ಆಧುನಿಕ ಆರೋಗ್ಯ ಕ್ಷೇತ್ರದ ಸಂಕೀರ್ಣ ಸವಾಲುಗಳನ್ನು ಎದುರಿಸಲು ಅಂತರಶಿಸ್ತೀಯ ಸಹಯೋಗ ಮತ್ತು ಅನುವಾದ ಸಂಶೋಧನೆ ಅತ್ಯಗತ್ಯವಾಗಿದ್ದು, (Interdisciplinary Research Will Shape the Future of Healthcare) ಆರೋಗ್ಯ ವಿಜ್ಞಾನಗಳ ಭವಿಷ್ಯವು ವಿವಿಧ ವಿಭಾಗಗಳ ಜ್ಞಾನ ಮತ್ತು ತಂತ್ರಜ್ಞಾನಗಳ ಸಮನ್ವಯದಲ್ಲಿದೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಹೇಳಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯ, ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಫಾರ್ ಮಾಲಿಕ್ಯುಲರ್ ಮೆಡಿಸಿನ್ ವತಿಯಿಂದ ನಾಗಮಂಗಲದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ “ಅನುವಾದ ಸಂಶೋಧನೆಗಾಗಿ ಆರೋಗ್ಯ ವಿಜ್ಞಾನಗಳಲ್ಲಿ ಅಂತರಶಿಸ್ತೀಯ ವಿಧಾನಗಳು” ವಿಷಯದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಪರಮಪೂಜ್ಯ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಉದ್ಘಾಟಿಸಿ ಮಾತನಾಡಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಐತಿಹಾಸಿಕ ಹಾಗೂ ಸಾಮಾಜಿಕ ಕೊಡುಗೆಗಳನ್ನು ಸ್ಮರಿಸಿದ ರಾಜ್ಯಪಾಲರು “ಸುಮಾರು 1800 ವರ್ಷಗಳ ಇತಿಹಾಸ ಹೊಂದಿರುವ ಈ ಮಠವು ಶಿಕ್ಷಣ, ಆರೋಗ್ಯ, ಸಾಮಾಜಿಕ ಸಮಾನತೆ ಹಾಗೂ ರಾಷ್ಟ್ರ ನಿರ್ಮಾಣ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ. 71ನೇ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಶಿಕ್ಷಣ, ಆರೋಗ್ಯ ಹಾಗೂ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದ ಅವರು, ಪ್ರಸ್ತುತ ಪೀಠಾಧಿಪತಿಗಳಾದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಾರ್ಶನಿಕ ನಾಯಕತ್ವದಲ್ಲಿ ಸಂಸ್ಥೆಯು ಉನ್ನತ ಶಿಕ್ಷಣ, ವೈಜ್ಞಾನಿಕ ಸಂಶೋಧನೆ, ಆರೋಗ್ಯ ಸೇವೆ, ಕೌಶಲ್ಯಾಭಿವೃದ್ಧಿ ಮತ್ತು ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


“ವಿಕಸಿತ ಭಾರತ-2047” ಗುರಿ ಸಾಧನೆಯಲ್ಲಿ ಆರೋಗ್ಯ ಸಂಶೋಧನೆ ಪ್ರಮುಖ ಪಾತ್ರ ವಹಿಸಲಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ-2020 ಬಹುಶಿಸ್ತೀಯ ಮತ್ತು ಅಂತರಶಿಸ್ತೀಯ ಶಿಕ್ಷಣಕ್ಕೆ ಒತ್ತು ನೀಡಿರುವುದು ಸಂಶೋಧನೆಗೆ ಹೊಸ ದಿಕ್ಕುಗಳನ್ನು ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆಯುರ್ವೇದ, ಯೋಗ ಮತ್ತು ಆಧುನಿಕ ವೈದ್ಯಕೀಯ ವಿಜ್ಞಾನಗಳ ಸಮನ್ವಯದ ಮೂಲಕ ಸಮಗ್ರ ಆರೋಗ್ಯ ಸೇವೆಗೆ ಹೊಸ ಸಾಧ್ಯತೆಗಳು ಮೂಡುತ್ತಿದ್ದು, ಇದು ಆರೋಗ್ಯ ಕ್ಷೇತ್ರವನ್ನು ಇನ್ನಷ್ಟು ಮಾನವೀಯ ಮತ್ತು ಪರಿಣಾಮಕಾರಿಯಾಗಿಸಲಿದೆ. ಹೊಕ್ಕೈಡೋ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳ ವಿಜ್ಞಾನಿಗಳು ಹಾಗೂ ಸಂಶೋಧಕರು ಭಾಗವಹಿಸಿರುವುದು ಜಾಗತಿಕ ವೈಜ್ಞಾನಿಕ ಸಹಭಾಗಿತ್ವದ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ರಾಜ್ಯಪಾಲರು ಹೇಳಿದರು.
ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಫಾರ್ ಮಾಲಿಕ್ಯುಲರ್ ಮೆಡಿಸಿನ್ ಕಳೆದ ಒಂದು ದಶಕದಲ್ಲಿ ಬಯೋಮೆಡಿಕಲ್ ಸಂಶೋಧನೆ, ಅನುವಾದ ವೈದ್ಯಕೀಯ, ಕ್ಯಾನ್ಸರ್ ಜೀವಶಾಸ್ತ್ರ, ಮಾಲಿಕ್ಯುಲರ್ ಡಯಾಗ್ನೋಸ್ಟಿಕ್ಸ್ ಹಾಗೂ ಆರೋಗ್ಯ ನಾವೀನ್ಯತೆ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿರುವುದನ್ನು ರಾಜ್ಯಪಾಲರು ಶ್ಲಾಘಿಸಿದರು.
ಈ ಸಮ್ಮೇಳನವು ಹೊಸ ಆಲೋಚನೆಗಳಿಗೆ ಪ್ರೇರಣೆ ನೀಡುವುದರ ಜೊತೆಗೆ ಅಂತರರಾಷ್ಟ್ರೀಯ ಸಹಯೋಗ, ತಾಂತ್ರಿಕ ನಾವೀನ್ಯತೆ ಹಾಗೂ ಆರೋಗ್ಯ ವಿಜ್ಞಾನಗಳ ಪ್ರಗತಿಗೆ ಮಹತ್ವದ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಸಮ್ಮೇಳನದ ಯಶಸ್ಸಿಗೆ ಶುಭ ಹಾರೈಸಿದರು.
ಸಚಿವ ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ್, ಶಾಸಕ ಎನ್. ಚೆಲುವರಾಯಸ್ವಾಮಿ, ಪ್ರಾಧ್ಯಾಪಕ ಕೆ.ಎನ್. ಗಣೇಶ್, ಕುಲಪತಿ ಡಾ. ಎಸ್.ಎನ್. ಶ್ರೀಧರ್, ಕುಲಸಚಿವ ಡಾ. ಸಿ.ಕೆ. ಸುಬ್ಬರಾಯ, ಪ್ರಾಧ್ಯಾಪಕ ಕೆ.ಎಸ್. ರಂಗಪ್ಪ, ಜಪಾನ್ನ ಪ್ರಾಧ್ಯಾಪಕ ಶಿನ್-ಇಚಿರೊ ನಿಶಿಮುರಾ, ಎಐಎಂಎಂ ನಿರ್ದೇಶಕ ಡಾ. ಶೋಬಿತ್ ಸೇರಿದಂತೆ ದೇಶ-ವಿದೇಶಗಳ ವಿಜ್ಞಾನಿಗಳು, ಸಂಶೋಧಕರು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

