Home Blog Page 14

ದೇವಾಲಯದ ಪಾವಿತ್ರ್ಯ ಕಾಪಾಡಲು ಪ್ರೀ-ವೆಡ್ಡಿಂಗ್ ಶೂಟಿಂಗ್‌ಗಳನ್ನು ನಿಷೇದಿಸಿ !

ಧಾರ್ಮಿಕದತ್ತಿ ಇಲಾಖೆಯ ಸಚಿವ (Ramalinga Reddy) ರಾಮಲಿಂಗ ರೆಡ್ಡಿಯವರಿಗೆ ಮನವಿ
ಬೆಂಗಳೂರು : ಕರ್ನಾಟಕ ರಾಜ್ಯದ ದೇವಸ್ಥಾನಗಳು (Karnataka temples) ಧಾರ್ಮಿಕ ನಂಬಿಕೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯ ಪ್ರತೀಕಗಳಾಗಿವೆ. ಇವು ಭಕ್ತರ ಶ್ರದ್ಧೆಯ ಕೇಂದ್ರಗಳಾಗಿದ್ದು, ಶಾಂತಿ, ಭಕ್ತಿ, ದೈವಿ ಚೈತನ್ಯ ಮತ್ತು ಸಂಪ್ರದಾಯದ ಸಂಕೇತಗಳಾಗಿವೆ. ಇಂತಹ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ಗಳನ್ನು ನಿಷೇದಿಸಿ ಕಾನೂನು ರೂಪಿಸಬೇಕೆಂದು ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಧಾರ್ಮಿಕ ದತ್ತಿ ಇಲಾಖೆಯ ಸಚಿವರಾದ ಮಾನ್ಯ ಶ್ರೀ. ರಾಮಲಿಂಗ ರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಕರ್ನಾಟಕ ಮಂದಿರ ಮಹಾಸಂಘದ ರಾಜ್ಯ ಸಂಘಟಕರಾದ ಶ್ರೀ. ಮೋಹನ್ ಗೌಡ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಕಟಪೂರ್ವ ನಿರ್ದೇಶಕರಾದ ಶ್ರೀ. ರಾಘವೇಂದ್ರ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ನಿರ್ದೇಶಕರಾದ ಶ್ರೀ. ಬಿ. ಎನ್.ಮಹೇಶ್, ಹಾಗೂ ಶ್ರೀ. ಶ್ರೀನಿವಾಸ್, ಶ್ರೀ. ವಿಕ್ರಮ್ ಶೆಟ್ಟಿ, ಶ್ರೀ. ಪುರುಷೋತ್ತಮ್ ಸೇರಿದಂತೆ ಮುಂತಾದ ಸಂಘಟನೆಯರು ಉಪಸ್ಥಿತರಿದ್ದರು.
ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಸ್ಥಾನದಲ್ಲಿ ಕೆಲವರು ದೇವಸ್ಥಾನದ ಒಳಭಾಗದಲ್ಲಿ ಚಪ್ಪಲಿ ಧರಿಸಿ ಅಸಭ್ಯ ರೀತಿಯಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟಿಂಗ್ ನಡೆಸಿದ ಘಟನೆ ವರದಿಯಾಗಿದೆ. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅರ್ಚಕರು ಹಾಗೂ ಸ್ಥಳೀಯ ಭಕ್ತರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮತ್ತು ಅಸಭ್ಯ ವರ್ತನೆ ನಡೆದಿರುವುದು ಅತ್ಯಂತ ಖಂಡನೀಯವಾಗಿದೆ.
ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ದೇವಸ್ಥಾನಗಳ ಪ್ರಾಂಗಣದಲ್ಲಿ ಯಾವುದೇ ಅನುಮತಿ ಇಲ್ಲದೆ ಆಶ್ಲೀಲ, ಅಸಭ್ಯ ಅಥವಾ ಸಂಪ್ರದಾಯ ವಿರುದ್ಧ ಉಡುಪುಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟಿಂಗ್, ರೀಲ್ಸ್ ನಿರ್ಮಾಣ ಇತ್ಯಾದಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ದೇವಸ್ಥಾನಗಳನ್ನು ವೈಯಕ್ತಿಕ ಪ್ರಚಾರ, ಸಾಮಾಜಿಕ ಜಾಲತಾಣದ ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ಬಳಸುವುದು ಧಾರ್ಮಿಕ ಸ್ಥಳಗಳ ಗೌರವಕ್ಕೆ ಧಕ್ಕೆ ತರುವುದಲ್ಲದೆ, ಅವುಗಳ ವ್ಯಾಪಾರೀಕರಣಕ್ಕೂ ಕಾರಣವಾಗುತ್ತಿದೆ. ಅದಲ್ಲದೇ ಭಕ್ತಾಧಿಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗುತ್ತಿದೆ.
ಇಂತಹ ಕೃತ್ಯಗಳು ಕೆಳಗಿನ ಕಾನೂನು ಪ್ರಕಾರ ಗಂಭೀರ ಅಪರಾಧವಾಗಿರುತ್ತದೆ
1.ಭಾರತೀಯ ಸಂವಿಧಾನದ ಕಲಂ 25 ಮತ್ತು 26 : ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯ ಹಕ್ಕುಗಳನ್ನು ಭಕ್ತರಿಗೆ ಹಾಗೂ ಸಂಸ್ಥೆಗಳಿಗೆ ನೀಡುತ್ತದೆ. ದೇವಸ್ಥಾನಗಳ ಪಾವಿತ್ರ್ಯಕ್ಕೆ ಧಕ್ಕೆ ತರುವ ಚಟುವಟಿಕೆಗಳು ಈ ಹಕ್ಕುಗಳಿಗೆ ವಿರುದ್ಧವಾಗಿರುತ್ತವೆ.
2.ಭಾರತೀಯ ನ್ಯಾಯ ಸಂಹಿತೆ 2023ರ ಪ್ರಕಾರ: 
ಸೆಕ್ಷನ್ 298 – ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸುವುದು ಅಥವಾ ಅವುಗಳಿಗೆ ಹಾನಿ ಮಾಡುವುದು ದಂಡನೀಯ ಅಪರಾಧ.
ಸೆಕ್ಷನ್ 299 – ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಕೃತ್ಯಗಳು ಗಂಭೀರ ಅಪರಾಧವಾಗಿದೆ.
ಸೆಕ್ಷನ್ 270 – ಸಾರ್ವಜನಿಕ ತೊಂದರೆ (Public Nuisance) ನೀಡುವುದು. ಸೆಕ್ಷನ್ 352 – ಉದ್ದೇಶಪೂರ್ವಕ ಅವಮಾನದಿಂದ ಶಾಂತಿ ಭಂಗ ಮಾಡುವುದು.
3.ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಅಧಿನಿಯಮ, 1997 : ದೇವಸ್ಥಾನಗಳ ಆಡಳಿತ, ಶಿಸ್ತು ಮತ್ತು ಪಾವಿತ್ರ್ಯ ಕಾಪಾಡುವ ಜವಾಬ್ದಾರಿ ಸಂಬಂಧಿತ ಅಧಿಕಾರಿಗಳ ಮೇಲಿದೆ.
ಕರ್ನಾಟಕ ಮಂದಿರ ಮಹಾಸಂಘದ ಬೇಡಿಕೆಗಳು :
1.ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಹಾಗೂ ವೀಡಿಯೋ ಶೂಟಿಂಗ್‌ಗಳಿಗೆ ಸಂಪೂರ್ಣ ನಿಷೇಧ ವಿಧಿಸುವುದು.
2.ದೇವಸ್ಥಾನಗಳಲ್ಲಿ ಫೋಟೋಗ್ರಫಿ/ವೀಡಿಯೋಗ್ರಫಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿ ಕಟ್ಟುನಿಟ್ಟಾಗಿ ಜಾರಿಗೆ ತರುವುದು.
3.ನಿಯಮ ಉಲ್ಲಂಘಿಸುವವರ ವಿರುದ್ದ ತಕ್ಷಣದ ಕಾನೂನು ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸುವುದು.
4.ದೇವಸ್ಥಾನ ಆಡಳಿತ ಮಂಡಳಿ, ಅರ್ಚಕರು ಹಾಗೂ ಭದ್ರತಾ ಸಿಬ್ಬಂದಿಗೆ ನಿಯಮ ಜಾರಿಗೆ ಅಗತ್ಯ ಅಧಿಕಾರ ನೀಡುವುದು.
5.ದೇವಸ್ಥಾನಗಳ ಪ್ರವೇಶ ದ್ವಾರಗಳಲ್ಲಿ “ಪ್ರೀ-ವೆಡ್ಡಿಂಗ್ ಶೂಟ್ ನಿಷೇಧ'” ಕುರಿತು ಸ್ಪಷ್ಟ ಸೂಚನಾ ಫಲಕಗಳನ್ನು ಆಳವಡಿಸುವುದು.
6.ಸಾಮಾಜಿಕ ಜಾಲತಾಣಗಳಲ್ಲಿ ದೇವಸ್ಥಾನಗಳ ದುರುಪಯೋಗವನ್ನು ತಡೆಯಲು ನಿಗಾ ಮತ್ತು ನಿಯಂತ್ರಣ ಕ್ರಮಗಳು ಕೈಗೊಳ್ಳುವುದು.
ದೇವಸ್ಥಾನಗಳು ಪೂಜೆ, ಭಕ್ತಿ ಮತ್ತು ಆಧ್ಯಾತ್ಮಿಕ ಶಾಂತಿಯ ಕೇಂದ್ರಗಳಾಗಿದ್ದು, ಇವುಗಳನ್ನು ವಾಣಿಜ್ಯ ಅಥವಾ ಮನರಂಜನಾ ಚಟುವಟಿಕೆಗಳಿಗೆ ಬಳಸುವುದು ಯೋಗ್ಯವಲ್ಲ. ದೇವಸ್ಥಾನಗಳ ಪಾವಿತ್ರ್ಯ ಮತ್ತು ಗೌರವವನ್ನು ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡು ದೇವಸ್ಥಾನಗಳ ಗೌರವವನ್ನು ಕಾಪಾಡುವಂತೆ ಮನವಿ ಸಲ್ಲಿಸಲಾಯಿತು.
ಮನವಿಗೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ ಶ್ರೀ. ರಾಮಲಿಂಗ ರೆಡ್ಡಿಯವರು ಇದರ ಬಗ್ಗೆ ಶೀಘ್ರದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.

