಾಕರ್ ಗೊತ್ತು. ನನ್ನ ಮೊಬೈಲ್ ನಲ್ಲಿ ಪ್ರಭಾಕರ್ ಸಿಎಂ ಅಂತ ಹೆಸರು ಹಾಕಿಕೊಂಡಿರುವೆ ಎಂದಾಗ ಸಭೆಯಲ್ಲಿದ್ದವರೆಲ್ಲ ನಕ್ಕರು.
ನಾನು 20 ರಾಜ್ಯಗಳಲ್ಲಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದೇನೆ. ಕರ್ನಾಟಕದಲ್ಲಿ ಫ್ರೀ ಜರ್ನಲಿಸಂ ಇದೆ. ಪತ್ರಕರ್ತರು ಇಲ್ಲಿ ಸೇಫ್. ಇಲ್ಲಿನ ಸಿಎಂ ಪತ್ರಕರ್ತರಿಗೆ ತುಂಬಾ ಅವಕಾಶಗಳನ್ನು ನೀಡಿದ್ದಾರೆ. ನಿಜಕ್ಕೂ ನನಗೆ ಖುಷಿಯ ವಿಚಾರ. ಸೈಕಲ್ ಮೇಲೆ ಪೇಪರ್ ಗಳನ್ನಿಟ್ಟು ಮನೆ ಮನೆಗೆ ಪತ್ರಿಕೆ ಹಂಚುತ್ತಿದ್ದ ಪ್ರಭಾಕರ್ ವಿಧಾನಸೌಧಕ್ಕೆ ಬಂದಿದ್ದಾರೆ ಎಂದು ಸ್ಮರಿಸಿದರು.
ಬಾರೋ ಸಾಧನ ಕೇರಿಗೆ:
ಸಂವಾದ ಕಾರ್ಯಕ್ರಮಕ್ಕೂ ಮುನ್ನ ಪಂಕಜ ಅವರು ವರಕವಿ ದ.ರಾ.ಬೇಂದ್ರೆ ಅವರ ಪ್ರಸಿದ್ಧ ಕವನ ‘ಬಾರೋ ಸಾಧನ ಕೇರಿಗೆ’ ಎನ್ನುವ ಅರ್ಥಪೂರ್ಣ ಭಾವಗೀತೆಯನ್ನು ಹಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್ ಸ್ವಾಗತಿಸಿದರು. ರಾಜ್ಯ ಖಜಾಂಚಿಗಳಾದ ವಾಸುದೇವ ಹೊಳ್ಳ, ಕೆರಗೋಡು ಮತ್ತಿತರರು ಇದ್ದರು. ನಂತರ, ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಪತ್ರಿಕಾ ಸಂಪಾದಕರು, ಹಿರಿಯ ವರದಿಗಾರರು, ಪತ್ರಕರ್ತರು, ಮುದ್ರಣ ಹಾಗೂ ವಿದ್ಯುನ್ಮಾನ ಪತ್ರಿಕೋದ್ಯಮದ ಪ್ರತಿಭೆಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಬಳಿಕ ಕೆ.ವಿ.ಪ್ರಭಾಕರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

