ಕರಾವಳಿ (Karavali) ಕರ್ನಾಟಕದ ಸಾಂಸ್ಕೃತಿಕ (Cultural) ಅಸ್ಮಿತೆಯ ಪತ್ರೀಕವಾಗಿರುವ ಯಕ್ಷಗಾನ (Yakshagana) ಕಲೆಯ ಅಪೂರ್ವ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಉದ್ದೇಶದಿಂದ ಮಂಗಳೂರಿನಲ್ಲಿ ಯಕ್ಷಗಾನ ವಿದ್ಯುನ್ಮಾನ ದಾಖಲೆಗಳ ಸಂಗ್ರಹಾಲಯ (ಯಕ್ಷಗಾನ ಆರ್ಕೈವ್ಸ್) ಸ್ಥಾಪಿಸುವ ಯೋಜನೆಯನ್ನು ಇದೇ ತಿಂಗಳ 18ರಂದು ಮಂಗಳೂರಿನಲ್ಲಿ (Mangaluru) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ. ಪುರುಷೋತ್ತಮ ಬಿಳಿಮಲೆ (Purushotham) ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಂಗಳೂರು ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಸರ್ಕಾರದ ಈ ಕ್ರಮವು ಯಕ್ಷಗಾನದ ತವರೂರಾದ ಕರಾವಳಿಯ ಅಸ್ಮಿತೆಗೆ ನೀಡುವ ಗೌರವ ಮಾತ್ರವಲ್ಲ, ಅದು ಕರ್ನಾಟಕ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಸರ್ಕಾರದ ಬದ್ಧತೆಯ ಪ್ರತೀಕವೂ ಆಗಲಿದೆ ಎಂದಿದ್ದಾರೆ. ಯಕ್ಷಗಾನವು ಕೇವಲ ಒಂದು ಪ್ರದರ್ಶನ ಕಲೆಯಲ್ಲ. ಕುಣಿತ, ಹಾಡುಗಾರಿಕೆ, ಮಾತುಗಾರಿಕೆ ಮತ್ತು ವರ್ಣರಂಜಿತ ವೇಷಭೂಷಣಗಳ ಸಮನ್ವಯದಿಂದ ರೂಪುಗೊಂಡಿರುವ ಪರಿಪೂರ್ಣ ಕಲೆಯಾಗಿದೆ ಎಂದಿರುವ ಬಿಳಿಮಲೆ, ಇದು ಕರಾವಳಿ ಕರ್ನಾಟಕದ ಜನ-ಜೀವನ, ಸಾಹಿತ್ಯ, ಆಚರಣೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಈ ಕಲೆಗೆ ದೊರೆಯುವ ಗೌರವವು ಇಡೀ ಕರಾವಳಿಯನ್ನು ಪ್ರಭಾವಿಸಲಿದೆ ಎಂದಿದ್ದಾರೆ.
ಉದ್ದೇಶಿತ ಡಿಜಿಟಲ್ ಸಂಗ್ರಹಾಲಯವು ಯಕ್ಷಗಾನದ ಧ್ವನಿ ಮತ್ತು ದೃಶ್ಯ ದಾಖಲೆಗಳ ಸಂಗ್ರಹವಾಗಲಿದೆ ಎಂದಿರುವ ಬಿಳಿಮಲೆ, ಇಲ್ಲಿ ಕಲೆಯ ಅಪರೂಪದ ಪ್ರಸಂಗಗಳ ಸಂರಕ್ಷಣೆ, ಸಂಗ್ರಹದ ವೈಜ್ಞಾನಿಕ ವರ್ಗೀಕರಣ, ಸಂಶೋಧನೆ ಮತ್ತು ಮುಂದಿನ ಪೀಳಿಗೆಗೆ ಯಕ್ಷಗಾನದ ಪರಂಪರೆಯನ್ನು ಪರಿಚಯಿಸುವ ವ್ಯವಸ್ಥೆಗಳನ್ನು ರೂಪಿಸಬಹುದಾಗಿದೆ ಎಂದಿದ್ದಾರೆ.
ಮಂಗಳೂರಿನಲ್ಲಿ ಈ ಮಹತ್ವದ ಯೋಜನೆ ಜಾರಿಯಾದರೆ ಯಕ್ಷಗಾನ ಸಂಶೋಧನೆಗೆ ಹೊಸ ಆಯಾಮವು ದೊರೆಯುತ್ತದೆ ಎಂದಿರುವ ಬಿಳಿಮಲೆ, ಇದರಿಂದ ಇಡೀ ಕರಾವಳಿ ಪ್ರದೇಶವು ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಮತ್ತು ಕರಾವಳಿ ಕರ್ನಾಟಕವು ಯಕ್ಷಗಾನದ ಸಾಂಸ್ಕೃತಿಕ ಭಂಡಾರವಾಗಿ ರೂಪುಗೊಳ್ಳಲಿದೆ ಎಂದಿದ್ದಾರೆ.
ಯಕ್ಷಗಾನ ಆರ್ಕೈವ್ಸ್ ಸ್ಥಾಪನೆಗೆ ಅಂದಾಜು 10 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದಿರುವ ಬಿಳಿಮಲೆ, ಈ ಪ್ರಸ್ತಾವನೆಯನ್ನು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪರಿಗಣಿಸಿದಲ್ಲಿ ಆ ಭಾಗದ ಸಾಂಸ್ಕೃತಿಕ ಅಸ್ಮಿತೆಗೆ ಸರ್ಕಾರವು ಅರ್ಥಪೂರ್ಣವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದಿದ್ದಾರೆ.
ಸರ್ಕಾರಕ್ಕೆ 10 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸಲ್ಲಿಸಿ, ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲು ಆಗ್ರಹಿಸಲಾಗಿದೆ. ಇದು ಸರ್ಕಾರದ ಪ್ರಾದೇಶಿಕ ಪರಂಪರೆಯನ್ನು ಗೌರವಿಸುವ ಮಹತ್ವದ ಕಾರ್ಯವಾಗಲಿದೆ.
-ಡಾ. ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಪರವಾನಗಿ ಇಲ್ಲದ ಬಂದೂಕು ಶಸ್ತ್ರಾಸ್ತ್ರಗಳನ್ನು ನ. 01 ರೊಳಗೆ ಸರ್ಕಾರಕ್ಕೆ ಒಪ್ಪಿಸಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