ಎಪಿಎಸ್.ನಿಂದ  ಕಿಡ್‌.ಝೀ ಪ್ರೀ-ಸ್ಕೂಲ್  ಪ್ರಾರಂಭ

ಬೆಂಗಳೂರು: ಶಿಕ್ಷಣ (Education) ಕ್ಷೇತ್ರದಲ್ಲಿ 91 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಆಚಾರ್ಯ ಪಾಠಶಾಲಾ ಎಜುಕೇಶನಲ್ ಟ್ರಸ್ಟ್ (Acharya Pathashala Educational Trust) ಇದೀಗ ಕಿಡ್‌.ಝೀ ಪ್ರೀ-ಸ್ಕೂಲ್   (Kidzee-Pre-School) ಪ್ರಾರಂಭಿಸುತ್ತಿದೆ.

1.5 ರಿಂದ 3 ವರ್ಷದ ಮಕ್ಕಳಿಗಾಗಿ  ರೂಪಿಸಲಾಗಿರುವ ಈ ಪ್ರೀ-ಸ್ಕೂಲ್, ಮಕ್ಕಳಿಗೆ ಸಂತೋಷ ಮತ್ತು ಆಸಕ್ತಿದಾಯಕ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ. ಆಟದ ಮೂಲಕ ಕಲಿಯುವ, ಒಟ್ಟಿಗೆ ಬೆಳೆಯುವ, ಸ್ನೇಹದ ವಾತಾವರಣದ ಜೊತೆಗೆ ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಪಠ್ಯ ಕ್ರಮವನ್ನು ರೂಪಿಸಲಾಗಿದೆ.
ಕಟ್ಟಡದಲ್ಲಿ ಸುರಕ್ಷಿತ ಮತ್ತು ಮನೆಯಂತಿರುವ ವಾತಾವರಣದಲ್ಲಿ ಪ್ರೀ-ಸ್ಕೂಲ್ ಆರಂಭಿಸಲಾಗುತ್ತಿದೆ. ಮಕ್ಕಳಲ್ಲಿ ಕುತೂಹಲ ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸುವ ಸ್ನೇಹಪೂರ್ಣ ವಾತಾವರಣವನ್ನು ಇಲ್ಲಿ ಸೃಷ್ಟಿಸಲಾಗಿದೆ ಎಂದು ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿಎ ಡಾ. ವಿಷ್ಣು ಭರತ್ ಅಲಂಪಲ್ಲಿ ತಿಳಿಸಿದ್ದಾರೆ.

ಎಪಿಎಸ್ ಪ್ರತಿಯೊಬ್ಬ ಮಗುವನ್ನೂ “ಚಿಕ್ಕ ಮಿನುಗುವ ನಕ್ಷತ್ರ”ವಾಗಿ ಭವಿಷ್ಯದ “ಎಪಿಎಸ್ ಸೂಪರ್ ಸ್ಟಾರ್”ಗಳಾಗಿ ರೂಪಿಸುತ್ತದೆ. ಎಪಿಎಸ್ ನಲ್ಲಿ ಶಿಕ್ಷಣವು ಕೇವಲ ಪಾಠಪುಸ್ತಕಗಳಿಗೆ ಸೀಮಿತವಾಗಿಲ್ಲ. “ಜೀವನ” ಎಂಬ ಮಹತ್ವದ ಪರೀಕ್ಷೆಗೆ ಸಿದ್ಧಗೊಳಿಸಲಾಗುತ್ತದೆ. ಎಪಿಎಸ್ ನಲ್ಲಿ ಪ್ರವೇಶ ಪಡೆದ ಮಕ್ಕಳು ತಮ್ಮ ಪೂರ್ಣ ಶಿಕ್ಷಣವನ್ನು ಇದೇ ಸಂಸ್ಥೆಯಲ್ಲೇ ಮುಂದುವರಿಸಬಹುದಾಗಿದೆ. ಕೆಜಿಯಿಂದ ಪಿಜಿವರೆಗೆ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಮತ್ತು ಪಿಎಚ್ಡಿ ಶಿಕ್ಷಣ ಲಭ್ಯವಿದೆ.
ಆಟದ ಮೂಲಕ ಸಮಗ್ರ ಅಭಿವೃದ್ಧಿ, ಶೈಕ್ಷಣಿಕ ಮತ್ತು ಮೌಲ್ಯಾಧಾರಿತ ಶಿಕ್ಷಣ, ಒಂದೇ ಸಂಸ್ಥೆಯಲ್ಲಿ ನಿರಂತರ ಶಿಕ್ಷಣ. ಸೃಜನಶೀಲತೆ, ಸಂವಹನ ಮತ್ತು ಆತ್ಮವಿಶ್ವಾಸ ಅಭಿವೃದ್ಧಿ, 91 ವರ್ಷಗಳ ಶೈಕ್ಷಣಿಕ ಪರಂಪರೆ, ಎಪಿಎಸ್ ನಲ್ಲಿ ನಾವು ಕೇವಲ ಶಿಕ್ಷಣ ನೀಡುವುದಲ್ಲ – ನಾವು ಮಕ್ಕಳನ್ನು ಪ್ರೇರೇಪಿಸುತ್ತೇವೆ, ಅವರ ವ್ಯಕ್ತಿತ್ವವನ್ನು ರೂಪಿಸುತ್ತೇವೆ ಮತ್ತು ಭವಿಷ್ಯದ ನಾಯಕರನ್ನು ನಿರ್ಮಿಸುತ್ತೇವೆ  ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9880701701 ಎಂದು ತಿಳಿಸಿದ್ದಾರೆ

ಚಿತ್ರಕಲೆ, ಶಿಲ್ಪಿಕಲೆ, ರಂಗಭೂಮಿ ವಿವಿಧ ಕಲೆಗಳಲ್ಲಿ ನಿರತರಾಗಿರುವ ಕಲಾವಿದರಿಗೆ ಪ್ರೋತ್ಸಾಹ

BENGALURU : ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ (Karnataka Chitrakala Parishat) ಸಭಾಂಗಣದಲ್ಲಿ ಕರ್ನಾಟಕ ಇಂಟರ್ ನ್ಯಾಷವಲ್ ಆರ್ಟಿಸ್ಟ್ ವಿಲೇಜ್ ಚಾರಿಟೇಬಲ್ ಟ್ರಸ್ಟ್ (Karnataka International Artist Village Charitable Trust) ಉದ್ಘಾಟನೆ ಮತ್ತು ವೆಬ್ ಸೈಟ್ ಬಿಡುಗಡೆ ಹಾಗೂ ಜೀವಮಾನ ಶೇಷ್ಠ ಕಲಾ ಸಾಧಕರ ಪ್ರಶಸ್ತಿ ಹಾಗೂ ಹಿರಿಯ, ಕಿರಿಯ ಕಲಾವಿದರ ಚಿತ್ರ ಪ್ರದರ್ಶನ ಕಾರ್ಯಕ್ರಮ.

ಸಚಿವರಾದ ಹೆಚ್.ಕೆ.ಪಾಟೀಲ್ ರವರು, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷರಾದ ಪ್ರ.ಸ.ಕುಮಾರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ರವರು, ಚಲನಚಿತ್ರ ನಿರ್ದೇಶಕ ರಾಮ್ ನಾರಾಯಣ, ಸಂಗೀತ ನಿರ್ದೇಶಕ ರಮೇಶ್ ಕೃಷ್ಣ, ಖ್ಯಾತ ನಟಿ ಕುಮಾರಿ ಸಂಜನಾ ತ್ರಿವೇದಿ, ಅಧ್ಯಕ್ಷರಾದ ಬಿ.ಜಿ.ಅವಟಿರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ನಂತರ ಟ್ರಸ್ಟ್  ಹಾಗೂ ವೆಬ್ ಸೈಟ್ ಉದ್ಘಾಟನೆ ಮಾಡಿ ಸಾಧಕರಿಗೆ ಸನ್ಮಾನಿಸಿದರು.

