ಬೆಂಗಳೂರು: ಪೊಲೀಸ್ (Police) ಸುಪರ್ದಿಯಲ್ಲಿದ್ದ ನಮ್ಮ ಮೇಲೆ ಹಲ್ಲೆ ಆಗಿದೆ; ಇದು ಪೂರ್ವಯೋಜಿತ ಕೃತ್ಯ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ (R.Ashok) ಅವರು ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿ (KPCC Office) ಮುಂದೆ ಪ್ರತಿಭಟನೆ ಮಾಡಿದ ಬಿಜೆಪಿ ಶಾಸಕರ ಮೇಲೆ ನಿನ್ನೆ ನಡೆದ ಹಲ್ಲೆಯನ್ನು ಖಂಡಿಸಿ ಇಂದು ಪಕ್ಷದ ವತಿಯಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೊಲೀಸ್ ಸುಪರ್ದಿಯಲ್ಲಿದ್ದ ಬಸ್ ನಮ್ಮದು. ನಮಗೆ ರಕ್ಷಣೆ ಕೊಡಬೇಕೆಂದು ಇವರಿಗೆ ಗೊತ್ತಿಲ್ಲವೇ ಎಂದು ಕೇಳಿದರು.
ನಮ್ಮ ಬಸ್ಸಿನಲ್ಲಿ ಮೊಟ್ಟೆ ಬರಲು ಹೇಗೆ ಸಾಧ್ಯ? ಪೊಲೀಸರಿಗೆ ನೀವು ಮೊಟ್ಟೆ ಕೊಟ್ಟಿದ್ದೀರಾ ಎಂದು ಕೇಳಿದರು. ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಕೊಡಲು ಇವರಿಗೆ ಯೋಗ್ಯತೆ ಇಲ್ಲ ಎಂದು ಟೀಕಿಸಿದರು. ಹರೀಶ್, ಅಶ್ವತ್ಥನಾರಾಯಣ್, ರಾಮಮೂರ್ತಿ ಮಾತ್ರವಲ್ಲದೇ ಕಾರ್ಯಕರ್ತರ ಮೇಲೆ ಪೂರ್ವನಿಯೋಜಿತ ಗೂಂಡಾಗಿರಿ ಮಾಡಿದ್ದಾರೆ ಎಂದು ದೂರಿದರು. ವಿಧಾನಸೌಧದಲ್ಲಿ ಇದೇ ಹರಿಪ್ರಸಾದ್ ಅವರು ಮಾನ್ಯ ರಾಜ್ಯಪಾಲರನ್ನು ಅಡ್ಡ ಹಾಕಿದ್ದರು ಎಂದು ನೆನಪಿಸಿದರು.

