*ರಾಜಾಜಿನಗರ ಕ್ಷೇತ್ರದಲ್ಲಿ 300 ಕೋಟಿ ರೂಗೂ ಅಧಿಕ ಮೊತ್ತದ ಟೆಂಡರ್ ಹಗರಣ(Tender Scam): ಶಾಸಕ ಸುರೇಶ್ ಕುಮಾರ್ ವಿರುದ್ಧ ದೂರು ಸಲ್ಲಿಸಿದ್ದಾರೆ
ಲೋಕಾಯುಕ್ತಕ್ಕೆ ದೂರು* ಬೆಂಗಳೂರು,ಜುಲೈ.2: ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಅನುದಾನ ಹಾಗೂ ಬಿಬಿಎಂಪಿಯಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾರಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಶಾಸಕ ಎಸ್. ಸುರೇಶ್ ಕುಮಾರ್ ವಿರುದ್ಧ ವಕೀಲರಾದ ಸೂರ್ಯ ಮುಕುಂದರಾಜ್ ಅವರು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. ಶಾಸಕರು ಮತ್ತು ಸಂಬಂಧಪಟ್ಟ ಬಿಬಿಎಂಪಿ(BBMP) ಅಧಿಕಾರಿಗಳ ವಿರುದ್ಧ ತಕ್ಷಣವೇ ತನಿಖೆ(Enquiry) ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದೂರು ಸಲ್ಲಿಸಿದ ನಂತರ ಲೋಕಾಯುಕ್ತ ಕಚೇರಿ ಮುಂದೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಸಕರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು, ನಿಯಮಗಳನ್ನು ಗಾಳಿಗೆ ತೂರಿ, ತಮಗೆ ಬೇಕಾದ ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಟ್ಟಿದ್ದಾರೆ. ಈ ಮೂಲಕ ಸರ್ಕಾರಿ ಖಜಾನೆಗೆ ಭಾರಿ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ. ಜಿಎಸ್ಟಿ ಹಾಗೂ ಇಲಾಖೆಯ ಇತರೆ ವೆಚ್ಚಗಳೂ ಸೇರಿದರೆ ಈ ಒಟ್ಟು ಹಗರಣದ ಮೊತ್ತ 300 ಕೋಟಿ ರೂ ಮೀರುತ್ತದೆ ಎಂದು ಹೇಳಿದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ಸಾರ್ವಜನಿಕ ಹಣದ ಸಂರಕ್ಷಣೆಯ ದೃಷ್ಟಿಯಿಂದ ಲೋಕಾಯುಕ್ತರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಶಾಸಕ ಸುರೇಶ್ ಕುಮಾರ್ ಹಾಗೂ ಅವರಿಗೆ ಸಹಕರಿಸಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಮಗ್ರ ತನಿಖೆ ನಡೆಸಿ, ಕಾನೂನು ರೀತ್ಯಾ ಕಠಿಣ ಶಿಕ್ಷೆ ಜರುಗಿಸಬೇಕು ಎಂದು ಸೂರ್ಯ ಮುಕುಂದರಾಜ್ ಒತ್ತಾಯಿಸಿದರು. ದೂರಿನಲ್ಲಿರುವ ಪ್ರಮುಖ ಹಗರಣಗಳು ಮತ್ತು ಗಂಭೀರ ಆರೋಪಗಳು: ಎಲ್1 ಗುತ್ತಿಗೆದಾರರನ್ನು ತಪ್ಪಿಸಿ 14 ಕೋಟಿ ನಷ್ಟ: 2020 ರ 72.25 ಕೋಟಿ ಮೊತ್ತದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಟೆಂಡರ್ನಲ್ಲಿ ಅತ್ಯಂತ ಕಡಿಮೆ ಬಿಡ್ ಮಾಡಿದ್ದ ಅರ್ಹ ಗುತ್ತಿಗೆದಾರರನ್ನು ತಪ್ಪಿಸಲು ಶಾಸಕರು ಅಧಿಕಾರಿಗಳ ಮೇಲೆ ದೂರವಾಣಿ ಮೂಲಕ ಒತ್ತಡ ಹೇರಿದ್ದಾರೆ. ಬಿಬಿಎಂಪಿಯ ಟಿವಿಸಿಸಿ(TVCC) ಮುಖ್ಯ ಅಭಿಯಂತರರ ಕಛೇರಿ ಟಿಪ್ಪಣಿಯಲ್ಲೇ ಶಾಸಕರ ಈ ದಬ್ಬಾಳಿಕೆ ದಾಖಲಾಗಿದೆ. ತದನಂತರ ಎಲ್2 ಬಿಡ್ದಾರರು ನಿರಾಕರಿಸಿದಾಗ, ತಮ್ಮ ಬೇನಾಮಿಗಳಿಗೆ ಲಾಭ ಮಾಡಲು 53 ಕೋಟಿಯ ಕಾಮಗಾರಿಯನ್ನು 67 ಕೋಟಿಗೆ ಏರಿಸಿ, ಸರ್ಕಾರಕ್ಕೆ ನೇರವಾಗಿ 14 ಕೋಟಿ ನಷ್ಟ ಉಂಟುಮಾಡಿದ್ದಾರೆ ಎಂದು ಸೂರ್ಯ ಮುಕುಂದ್ ರಾಜ್ ದೂರಿದರು. ರಸ್ತೆ ನಿಧಿಯ ದುರುಪಯೋಗ – ಉದ್ದೇಶಪೂರ್ವಕ ವಿಳಂಬ: ಭಾಷಾನಗರದ ರಸ್ತೆ ಡಾಂಬರೀಕರಣದ 60 ಲಕ್ಷ ಮೊತ್ತದ ಟೆಂಡರ್ನ ಹಣಕಾಸು ಬಿಡ್ ಅನ್ನು ಕಳೆದ 4 ವರ್ಷಗಳಿಂದ ತೆರೆಯದೆ ತಡೆಹಿಡಿಯಲಾಗಿದೆ. ನಾಗರಿಕರ ಮೂಲಸೌಕರ್ಯಕ್ಕೆ ಮೀಸಲಿದ್ದ ಈ ಹಣವನ್ನು ನಿಯಮಬಾಹಿರವಾಗಿ ವರ್ಗಾಯಿಸಿ ಪಾರ್ಕ್ಗಳ ಸೌಂದರ್ಯೀಕರಣಕ್ಕೆ ಬಳಸಲಾಗುತ್ತಿದ್ದು, ಕ್ಷೇತ್ರದ ರಸ್ತೆಗಳು ಗುಂಡಿಮಯವಾಗಲು ಶಾಸಕರ ತಪ್ಪು ನಿರ್ಧಾರಗಳೇ ಕಾರಣ ಎಂದರು. ಟೈಲರ್ ಮಾಡ್ [Tailor-Made] ಷರತ್ತುಗಳು ಮತ್ತು ಮುಕ್ತ ಸ್ಪರ್ಧೆಗೆ ತಡೆ: ಸಿಎಂ ಇನ್ಫ್ರಾಸ್ಟ್ರಕ್ಚರ್ ಗ್ರಾಂಟ್ಸ್ ಅಡಿಯ ಪ್ಯಾಕೇಜ್ಗಳಲ್ಲಿ (ಒಟ್ಟು 33.97 ಕೋಟಿ) ಸಾಮಾನ್ಯ ರಸ್ತೆ ಕಾಮಗಾರಿಗಳ ಟೆಂಡರ್ನಲ್ಲಿ ಉದ್ದೇಶಪೂರ್ವಕವಾಗಿ ಟೆನ್ಸಿಲ್ ರೂಫಿಂಗ್ ಮತ್ತು ಎಫ್.