ಸಚಿವರಾದ ಹೆಚ್.ಕೆ.ಪಾಟೀಲ್ ರವರು ಮಾತನಾಡಿ. ಕರ್ನಾಟಕ ಇಂಟರ್ ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಟ್ರಸ್ಟ್ ರಾಜ್ಯದ ವಿವಿಧ ಕ್ಷೇತ್ರದ ಕಲಾವಿದರಿಗೆ ಪ್ರೋತ್ಸಾಹ, ಸಹಕಾರ ನೀಡುವ ಸಂಸ್ಥೆಯಾಗಿದೆ.
ಟ್ರಸ್ಟ್ ಸಹಕಾರ ನೀಡಲು ಸರ್ಕಾರ ಬದ್ದವಾಗಿದೆ.
ಪ್ರಾಮಾಣಿಕ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ.

ಕಲೆ ಮತ್ತು ಕಲಾವಿದರು ಉಳಿದರೆ ನಾಡಿನ ಇತಿಹಾಸ ತಿಳಿಯಬಹುದು, ಕಲಾವಿದ ಇಲ್ಲವೆಂದರೆ ಇತಿಹಾಸ ತಿಳಿಯಲು ಆಸಾಧ್ಯ. ವಿವಿಧ ರಂಗದ ಕಲಾವಿದರಿಗೆ ಸರ್ಕಾರದ ಜೊತೆಯಲ್ಲಿ ಸಂಘ, ಸಂಸ್ಥೆಗಳು ಆಸರೆಯಾದರೆ ಕಲಾವಿದರ ಬದುಕು ಹಸನಾಗುತ್ತದೆ ಎಂದು ಹೇಳಿದರು.

ಡಾ||ಬಿ.ಜಿ.ಅವಟಿರವರು ಮಾತನಾಡಿ ಚಿತ್ರಕಲಾವಿದರು, ಸಂಗೀತ, ನೃತ್ಯ ಶಿಲ್ಪಕಲೆ ನಾಟಕ, ರಂಗಭೂಮಿ ಉಳಿಯಬೇಕು ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಲು ಟ್ರಸ್ಟ್ ಸ್ಥಾಪಿಸಲಾಗಿದೆ.

ರಾಜ್ಯದ ಎಲ್ಲ ಮೂಲೆಯಲ್ಲಿ ಕಲಾವಿದರಿಗೆ ಅವರಿಗೆ ಬೆಂಗಳೂರಿನ ಸುತ್ತಮುತ್ತಲ ಜಾಗದಲ್ಲಿ ಅವರಿಗೆ ನಿವೇಶನ ನೀಡಿ ಅವರು ಅಲ್ಲಿ ಪ್ರದರ್ಶನ ಮತ್ತು ತಯಾರಿಕೆ ಮತ್ತು ವಾಸ ಮಾಡಲು ಅನುಕೂಲವಾಗಲಿ ಎಂದು ನಮ್ಮ ಟ್ರಸ್ಟ್ ಯೋಜನೆ ರೂಪಿಸಿದೆ.

ಕಲಾವಿದರಿಗೆ ಒಂದು ಗ್ರಾಮ ನಿರ್ಮಾಣ ಮಾಡಿ ಅಲ್ಲಿ ಅವಕಾಶ ನೀಡಿದರೆ ರಾಜ್ಯ, ದೇಶ ವಿದೇಶಗಳಿಂದ ಬರುವ ನಾಗರಿಕರಿಗೆ ಅಲ್ಲಿ ಕಲಾವಿದರು ತಯಾರಿಕೆ ವಸ್ತುಗಳನ್ನು ಖರೀದಿಸಬಹುದು, ಕಲೆಯ ಅರಿಯಬಹುದು ಇದರಿಂದ ಆರ್ಥಿಕವಾಗಿ ಕಲಾವಿದರು ಸಬಲರಾಗುತ್ತಾರೆ ಎಂದು ಹೇಳಿದರು.

ಮಲ್ಲೇಶ್ವರದ ಶ್ರೀ ರಾಮ ಮಂದಿರದಲ್ಲಿ 60 ಮಕ್ಕಳಿಂದ “ನೃತ್ಯ ಪ್ರದರ್ಶನ” 

ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಜರುಗುತ್ತಿರುವ ಶ್ರೀರಾಮೋತ್ಸವದ ಅಂಗವಾಗಿ ಮಾರ್ಚ್ 21ರಂದು ನೃತ್ಯ ದಿಶಾ ಟ್ರಸ್ಟಿನ ಡಾ|| ದರ್ಶಿನಿ ಮಂಜುನಾಥ್  ಅವರ ನೇತೃತ್ವದಲ್ಲಿ  ಅವರ ಹಿರಿಯ ಶಿಷ್ಯರಾದ ಸಹನ, ದೀಪರಾಣಿ, ಉಮಾ, ಸ್ನೇಹ ಹಾಗೂ ದಿಶಾ ಅವರ ಸಹಕಾರದೊಂದಿಗೆ  ಸುಮಾರು 60 ವಿದ್ಯಾರ್ಥಿನಿಗಳು ಭರತನಾಟ್ಯ ಮತ್ತು ಜಾನಪದ ನೃತ್ಯ ಪ್ರದರ್ಶಿಸಿ ಶ್ರೀರಾಮರ ಕೃಪೆಗೆ ಪಾತ್ರರಾದರು.

ಮಲ್ಲೇಶ್ವರದಲ್ಲಿ 26ನೇ ಶ್ರೀರಾಮನವಮಿ ಸಂಗೀತೋತ್ಸವ – 2026 ಮಾರ್ಚ್ 19ರಿಂದ ಭಕ್ತಿ–ಸಂಗೀತದ ಮಹೋತ್ಸವ

ಬೆಂಗಳೂರು, : ನಗರದ ಮಲ್ಲೇಶ್ವರ 8ನೇ ಕ್ರಾಸ್‌ನಲ್ಲಿರುವ ಶ್ರೀ ಆಂಜನೇಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿ ಭಕ್ತಿಭಾವ ಮತ್ತು ಸಂಗೀತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ 26ನೇ ಶ್ರೀರಾಮನವಮಿ ಸಂಗೀತೋತ್ಸವ – 2026 ಇದೇ ಮಾರ್ಚ್ 19ರಿಂದ 27ರವರೆಗೆ ನಡೆಯಲಿದೆ.
ಈ ಸಂಗೀತೋತ್ಸವವನ್ನು ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಫೌಂಡೇಶನ್ (ರಿ.), ಶಿವ–ಶ್ರೀಕಾಂತ ಸಂಗೀತ ಪ್ರತಿಷ್ಠಾನ (ರಿ.), ಸಪ್ತಗಿರಿ ಭಜನಾ ಮಂಡಳಿ (ರಿ.), ದಾಸ ಸಾಹಿತ್ಯ ಪ್ರಾಜೆಕ್ಟ್ (ಟಿ.ಟಿ.ಡಿ.) ಹಾಗೂ ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸಂಸ್ಥೆಗಳು ಸಂಯುಕ್ತವಾಗಿ ಆಯೋಜಿಸಿವೆ.
ಪ್ರತಿ ದಿನವೂ ಸಂಜೆ 6.30ಕ್ಕೆ ದೇವಸ್ಥಾನದ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಜನೆ, ಗಾಯನ ಮತ್ತು ವಿವಿಧ ಸಂಗೀತ ಕಚೇರಿಗಳು ನಡೆಯಲಿವೆ. ಭಕ್ತರಿಗೆ ಸಂಗೀತ–ಭಕ್ತಿ ಸಂಭ್ರಮವನ್ನು ಅನುಭವಿಸಲು ಈ ಉತ್ಸವ ಉತ್ತಮ ಅವಕಾಶವಾಗಲಿದೆ.
ಉದ್ಘಾಟನಾ ಕಾರ್ಯಕ್ರಮ
ಮಾರ್ಚ್ 19, ಗುರುವಾರ ಸಂಜೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತಜ್ಞ ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಮತ್ತು ವೃಂದ ಅವರಿಂದ ಭಕ್ತಿಗಾನ ಕಚೇರಿ ನಡೆಯಲಿದೆ. ಇದರೊಂದಿಗೆ ಈ ವರ್ಷದ ಸಂಗೀತೋತ್ಸವಕ್ಕೆ ಭಕ್ತಿ–ಸಂಗೀತದ ಸುಂದರ ಚಾಲನೆ ದೊರೆಯಲಿದೆ.
ಸಂಗೀತೋತ್ಸವದ ಕಾರ್ಯಕ್ರಮಗಳ ಸರಣಿ
ಸಂಗೀತೋತ್ಸವದ ವಿವಿಧ ದಿನಗಳಲ್ಲಿ ಖ್ಯಾತ ಕಲಾವಿದರು ಮತ್ತು ಯುವ ಪ್ರತಿಭೆಗಳ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಮಾ. 20 – ಶ್ರೀಕಾಂತಂ ಸಹೋದರಿಯರಿಂದ ಗಾಯನ: ಶ್ರೀಕಾಂತಂ ನಾಗದೀಪ್ತಿ ಮತ್ತು ಶ್ರೀಕಾಂತಂ ನಾಗಪ್ರಣತಿ
ಮಾ. 21 – ಕಲಾಂಬಿಕಾ ಸಹೋದರಿಯರಿಂದ ಸಂಗೀತ ಕಚೇರಿ
ಮಾ. 23 – ಡಾ. ಅಂಬಿಕಾ ಶಾಸ್ತ್ರಿ ಮತ್ತು ವೃಂದದಿಂದ ಸಂಗೀತ ಕಾರ್ಯಕ್ರಮ
ಮಾ. 24 – ಹೆಚ್.ಎಸ್. ಕಾರ್ತಿಕೇಯ ಶರ್ಮ ಮತ್ತು ವೃಂದದಿಂದ ಗಾಯನ
ಮಾ. 25 – ‘ಲಯ ರಂಜನಿ’ ಕಾರ್ಯಕ್ರಮ – ಜಿ.ಎಸ್. ನಾಗರಾಜ್ ಮತ್ತು ವೃಂದ
ಮಾ. 26 – ಜಯರಂಗ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಗಾಯನ
ಮಾ. 27 – ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿಗಳ ಶಿಷ್ಯವೃಂದದಿಂದ ಸಂಗೀತ ಕಾರ್ಯಕ್ರಮ
ಈ ಎಲ್ಲಾ ಕಾರ್ಯಕ್ರಮಗಳು ಭಕ್ತಿ ಸಂಗೀತದ ವೈವಿಧ್ಯವನ್ನು ಪ್ರೇಕ್ಷಕರಿಗೆ ಪರಿಚಯಿಸಲಿವೆ.
‘ಪ್ರಣವಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ
ಮಾರ್ಚ್ 22, ಭಾನುವಾರ ಸಂಜೆ ವಿಶೇಷ ಕಾರ್ಯಕ್ರಮವಾಗಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಗಣ್ಯರಿಗೆ ‘ಪ್ರಣವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಡ್ಡಿ ಎಸ್. ಜಯತೀರ್ಥಾಚಾರ್ಯರು ಶ್ರೀ ಆಂಜನೇಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ ಪ್ರಧಾನ ಅರ್ಚಕರು ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪುರಸ್ಕೃತರು
ಡಾ. ಗುರುರಾಜ ಪೋಶೆಟ್ಟಿಹಳ್ಳಿ – ದಾಸ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತಕರು
(ಶ್ರೀಮತಿ ಮತ್ತು ಶ್ರೀ ಪದ್ಮಾವತಿ ಬಾಯಿ ಕಡ್ಡಿ ಶ್ರೀನಿವಾಸಾಚಾರ್ ಹಾಗೂ ಶ್ರೀಮತಿ ಪದ್ಮಾವತಿಬಾಯಿ ಮತ್ತು ಕೊಳಲು ವಿದ್ವಾನ್ ಶ್ರೀನಿವಾಸರಾವ್ ಸ್ಮಾರಕ ಪ್ರಶಸ್ತಿ)
ವಿ. ಮಾಲತಿ ಶಿಂಗ್ಲಾಚಾರ್ – ಸಂಗೀತ ಕ್ಷೇತ್ರ
(ವಿ. ಅಂಬಿ ಭಾಗವತರ್ ಹಾಗೂ ವಿ. ಪಾಪಾ ಚೂಡಾಮಣಿ ಸ್ಮಾರಕ ಪ್ರಶಸ್ತಿ)
ವಿ. ರಾಮಲಿಂಗಂ – ಯೋಗ ಮತ್ತು ನೃತ್ಯ ಕ್ಷೇತ್ರ
(ಶ್ರೀಮತಿ ಸುಶೀಲಾ ಮತ್ತು ಶ್ರೀಕಾಂತಂ ದತ್ತಾತ್ರೇಯ ಶಾಸ್ತ್ರಿ ಸ್ಮಾರಕ ಪ್ರಶಸ್ತಿ)
ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ರವೀಂದ್ರ ನರಹರಿ ತಂಡದವರಿಂದ ಸೂತ್ರದ ಬೊಂಬೆ ಆಟ (ಪಪೆಟ್ ಶೋ) ಪ್ರದರ್ಶನ ನಡೆಯಲಿದೆ. ಇದು ಮಕ್ಕಳಿಂದ ಹಿರಿಯರ ತನಕ ಎಲ್ಲರಿಗೂ ಮನರಂಜನೆ ನೀಡುವ ವಿಶೇಷ ಆಕರ್ಷಣೆಯಾಗಲಿದೆ.
ಭಕ್ತಿ–ಸಂಗೀತ ಸಂಭ್ರಮಕ್ಕೆ ಆಹ್ವಾನ
ಶ್ರೀರಾಮನವಮಿ ಉತ್ಸವಗಳು ದಕ್ಷಿಣ ಭಾರತದ ಸಂಗೀತ ಪರಂಪರೆಯ ಪ್ರಮುಖ ಅಂಗವಾಗಿವೆ. ಈ ಸಂಗೀತೋತ್ಸವವು ಭಕ್ತಿ, ಸಂಗೀತ ಮತ್ತು ಸಂಸ್ಕೃತಿಯ ಸಮನ್ವಯವನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿದ್ದು, ಸಂಗೀತಾಭಿಮಾನಿಗಳು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: 94494 44210
ಎಂದು ಆಯೋಜಕರಾದ ಡಾ. ಸಿ.ಎಸ್. ವಾರುಣಿ ಜಯತೀರ್ಥಾಚಾರ್ಯರು ತಿಳಿಸಿದ್ದಾರೆ.
ಶ್ರೀರಾಮನವಮಿ ಸಂಗೀತೋತ್ಸವ – 2026
ಸ್ಥಳ: ಶ್ರೀ ಆಂಜನೇಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ, ಮಲ್ಲೇಶ್ವರ 8ನೇ ಕ್ರಾಸ್, ಬೆಂಗಳೂರು
ದಿನಾಂಕ: 19 ಮಾರ್ಚ್ – 27 ಮಾರ್ಚ್ 2026
ಸಮಯ: ಸಂಜೆ 6.30
ಪ್ರಮುಖ ಕಾರ್ಯಕ್ರಮ: ‘ಪ್ರಣವಶ್ರೀ’ ಪ್ರಶಸ್ತಿ ಪ್ರದಾನ – 22 ಮಾರ್ಚ್
ವಿಶೇಷ ಆಕರ್ಷಣೆ: ಸೂತ್ರದ ಬೊಂಬೆ ಆಟ

