ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಗೌರವಾನ್ವಿತ ಶ್ರೀ ಡಿ. ಕೆ. ಶಿವಕುಮಾರ್ ಅವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ಎಸ್. ರಘುನಾಥ್ ಅವರು ಖುದ್ದಾಗಿ ಭೇಟಿ ಮಾಡಿ ಅಭಿನಂದನೆ ಹಾಗೂ ಶುಭಾಶಯಗಳನ್ನು ಸಲ್ಲಿಸಿದರು (AKBMS congratulate DK Shivakumar).
ಬುಧವಾರ ಸಂಜೆ ನಡೆದ ಈ ಭೇಟಿಯಲ್ಲಿ ಮಹಾಸಭಾದ ಎಲ್ಲಾ ಪದಾಧಿಕಾರಿಗಳ ಪರವಾಗಿ ಮುಖ್ಯಮಂತ್ರಿ ಅವರಿಗೆ ಶುಭಾಶಯಗಳನ್ನು ತಿಳಿಸಲಾಯಿತು. ರಾಜ್ಯದ ಅಭಿವೃದ್ಧಿ ಮತ್ತು ಜನಪರ ಆಡಳಿತಕ್ಕಾಗಿ ತಮ್ಮ ದೀರ್ಘ ರಾಜಕೀಯ ಅನುಭವ ಹಾಗೂ ನಾಯಕತ್ವದ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸುವ ಮೂಲಕ ಜನರ ನಿರೀಕ್ಷೆಗಳನ್ನು ಈಡೇರಿಸುವ ವಿಶ್ವಾಸವನ್ನು ಮಹಾಸಭಾ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ಶ್ರೀ ಎಸ್. ರಘುನಾಥ್ ಅವರು, ಸುಮಾರು ನಾಲ್ಕು ದಶಕಗಳ ರಾಜಕೀಯ ಪರಿಶ್ರಮ ಮತ್ತು ಅನುಭವದ ಫಲವಾಗಿ ರಾಜ್ಯದ ಆಡಳಿತದ ಜವಾಬ್ದಾರಿ ಶ್ರೀ ಡಿ. ಕೆ. ಶಿವಕುಮಾರ್ ಅವರಿಗೆ ಲಭಿಸಿದೆ ಎಂದು ತಿಳಿಸಿದರು. ಪ್ರೀತಿ, ಕರುಣೆ, ಪಾರದರ್ಶಕತೆ ಹಾಗೂ ನ್ಯಾಯಸಮ್ಮತ ಆಡಳಿತದ ಮೂಲಕ ರಾಜ್ಯದ ಜನರ ಹಿತಾಸಕ್ತಿಯನ್ನು ಕಾಪಾಡುತ್ತಾ ಯಶಸ್ವಿ ಮುಖ್ಯಮಂತ್ರಿಗಳಾಗಿ ಹೊರಹೊಮ್ಮುವಂತೆ ಹಾರೈಸಿದರು.
ಇದೇ ವೇಳೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪರವಾಗಿ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರವನ್ನೂ ಸಲ್ಲಿಸಲಾಯಿತು. ಮುಂದಿನ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯಲಿದೆ ಎಂಬ ನಿರೀಕ್ಷೆಯನ್ನು ಮಹಾಸಭಾ ವ್ಯಕ್ತಪಡಿಸಿತು.
ಈ ಕುರಿತು ಮಾಹಿತಿ ನೀಡಿದ ಎ. ದಿಲೀಪ್ ಕುಮಾರ್, ಉಪಾಧ್ಯಕ್ಷರು – ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ರಾಜ್ಯಾಧ್ಯಕ್ಷರು – ವಿಶ್ವ ಬ್ರಾಹ್ಮಣ ಸಂಘ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಅವರ ನಾಯಕತ್ವ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಜನತೆ ಮತ್ತು ವಿವಿಧ ಸಮುದಾಯಗಳ ಆಶೋತ್ತರಗಳಿಗೆ ಸ್ಪಂದಿಸುವ ಜನಪರ ಆಡಳಿತವನ್ನು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ನೀಡುವರೆಂಬ ನಿರೀಕ್ಷೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವ್ಯಕ್ತಪಡಿಸಿದೆ.