ಆರ್.ಪಿ ಕವರ್ಸ್ ನಂತಹ ವಿಶೇಷ ತಾಂತ್ರಿಕ ವಸ್ತುಗಳನ್ನು ಸೇರಿಸಿ, ತಮಗೆ ಬೇಕಾದ ನಿರ್ದಿಷ್ಟ ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ಸಿಗುವಂತೆ ಟೈಲರ್ ಮಾಡ್ ಷರತ್ತುಗಳನ್ನು ವಿಧಿಸಲಾಗಿದೆ. ಏಕೈಕ ಬಿಡ್ದಾರರಿಗೆ ಮಣೆ: 2022-23 ನೇ ಸಾಲಿನ 150 ಕೋಟಿ ಮೊತ್ತದ ಬೃಹತ್ ಕಾಮಗಾರಿಗಳು ಹಾಗೂ 2025-26 ನೇ ಸಾಲಿನ 10 ಕೋಟಿ ಮತ್ತು 9 ಕೋಟಿ ವೆಚ್ಚದ ಸರಣಿ ಟೆಂಡರ್ಗಳಲ್ಲೂ ನಿಯಮಾವಳಿಗಳನ್ನು ಗಾಳಿಗೆ ತೂರಿ ಮುಕ್ತ ಸ್ಪರ್ಧೆಯನ್ನು ನಿರ್ಬಂಧಿಸಿ, ಏಕೈಕ ಬಿಡ್ದಾರರಿಗೆ ಅನುಕೂಲ ಮಾಡಿಕೊಡಲಾಗಿದೆ. ಅಕ್ರಮ ಸೈಟ್ ವಿಸಿಟ್ ನಿಯಮ ಮತ್ತು ಯಂತ್ರೋಪಕರಣಗಳ ಷರತ್ತು ಡಿಲೀಟ್: ಟೆಂಡರ್ನಲ್ಲಿ ಭಾಗವಹಿಸುವ ಮುನ್ನ ಸೈಟ್ ವಿಸಿಟ್ ಮಾಡಿ ರಿಜಿಸ್ಟರ್ನಲ್ಲಿ ಸಹಿ ಮಾಡಬೇಕೆಂಬ ಕಡ್ಡಾಯ ನಿಯಮ ತರಲಾಗಿದೆ. ಇದು ಯಾರು ಬಿಡ್ ಮಾಡುತ್ತಿದ್ದಾರೆ ಎಂದು ಮೊದಲೇ ತಿಳಿದು ಬೇರೆಯವರನ್ನು ಹೊರದಬ್ಬುವ ತಂತ್ರವಾಗಿದೆ. ಅಷ್ಟೇ ಅಲ್ಲದೆ, ತಮ್ಮ ಬೇನಾಮಿಗಳ ಬಳಿ ಯಂತ್ರೋಪಕರಣಗಳು ಇಲ್ಲದ ಕಾರಣ 1 ಕೋಟಿಗೂ ಹೆಚ್ಚಿನ ಟೆಂಡರ್ಗಳಲ್ಲಿ ಇರಬೇಕಾದ ಕಡ್ಡಾಯ ಯಂತ್ರೋಪಕರಣಗಳ ನಿಯಮವನ್ನೇ ಡಿಲೀಟ್ ಮಾಡಲಾಗಿದೆ ಎಂದು ಸೂರ್ಯ ಮುಕುಂದ್ ರಾಜ್ ಲೋಕಾಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ. ಟೆಂಡರ್ ಗೌಪ್ಯತೆ ಉಲ್ಲಂಘನೆ: ಡಿಫರೆನ್ಷಿಯಲ್ ಇಎಂಡಿ(Differencial EMD) ವಿವರಗಳನ್ನು ತಾಂತ್ರಿಕ ಬಿಡ್ ತೆರೆದ ತಕ್ಷಣವೇ ಅಧಿಕಾರಿಗಳು ನೋಡುವಂತೆ ಮಾಡಿ, ಹಣಕಾಸು ಬಿಡ್ ತೆರೆಯುವ ಮುನ್ನವೇ ಯಾರು ಎಷ್ಟು ಕಡಿಮೆ ದರ ಹಾಕಿದ್ದಾರೆ ಎಂಬುದನ್ನು ಮೊದಲೇ ಅಂದಾಜು ಮಾಡಿ ವಂಚಿಸಲಾಗಿದೆ ದೂರಿನಲ್ಲಿ ವಿವರಿಸಿದ್ದಾರೆ.