ಮದುವೆ ಎನ್ನುವುದು ಪವಿತ್ರ ಬಂಧನ – ವಿಚ್ಛೇದನಕ್ಕೆ ಎಳಸಬೇಡಿ: ನ್ಯಾಯಮೂರ್ತಿ ಶ್ರೀಶಾನಂದ ಕರೆ

ಬೆಂಗಳೂರು, ಮಾರ್ಚ್‌, 15, 2026: ಮದುವೆ ಎನ್ನುವುದು ಪವಿತ್ರವಾದ ಬಂಧ. ಪೋಷಕರು ತಮ್ಮ ಮಕ್ಕಳಿಗೆ ಸೂಕ್ತ ಸಮಯದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿಸಬೇಕು. ಹೊಸದಾಗಿ ಮದುವೆ ಆದವರು ವಿಚ್ಛೇದನಕ್ಕೆ ಎಳಸದೇ ಸಂಯಮದಿಂದ ಜೀವನ ಸಾಗಿಸಬೇಕು. ಯಾವುದೇ ಕಲಹ ಮಾಡಿಕೊಳ್ಳದೇ, ನ್ಯಾಯಾಲಯದ ಕಟಕಟೆವರೆಗೆ ಬರದೇ ಸಮಾಧಾನ ಮತ್ತು ಸುಖಃ ಚಿತ್ತರಾಗಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಶಾನಂದ ಅವರು ಸಲಹೆ ನೀಡಿದರು.
ಇಲ್ಲಿನ ಕೆ.ಆರ್.ರಸ್ತೆಯ ನೆಟ್ಟಕಲ್ಲಪ್ಪ ವೃತ್ತದ ಬಸವನಗುಡಿಯ ದ್ವಾರಕಾನಾಥ ಭವನದಲ್ಲಿ ಅಕ್ಷಯ ವಿಪ್ರ ಮಹಾಸಭಾದ ವತಿಯಿಂದ ತ್ರಿಮಸ್ಥ ಬ್ರಾಹ್ಮಣರಿಗಾಗಿ ಭಾನುವಾರ ನಡೆದ ವಧು-ವರಾನ್ವೇಷಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಒಂದು ಕಾಲದಲ್ಲಿ ಉತ್ತಮವಾದ ವರ ಸಿಗುತ್ತಾ? ಎನ್ನುವ ಪ್ರಶ್ನೆ ಇತ್ತು. ಈಗ ಪರಿಸ್ಥಿತಿ ಬದಲಾವಣೆಗೊಂಡು ಒಳ್ಳೆಯ ಹುಡುಗಿ ಸಿಗುತ್ತಾಳಾ? ಎನ್ನುವ ವಿಚಾರ ಮಾಡುವಂತಾಗಿದೆ. ಗಂಡು-ಗಂಡನಾಗಲು, ಹೆಣ್ಣು-ಹೆಂಡತಿಯಾಗಲು ಧರ್ಮದ ತಳಹದಿಯಲ್ಲಿ ನೆರವೇರಿಸುವ ಶಾಸ್ತ್ರಬದ್ಧ ಕಾರ್ಯಕ್ರಮವೇ ವಿವಾಹ ಎಂದೆನಿಸಿಕೊಳ್ಳುತ್ತದೆ ಎಂದರು.
ಮದುವೆ ಎನ್ನುವುದು ಸಂಸ್ಕೃತಿ, ಪರಂಪರೆಯ ತಳಹದಿಯಲ್ಲಿ ನೆರವೇರಿಸಬೇಕು. ಆಗ ಮಾತ್ರ ನ್ಯಾಯಾಲಯ ಪುರಸ್ಕರಿಸುತ್ತದೆ. ಪರಸ್ಪರ ಒಪ್ಪಂದದಂತೆ ಮದುವೆ ಆಗಿ, ಮಕ್ಕಳು ಆದ ಬಳಿಕ ನ್ಯಾಯಾಲಯಕ್ಕೆ ಬಂದರೆ ತೊಂದರೆ ಆಗುತ್ತದೆ. ಅನ್ಯ ಧರ್ಮದಲ್ಲಿ ಮದುವೆ ಎನ್ನುವುದು ಗುತ್ತಿಗೆ ಇದ್ದ ಹಾಗೆ. ಹಿಂದೂ ಧರ್ಮದಲ್ಲಿ ಹಾಗಲ್ಲ. ಕನ್ಯೆ ನೋಡುವುದು, ಪಾಣಿಗ್ರಹಣ ಮತ್ತು ಸಪ್ತಪದಿಯ ಮೂಲಕ ಮದುವೆ ಸಂಪ್ರದಾಯಬದ್ಧವಾಗಿ ಸಂಪನ್ನಗೊಳಿಸಬೇಕು. ಮದುವೆಯಲ್ಲಿ ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಅಸುರ, ಗಂಧರ್ವ ಮತ್ತು ರಾಕ್ಷಸ ಎಂಟು ಬಗೆಯ ವಿಧಗಳಿವೆ. ಇದರರ್ಥ ಒಂದು ಅರೇಂಜ್ ಇನ್ನೊಂದು ಲವ್ ಮ್ಯಾರೇಜ್ ಅಂತ. ಮದುವೆಗೆ ಮುಂಚೆ ಹುಡುಗ-ಹುಡುಗಿ ದೈಹಿಕ ಸಂಬಂಧ ಬೆಳೆಸಿಕೊಂಡರೆ ಅದು ರಾಕ್ಷಸ ವಿವಾಹವಾಗುತ್ತದೆ. ಮದುವೆ ಆಗದೇ ಇರುವವರಿಗೆ ಹಿಂಸೆ, ಸಾಮಾಜಿಕ ತುಮುಲಗಳು ಏರ್ಪಡುತ್ತವೆ. ಹೀಗಾಗಿ ಪೋಷಕರು ನೋಡುವ ಕನ್ಯೆ ಅಥವಾ ವರನನ್ನು ಒಪ್ಪಿಕೊಂಡು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.


ಕೆಲ ಪಟ್ಟಭದ್ರರು ಹೆಣ್ಣು-ಗಂಡು ಜೋಡಿ ಮಾಡುವರಿಗೆ ಮದುವೆ ಬ್ರೋಕರ್ ಗಳೆಂದು ಕರೆಯುತ್ತಾರೆ. ಹಾಗೆ ಕರೆಯುವುದು ತಪ್ಪು. ನವ ಜೋಡಿಗಳೊಂದಿಗೆ ಎರಡು ಕುಟುಂಬಗಳನ್ನು ಬೆಸೆಯುವ ಕೆಲಸವನ್ನು ಅವರು ಮಾಡಿರುತ್ತಾರೆ. ಹೀಗಾಗಿ ಬ್ರೋಕರ್ ಎನ್ನುವ ಪದ ಸಲ್ಲದು ಎಂದು ಕಿವಿಮಾತು ಹೇಳಿದರು. ಇಂದು ತ್ರಿಮತಸ್ಥ ಬ್ರಾಹ್ಮಣರಿಗಾಗಿ ನಡೆಯುತ್ತಿರುವ ವಧು-ವರಾನ್ವೇಷಣ ಸಮಾರಂಭದಲ್ಲಿ ಎಲ್ಲರೂ ತಾಂತ್ರಿಕ ವ್ಯವಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಅರ್ಹ ವಧು-ವರರು ವೆಬ್‌ಸೈಟ್ ನಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ದಾಖಲಿಸಿ ಒಪ್ಪಿತವಾಗಿ, ವಿವಾಹ ಮಾಡಿಕೊಳ್ಳಿ. ಮದುವೆ ಆಗದವರು `ಗಿರಿಜಾ ಕಲ್ಯಾಣ ಅಥವಾ ಪದ್ಮಾವತಿ ಕಲ್ಯಾಣ’ ದಂತಹ ಪರಮ ಪವಿತ್ರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಕೈಲಾದ ನೆರವು ನೀಡಬೇಕು. ಮುಂದಿನ ಕಲ್ಯಾಣ ಪರ್ವದೊಳಗೆ ನಿಮ್ಮ ವಿವಾಹವಾಗುವುದು ನಿಶ್ಚಿತವೆಂದು ಪೌರಾಣಿಕ ಹಿನ್ನೆಲೆಯನ್ನು ವಿವರಿಸಿದರು.
ವಿಪ್ರ ಮಹಾಸಭಾದ ಅಧ್ಯಕ್ಷ ಎನ್.ಕೆ.ರಾಮಚಂದ್ರರಾವ್ ಮಾತನಾಡಿ, ವಧು-ವರ ಅನ್ವೇಷಣಾ ಸಮಾರಂಭ ಯಶಸ್ಸಿಗಾಗಿ `ಪಾರ್ವತಿ ಸ್ವಯಂವರ’ ಏರ್ಪಡಿಸಲಾಗಿದೆ. ಹಿಂದೂ ಸಂಪ್ರದಾಯದಂತೆ ಅಯೋಜಿಸಿರುವ ಈ ಸಮಾರಂಭದಲ್ಲಿ ನೂತನವಾಗಿ ಜೋಡಿಯಾಗುವವರಿಗೆ ಶುಭವಾಗಲಿ. ಅಕ್ಷಯ ವಿಪ್ರ ಮಹಾಸಭಾದಲ್ಲಿ 2500ಕ್ಕೂ ಹೆಚ್ಚು ಸದಸ್ಯರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವಸತಿ ನಿಲಯ, ಆರೋಗ್ಯ ಸೌಲಭ್ಯಕ್ಕಾಗಿ ವೈದ್ಯಕೀಯ ಸೇವೆ, ವಧು-ವರರ ಸಮಾವೇಶ, ಸಾಮೂಹಿಕ ಉಪನಯನ ಹೀಗೆ ಹತ್ತು ಹಲವಾರು ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
ಆರಂಭದಲ್ಲಿ ವಿಪ್ರವರೇಣ್ಯರಿಂದ `ಗಿರಿಜಾ ಕಲ್ಯಾಣ’ ಮತ್ತು `ಪದ್ಮಾವತಿ ಕಲ್ಯಾಣ’ ಮಹೋತ್ಸವಗಳನ್ನು ನೆರವೇರಿಸಲಾಯಿತು. ಸಂಪ್ರದಾಯದಂತೆ ಗೋತ್ರ ಪ್ರವರ ಹೇಳಿ, ವಾಙ್ಮಯ ನಿಶ್ಚಯ, ತಾಂಬೂಲ, ಮಂಗಳ ದ್ರವ್ಯಗಳನ್ನು ನೀಡಿ ಹಾರ-ತುರಾಯಿಗಳನ್ನು ವಧು-ವರರ ಕಡೆಯವರಿಗೆ ವಿನಿಮಯಗೊಳಿಸಲಾಯಿತು. ಯಾಗಶಾಲೆಯ ಸಾಕ್ಷಿಯಾಗಿ ನಾದಸ್ವರ ಹಾಗೂ ಸಕಲ ಮಂಗಳಕರ ವಾದ್ಯಗಳೊಂದಿಗೆ ಅದ್ದೂರಿಯಾಗಿ `ದೈವೀಕವಾದ ಕಲ್ಯಾಣ ಮಹೋತ್ಸವ’ ನೆರವೇರಿಸಲಾಯಿತು.
ಇಡೀ ದಿನ ನಡೆದ ಈ ಸಮಾರಂಭದಲ್ಲಿ ವೇದಿಕೆಯ ಮೇಲಿದ್ದ ಉದ್ಘೋಷಕರು ನೂತನ ವಧು-ವರರ ಪೋಷಕರಿಗೆ ಸೂಕ್ತ ಮಾರ್ಗದರ್ಶನ, ಸಲಹೆಗಳನ್ನು ನೀಡಿದರು. ಸ್ಥಳದಲ್ಲಿ ಪುರೋಹಿತ ವರ್ಗದವರು ಇದ್ದು ಜಾತಕಗಳನ್ನು ಪರಿಶೀಲಿಸಿದರು. ಆನ್ ಲೈನ್ ನಲ್ಲಿ ವೆಬ್ ಸೈಟ್ ಮೂಲಕ ನೋಂದಣಿ ಪ್ರಕ್ರಿಯೆಗೆ ಹಲವಾರು ಕೌಂಟರ್ ಗಳನ್ನು ತೆರೆಯಲಾಗಿತ್ತು. ಕರ್ನಾಟಕದ ಹಲವು ಜಿಲ್ಲೆಗಳಿಂದ ಕನ್ಯೆ-ವರರೊಂದಿಗೆ ಆಗಮಿಸಿದ ಪೋಷಕರಿಗೆ ಕ್ಷಣ ಕ್ಷಣದ ಮಾಹಿತಿ ಒದಗಿಸಲು ವೇದಿಕೆಯ ಮುಂಭಾಗದಲ್ಲಿ ಬೃಹತ್ ಸ್ಕ್ರೀನ್ ಗಳನ್ನು ಅಳವಡಿಸಲಾಗಿತ್ತು. ಶ್ರವಣ ನಕ್ಷತ್ರದಂದು ನಡೆದ ಈ ಸಮಾರಂಭಕ್ಕೆ ಆಗಮಿಸಿದ್ದ ಪೋಷಕರು ಮತ್ತು ವಧು-ವರರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಅಕ್ಷಯ ವಿಪ್ರ ಮಹಾಸಭಾದ ಗೌರವ ಅಧ್ಯಕ್ಷ ಆಡಿ. ಕೀರ್ತಿ ರಾಜ್ ಎನ್., ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ರಾವ್, ಕಾರ್ಯದರ್ಶಿ ಎನ್. ಎಸ್. ಸುಧೀಂದ್ರ ರಾವ್ ಅವರು ಉಪಸ್ಥಿತರಿದ್ದರು. ಸಂಘದ ನೂತನ ವೆಬ್ ಸೈಟ್ ಅನ್ನು ಶಾಸಕ ರವಿಸುಬ್ರಮಣ್ಯ ಅವರ ಧರ್ಮ ಪತ್ನಿ ಮಂಜುಳಾ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಜನಾರ್ಧನ ರಾವ್, ಉಪಾಧ್ಯಕ್ಷರಾಧಾ ಡಾ, ರಘುನಾಥ್, ಆನಂದರಾವ್, ಡಾ, ಕಿರಣ್. ಎಸ್ ಮೂರ್ತಿ, ಲಕ್ಷ್ಮೀಶ, ಶ್ರೀಪ್ರಕಾಶ್, ಜಂಟಿ ಕಾರ್ಯದರ್ಶಿ ಟಿ ಎನ್ ಶಾಂತಕುಮಾರ್, ಮಹೇಶ ಕುಮಾರ್ ಸೇರಿದಂತೆ ಪದಾಧಿಕಾರಿಗಳು, ಸರ್ವ ಸದಸ್ಯರು ಮತ್ತು ಸಮಾಜ ಸೇವಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸಂದ್ಯಾ ಭಟ್ ನಿರೂಪಿಸಿದರು ಇವರಿಗೆ ಶುಭ ಪ್ರಹ್ಲಾದ, ಕಲ್ಪನಾ ಅವರು ಜತೆಯದರು.
—-

