ನವ್ಯದೀಶ (Navyadeesha) ಸಂಸ್ಥೆ ವತಿಯಿಂದ ಸಿರಾ ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದಲ್ಲಿ ಆಯೋಜಿಸಿದ್ದ ಯುವಜನ ಸಂಘಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಯುವಜನ ಸಂಘಗಳ ಕಾರ್ಯಾಚರಣೆ, ಸಮುದಾಯ ಅಭಿವೃದ್ಧಿಯಲ್ಲಿ ಸಂಘಗಳ ಪಾತ್ರ ಹಾಗೂ ಯುವ ನಾಯಕತ್ವದ ಕುರಿತು ಅಧಿವೇಶನ ನಡೆಸಿದರು.
ಯುವಜನರು ತಮ್ಮ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಹೊರಗಿನಿಂದ ಯಾರಾದರೂ ಬಂದು ಪರಿಹರಿಸುತ್ತಾರೆ ಎಂಬ ಮನೋಭಾವದಿಂದ ಹೊರಬಂದು, ಸಮಸ್ಯೆಗಳನ್ನು ಗುರುತಿಸಿ, ಅವುಗಳ ಕಾರಣಗಳನ್ನು ಅರ್ಥಮಾಡಿಕೊಂಡು, ಪರಿಹಾರಕ್ಕಾಗಿ ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಯುವಜನ ಸಂಘಗಳು ಗ್ರಾಮ ಮಟ್ಟದಲ್ಲಿ ಯುವಕರನ್ನು ಒಗ್ಗೂಡಿಸುವ ಹಾಗೂ ನಾಯಕತ್ವ ಬೆಳೆಸುವ ಪ್ರಮುಖ ವೇದಿಕೆಗಳಾಗಬೇಕು ಎಂದು ಅವರು ತಿಳಿಸಿದರು.
ಗ್ರಾಮಗಳಲ್ಲಿನ ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಪರಿಸರ ಸಂರಕ್ಷಣೆ, ಸಾರ್ವಜನಿಕ ಸೌಲಭ್ಯಗಳು, ಮಕ್ಕಳ ಹಾಗೂ ಯುವಜನರ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳಲ್ಲಿ ಯುವಜನ ಸಂಘಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸ್ಥಳೀಯ ಆಡಳಿತ ವ್ಯವಸ್ಥೆಯೊಂದಿಗೆ ಸಮನ್ವಯ ಸಾಧಿಸಿ, ಸಮುದಾಯದ ಅಗತ್ಯಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವಲ್ಲಿ ಯುವಜನರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಯುವ ನಾಯಕತ್ವ ಎಂದರೆ ಕೇವಲ ಸಂಘದ ಪದಾಧಿಕಾರಿಯಾಗುವುದಲ್ಲ. ಇತರರನ್ನು ಪ್ರೇರೇಪಿಸುವುದು, ತಂಡವಾಗಿ ಕೆಲಸ ಮಾಡುವುದು, ಜವಾಬ್ದಾರಿ ತೆಗೆದುಕೊಳ್ಳುವುದು ಹಾಗೂ ಸಮುದಾಯದ ಹಿತಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಾಗಾರದಲ್ಲಿ ಸಿರಾ ತಾಲ್ಲೂಕಿನ 12 ಗ್ರಾಮಗಳ ವಿವಿಧ ಯುವಜನ ಸಂಘಗಳ ಪದಾಧಿಕಾರಿಗಳು ಭಾಗವಹಿಸಿ, ಸಂಘಗಳ ಪರಿಣಾಮಕಾರಿ ಕಾರ್ಯಾಚರಣೆ ಹಾಗೂ ಮುಂದಿನ ಚಟುವಟಿಕೆಗಳ ಕುರಿತು ಚರ್ಚಿಸಿದರು.
ಕಾರ್ಯಕ್ರಮದಲ್ಲಿ ನವ್ಯದೀಶ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಮೇಘರಾಮ್ ದಾಸ್, ಶ್ರೀಮತಿ ಅಶ್ವಿನಿ, ಶ್ರೀ ಮಂಜುನಾಥ್ ಹಾಗೂ ಶ್ರೀ ಜನಾರ್ಧನ್ ಉಪಸ್ಥಿತರಿದ್ದರು.