 ವಸಂತ ನವರಾತ್ರಿ ಶ್ರೀರಾಮೋತ್ಸವ 

ಬೆಂಗಳೂರು : ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಮಾರ್ಚ್ 19 ರಿಂದ 29ರ ವರೆಗೆ ಶ್ರೀರಾಮೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಮುಖ್ಯ ಅತಿಥಿಗಳಾಗಿ ಮಲ್ಲೇಶ್ವರದ ಶಾಸಕರಾದ ಡಾ|| ಸಿ.ಎನ್. ಅಶ್ವತ್ಥ ನಾರಾಯಣ ಆಗಮಿಸಲಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು :
ಮಾರ್ಚ್ 19, ಬೆಳಗ್ಗೆ 7 ಗಂಟೆಯಿಂದ ರಾಮಾಯಣ ಪಾರಾಯಣ, ಶ್ರೀರಾಮ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು, ಸಂಜೆ 5-30 ಪಂಚಾಂಗ ಶ್ರವಣ. ಮಾರ್ಚ್ 27, ಬೆಳಗ್ಗೆ 7-30 ರಿಂದ ರಾಮನವಮಿ ಪ್ರಯುಕ್ತ ವಿಶೇಷ ಪಂಚಾಮೃತ ಅಭಿಷೇಕ, ಶ್ರೀರಾಮದೇವರಿಗೆ ತೊಟ್ಟಿಲು ಸೇವೆ, ಪಾನಕ ಸೇವೆ. ಮಾರ್ಚ್ 29, ಬೆಳಗ್ಗೆ ಶ್ರೀರಾಮ ಪಟ್ಟಾಭಿಷೇಕದ ಪ್ರಯುಕ್ತ ಅನ್ನದಾನ ಸೇವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು  (ಪ್ರತಿದಿನ ಸಂಜೆ 6-30ಕ್ಕೆ) :
ಮಾರ್ಚ್ 19– ಭರತನಾಟ್ಯ ಪ್ರದರ್ಶನ : ಕು|| ಸುರಭಿ ಶ್ರೀಧರ್ ಕೈಪೆ,
ಮಾರ್ಚ್ 20-ದ್ವಂದ್ವ ಪಿಟೀಲು ವಾದನ : ವಿ|| ಜಯಶ್ರೀ, ವಿ|| ಆದಿತ್ಯ ಮತ್ತು ಸಂಗಡಿಗರು,
ಮಾರ್ಚ್ 21-ಭರತನಾಟ್ಯ ಪ್ರದರ್ಶನ : ನೃತ್ಯ ದಿಶಾ ಟ್ರಸ್ಟಿನ  ವಿದ್ಯಾರ್ಥಿಗಳಿಂದ. ಗುರುಗಳು : ಡಾ|| ದರ್ಶಿನಿ ಮಂಜುನಾಥ್.
ಮಾರ್ಚ್ 22-ಶಾಸ್ತ್ರೀಯ ಸಂಗೀತ : ವಿ|| ಅಕ್ಷಯ ರುದ್ರಪಟ್ಟಣಂ ಮತ್ತು ಸಂಗಡಿಗರು,
ಮಾರ್ಚ್ 23-ಸಮೂಹ ಗಾಯನ : ವಿದುಷಿಯರಾದ ಶ್ರೀದೇವಿ ಗರ್ತಿಕೆರೆ, ಇಂದಿರಾ ಶರ್ಮಾ, ಎಂ.ಕೆ. ಶ್ರೀದೇವಿ, ಚಾಂದಿನಿ ಗರ್ತಿಕೆರೆ.
ಮಾರ್ಚ್ 24-ನೃತ್ಯ ವೈಭವ : ಮೈಸೂರಿನ ಶ್ರೀ ಗಣೇಶ ಸಂಗೀತ ನೃತ್ಯಾಲಯ ಚಾರಿಟಿಯಟಬಲ್ ಟ್ರಸ್ಟಿನ ಕಲಾವಿದರಿಂದ, ನಿರ್ದೇಶನ : ವಿ|| ಆರತಿ ಅರುಣ್,
ಮಾರ್ಚ್ 25-ಹರಿದಾಸ ಮಂಜರಿ : ಕು|| ಅನನ್ಯ ಬೆಳವಾಡಿ (ಗಾಯನ), ವಿ|| ಅಮಿತ್ ಶರ್ಮಾ (ಕೀಬೋರ್ಡ್), ವಿ|| ಸರ್ವೋತ್ತಮ (ತಬಲಾ).
ಮಾರ್ಚ್ 26-ಶಾಸ್ತ್ರೀಯ ಸಂಗೀತ : ವಿ|| ಆರ್.ಕೆ. ಪ್ರಸನ್ನಕುಮಾರ್ ಮತ್ತು ಸಂಗಡಿಗರು,
ಮಾರ್ಚ್ 27-ಸಂಜೆ 5-30ಕ್ಕೆ ಸ್ತುತಿ ವಾಹಿನಿ ತಂಡದವರಿಂದ ಭಜನಾಮೃತ. ನಂತರ ಭಗವದ್ಗೀತ ಶ್ಲೋಕಗಳ ಪಠಣ : ಕು|| ವೈನವಿ.
ಮಾರ್ಚ್ 28-ಹರಿದಾಸ ವೈಭವ : ಕು|| ಅವನಿ ಭಟ್ (ಗಾಯನ), ವಿ|| ಟಿ.ಎಸ್. ರಮೇಶ್ (ಕೀಬೋರ್ಡ್), ವಿ|| ಪ್ರಮಥ್ ವಿಠಲ್ (ತಬಲಾ),
ಮಾರ್ಚ್ 29-ಸಂಜೆ 7-30ಕ್ಕೆ ಶ್ರೀರಾಮದೇವರ ಪ್ರಾಕಾರೋತ್ಸವ ನಂತರ ಶ್ರೀ ಶಾರದಾ ಶಂಕರ ಭಜನಾ ಮಂಡಳಿಯ ಸದಸ್ಯರಿಂದ ದೇವರನಾಮ ಮತ್ತು ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀರಾಮಮಂದಿರದ ಗೌರವ ಕಾರ್ಯದರ್ಶಿ ಶ್ರೀ ಸಿ. ಚಂದ್ರಶೇಖರ್ ತಿಳಿಸಿದ್ದಾರೆ.

ಹೆಣ್ಣು ಮಕ್ಕಳು ಮತ್ತು ಆಸ್ತಿ

ನಾನು ಕೇಳಪಟ್ಟಂತೆ ಹೆಣ್ಣು ಮಕ್ಕಳಿಗೆ ಮಂಗಳ ದ್ರವ್ಯದ ಜೊತೆಯಲ್ಲಿ ಹಣ ಕೊಡುವುದು ಏಕೆಂದರೆ, ನಾವು ಏನೇ ಕೊಟ್ಟರೂ ಎಷ್ಟೇ ಕೊಟ್ಟರೂ ಏನೋ ಒಂದನ್ನು ಕಡಿಮೆ ಮಾಡಿರುತ್ತೇವೆ, ಹಾಗಾಗಿ ಅದನ್ನು ಸರಿಪಡಿಸಲು ಯಥಾಶಕ್ತಿ ದಕ್ಷಿಣ ಕೊಡುತ್ತೇವೆ. ಹಾಗೆಯೇ ಹೆಣ್ಣುಮಕ್ಕಳಿಗೆ ಕೊಡುವ ಅರಿಶಿಣ ಕುಂಕುಮದ ಬಾಬತು ಹಣ ಅವರಿಗೆ ಕಷ್ಟ ಕಾಲದಲ್ಲಿ ಉಪಯೋಗವಾಗಲಿ ಎಂದು ದೂರಾಲೋಚನೆಯಿಂದ ಕೂಡಿರುತ್ತದೆ.ಹಾಗೆಯೇ ಕೆಲವು ಸಂದರ್ಭಗಳಲ್ಲಿ ಸಹೋದರ ಸಹೋದರಿಯರಿಗೆ ಇರುವ ಸಂಪ್ರದಾಯಗಳು, ಆಚರಣೆಗಳು ಗಂಡು ಮಕ್ಕಳು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ನೆರವಾಗುವ ಉದ್ದೇಶವನ್ನು ಇಟ್ಟುಕೊಂಡಿರುತ್ತವೆ. ಹಾಗೆಯೇ ಗಂಡು ಮಕ್ಕಳು ತಮ್ಮ ಪೋಷಕರು ತೀರಿಕೊಂಡ ನಂತರವೂ,ಹೆಣ್ಣು ಮಕ್ಕಳಿಗೆ ಯತಾಶಕ್ತಿ ಸಹಾಯ ಮಾಡುವುದು, ಹಿಂದಿನ ದಿನಗಳಲ್ಲಿ ನಮ್ಮಲ್ಲಿ ಇತ್ತು. ಹಾಗಾಗಿ ಆಸ್ತಿ ಪಾಲು,ಹಂಚಿಕೆ ಮೊದಲಾದವು ಆಗ ನಡೆಯುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಆದರೆ ನಮ್ಮ ಸಂಪ್ರದಾಯಗಳ ಹಿಂದಿನ ಉದ್ದೇಶಗಳು ಬದಲಾಗಿಲ್ಲ. ಹಾಗಾಗಿ ಮಕ್ಕಳೆಲ್ಲರೂ ಸಮಾನವಾಗಿ ಪೋಷಕರನ್ನು ವಯಸ್ಸಾದ ಕಾಲದಲ್ಲಿ ನೋಡಿಕೊಳ್ಳುವುದು ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿದೆ.

ಈ ಮೇಲಿನ ವಿಷಯದ ಬಗ್ಗೆ ಕೆಲವು ಅಭಿಪ್ರಾಯಗಳು ಹಿಂದೆ ಪಿತ್ರಾರ್ಜಿತ ಆಸ್ತಿಯಲ್ಲಿ ಅಥವಾ ಮಾತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಇರುತ್ತಿರಲಿಲ್ಲ. ಆದರೆ ಈಗ ಕೊಡುತ್ತಿದ್ದಾರೆ. ಈ ಕಾನೂನು ಅಥವಾ ಸಂಪ್ರದಾಯ ಕರಾವಳಿ ಮೂಲದ ಬಂಟರ ಸಮುದಾಯದಿಂದ ಪ್ರೇರಿತವಾದದ್ದು ಎನ್ನುವರು. ಅವರಲ್ಲಿ ಹೆಣ್ಣುಮಕ್ಕಳಿಗೆ ಮನೆಯ ಆಸ್ತಿ ಅಧಿಕಾರ ಸಿಗುತ್ತದೆಯಂತೆ . ನಾನು ಕಂಡಂತೆ ಪ್ರತಿ ಹಿಂದುಗಳು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೂ ಅರಿಶಿನ ಕುಂಕುಮಕ್ಕೆ ಎಂದು ಏನಾದರೂ ಹಣ,ಒಡವೆ ಅಥವಾ ಇನ್ನೇನಾದರೂ ಉಡುಗೊರೆ ಕೊಡುವ ಸಂಪ್ರದಾಯವಿದೆ.ಬಹಳ ಹಿಂದೆ ಚಿಕ್ಕವಯಸ್ಸಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿರುತ್ತಿದ್ದರು. ಅವರು ದೂರದ ಊರಿನಲ್ಲಿ ನೆಲೆಸಿದ್ದರೆ ಅವರನ್ನು ಭೇಟಿ ಮಾಡುವ ಸಂದರ್ಭಗಳು ಕಡಿಮೆ ಇದ್ದವು . ಹೀಗಾಗಿ ಅವರಿಂದ ಯಾವುದೇ ರೀತಿಯ ಸಹಾಯ, ಸೇವೆ ಪೋಷಕರಿಗೆ ದೊರೆಯುತ್ತಿರಲಿಲ್ಲ. ಹಾಗಾಗಿ ಗಂಡು ಮಕ್ಕಳಿಗೆ ಆಸ್ತಿಯನ್ನು ಹಂಚಿ,ಅವರ ನೆರಳಿನಲ್ಲಿ ಇರುವುದು ರೂಡಿಯಾಗಿತ್ತು. ಆದರೆ ಪ್ರತಿ ಹಬ್ಬ,ಹರಿದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಎಂದೇ ಕೆಲವು ಉಡುಗೊರೆಗಳು ಕೊಡಲ್ಪಡುತ್ತಿದ್ದವು . ಇದನ್ನು ನಾನು ಹಬ್ಬಗಳ ಬಗೆಗೆ ಬರೆಯುವಾಗ ದಾಖಲಿಸಿದ್ದೇನೆ. ನಾನು ಯಾವ ಕಾನೂನು ತಜ್ಞಳೂ ಅಲ್ಲ. ಹಾಗಾಗಿ ಇವೆಲ್ಲ ನನ್ನ ವಯಕ್ತಿಕ ಅಭಿಪ್ರಾಯಗಳು. ಮೇಲೆ ಹೇಳಿದಂತೆ ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿ ಸಾಕಷ್ಟು ಮರ್ಯಾದೆ, ಗೌರವ ಹಾಗೂ ಉಡುಗೊರೆಗಳು ಲಭಿಸುತ್ತಿದ್ದವು. ಹಾಗಾಗಿ ಹಿಂದಿನವರು ಎಂದೂ ಆಸ್ತಿಪಾಲಿಗಾಗಿ ತವರು ಮನೆಯ ಮೇಲೆ ಕೇಸುಗಳನ್ನು ಹಾಕುತ್ತಿರಲಿಲ್ಲ. ಕಾಲಾಂತರದಲ್ಲಿ ಎಲ್ಲವೂ ಬದಲಾಗಿದೆ.ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸಮಾನವಾಗಿ ಆಸ್ತಿಯನ್ನು ತೆಗೆದುಕೊಂಡರೆ, ಅದಕ್ಕೆ ತಕ್ಕಂತೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.ಕೆಲಸ ಸಹಿತ ಮಾಡಬೇಕು. ಇದು ನನ್ನ ಅಭಿಪ್ರಾಯ.ಪೋಷಕರ ಬಳಿ ಹಣ ತೆಗೆದುಕೊಂಡು ಅವರನ್ನು ತಿರುಗಿಯೂ ನೋಡದೆ ಇರುವಂತಹ ಸಂದರ್ಭ ಬರಬಾರದು. ನಮ್ಮ ಕೈಲಾದಷ್ಟು ಪೋಷಕರಿಗೆ ಸಹಾಯ ಮಾಡುವ ನಿರ್ಧಾರ ಹೆಣ್ಣು ಮಕ್ಕಳು ಕೂಡ ತೆಗೆದುಕೊಳ್ಳಬೇಕು. ಹಾಗಾದರೆ ಮಾತ್ರ ಅವರು ತೆಗೆದುಕೊಳ್ಳುವ ಪಾಲಿಗೆ ಸರಿಯಾದ ಅರ್ಥ ಸಿಗುತ್ತದೆ. ಹೀಗಾಗಿ ಹೆಣ್ಣುಮಕ್ಕಳು ಗಂಡು ಮಕ್ಕಳಿಗೆ ಕಡಿಮೆ ಇಲ್ಲ ಎಂದು ಒಪ್ಪಬಹುದು. ಇವೆಲ್ಲ ನನ್ನ ವಯಕ್ತಿಕ ಅಭಿಪ್ರಾಯಗಳು.

ರಾಧಿಕಾ ಜಿ.ಎನ್.

‘ಸಂಸ್ಕಾರ ಸುಧಾ’ ಬೇಸಿಗೆ ಶಿಬಿರ

“ಧರ್ಮೋ ರಕ್ಷತಿ ರಕ್ಷಿತಃ” ಎಂಬ ಆಪ್ತವಾಕ್ಯದಂತೆ, ಧರ್ಮ ಮತ್ತು ಸಂಸ್ಕಾರಗಳ ರಕ್ಷಣೆಯೇ ಸದೃಢ ಸಮಾಜಕ್ಕೆ ಮೂಲಾಧಾರವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಮೌಲ್ಯಗಳು ಕ್ಷೀಣಿಸುತ್ತಿವೆ ಎಂಬ ಆತಂಕದ ನಡುವೆ, ಕೇವಲ ಶೈಕ್ಷಣಿಕ ಅಂಕಗಳಿಗೆ ಸೀಮಿತವಾಗದ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ. ಈ ಪವಿತ್ರ ಆಶಯದೊಂದಿಗೆ, ಬಾಲಭಾರತೀ (ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಅಂಗಸಂಸ್ಥೆ)
ಜಗದ್ಗುರುಗಳ ದಿವ್ಯ ಮಾರ್ಗದರ್ಶನದಲ್ಲಿ, ಕರ್ನಾಟಕ ದಾದ್ಯಂತ ‘ಸಂಸ್ಕಾರ ಸುಧಾ’ ಬೇಸಿಗೆ ಶಿಬಿರಗಳನ್ನು ಆಯೋಜಿಸಲು ಸಂಕಲ್ಪಿಸಲಾಗಿದೆ. ಮಕ್ಕಳಲ್ಲಿ ರಾಷ್ಟ್ರಪ್ರೇಮ, ಭವ್ಯ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಜ್ಞಾನದೀಪ್ತಿಯನ್ನು ಮಕ್ಕಳ ಮನಸ್ಸಿನಲ್ಲಿ ಬೆಳಗಲು ಸಮರ್ಥ ಶಿಕ್ಷಕರೇ ಅತ್ಯಗತ್ಯ. ಈ ಶಿಬಿರವನ್ನು ಯಶಸ್ವಿಯಾಗಿ ನಡೆಸುವ ಶಿಕ್ಷಕರಿಗೆ ಯೋಗ್ಯವಾದ ಗೌರವಧನ ನೀಡಲಾಗುತ್ತದೆ.
ಬೋಧನೆಯು ಕೇವಲ ಉದ್ಯೋಗವಾಗದೆ, ಒಂದು ತಪಸ್ಸಿನಂತೆ ಸಮಾಜದ ನವನಿರ್ಮಾಣಕ್ಕೆ ದಾರಿದೀಪವಾಗಲಿ. ಬನ್ನಿ, ಈ ಮಹತ್ತರ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಿ, ಮುಂದಿನ ಪೀಳಿಗೆಗೆ ಸಂಸ್ಕಾರದ ಅಮೃತವನ್ನು ಹಂಚೋಣ.
📍 ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಪೋಸ್ಟರ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
✨ ವಿದ್ಯಾರ್ಥಿಗಳ ಗಮನಕ್ಕೆ: ನೀವೇನಾದರೂ ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದ್ದರೆ, ಇಲ್ಲಿ ನಿಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿ ನೋಂದಾಯಿಸಿಕೊಳ್ಳಬಹುದು – visit: http://tinyurl.com/SSCampKA
ಶಾರದೇ ಪಾಹಿಮಾಂ ಶಂಕರ ರಕ್ಷಮಾಂ!

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ತಯಾರಿ: ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವ-ಎನ್.ಎಸ್.ಸೋಮಶೇಖರ್,

Bengaluru : ಮಾರ್ಚ್ ತಿಂಗಳು ದಿನಾಂಕ: 18-03-2026 ರಿಂದ ಎಸ್.ಎಸ್.ಎಲ್.ಸಿ. (SSLC Examinations) ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿವೆ.ಈಗಾಗಲೆ ಹಲವಾರು ಪೂರ್ವ ಸಿದ್ಧತಾ ಹಂತದ ಪರೀಕ್ಷೆಗಳು ನಡೆದಿದ್ದು ವಾರ್ಷಿಕ ಪರೀಕ್ಷೆಯ ಬಗ್ಗೆ ನಿಮ್ಮಲ್ಲಿ ಆತ್ಮವಿಶ್ವಾಸ ವನ್ನು ಹೆಚ್ಚಿಸಿವೆ. ಅದಕ್ಕಾಗಿ ವಿಷಯವಾರು ಕೊನೆಯ ಹಂತದ ಪೂರ್ವಸಿದ್ಧತೆ (preparations) ಯನ್ನು ನೀವು ಮಾಡಿಕೊಳ್ಳಲೇಬೇಕಿದೆ.

“ಪರೀಕ್ಷೆಯೊಂದು ಹಬ್ಬ ಅದನ್ನು ಸಂಭ್ರಮಿಸಿ. ನೆನಪಿರಲಿ ಪರೀಕ್ಷೆ ಸಮಯ ಹತ್ತಿರಕ್ಕೆ ಬಂದಂತೆ ಯಾವುದೇ ಪರೀಕ್ಷಾ ಭಯ, ಒತ್ತಡಕ್ಕೆ ಒಳಗಾಗದೆ, ಅತ್ಯಂತ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಖಂಡಿತ ಯಶಸ್ಸು ನಿಮ್ಮದೆ. ನಿಮ್ಮ ಗುರಿಯನ್ನು ತಲುಪಲು ನಿಮಗಿರುವುದು ಇನ್ನೊಂದೇ

ಎಸ್.ಎಸ್.ಎಲ್.ಸಿ (Secondary School Leaving Certificate) ಜೀವನದಲ್ಲಿ ಅತ್ಯಂತ ಪ್ರಮುಖ ಹಂತವಾಗಿದೆ.

ಪರೀಕ್ಷೆಗೆ ತಯಾರಾಗುವಾಗ ಹಲವರು ಹೆಚ್ಚು ಸಮಯ ಓದುವುದರ ಮೇಲೆ ಮಾತ್ರ ಗಮನ ಕೊಡುತ್ತಾರೆ. ಆದರೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಓದು ಮಾತ್ರ ಸಾಕಾಗುವುದಿಲ್ಲ. ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ಸಮಾನವಾಗಿ ಮುಖ್ಯವಾಗಿದೆ.

ಸರಿಯಾದ ಓದು ವೇಳಾಪಟ್ಟಿ ರೂಪಿಸಿಕೊಳ್ಳಿ, ಸಕಾರಾತ್ಮಕ ಮನೋಭಾವ ಹೊಂದಿರಿ. ಪರೀಕ್ಷಾ ಒತ್ತಡವು ಸಾಮಾನ್ಯವಾದದ್ದು, ಆದರೆ ವಿದ್ಯಾರ್ಥಿಗಳು ಶಾಂತವಾಗಿಯೂ ಸಕಾರಾತ್ಮಕ ಮನೋಭಾವದೊಂದಿಗೆ ಇರಬೇಕು. ಆಳವಾದ ಉಸಿರಾಟ, ಚಿಕ್ಕ ಧ್ಯಾನ, ಅಥವಾ ಪೋಷಕರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮಾತನಾಡುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಮರ್ಪಕ ನಿದ್ರೆ, ಪಡೆಯಿರಿ
ಆರೋಗ್ಯಕರ ಆಹಾರ ಸೇವನೆ ಮಾಡಿ, ಪರೀಕ್ಷಾ ಸಮಯದಲ್ಲಿ ಸಮತೋಲನಯುತ ಆಹಾರ ಬಹಳ ಮುಖ್ಯ ಹಣ್ಣುಗಳು, ತರಕಾರಿಗಳು, ಕಾಯಿ-ಬೀಜಗಳು ಜೊತೆಗೆ ಬಾದಾಮಿ, ಪಿಸ್ತಾ, ವಾಲ್ಬಟ್ ಮಿತವಾಗಿ ಸೇವಿಸಿ ತಪ್ಪದೇ ಒಂದು ಲೋಟ ಬಾದಾಮಿ ಹಾಲು/ ಹಾಲು ಮತ್ತು ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ ಸಾಕಷ್ಟು ನೀರು ಮತ್ತು ಕಲ್ಲಂಗಡಿ ಹಣ್ಣನ್ನು ಸೇವಿಸಿ.

ಕೊನೆಯ ಕ್ಷಣದ ಒತ್ತಡ ತಪ್ಪಿಸಿ
ಕೊನೆಯ ಕ್ಷಣದಲ್ಲಿ ತುಂಬಾ ಓದುವುದರಿಂದ ಗೊಂದಲ ಮತ್ತು ಒತ್ತಡ ಹೆಚ್ಚಾಗಬಹುದು. ಆದ್ದರಿಂದ ನಿಯಮಿತವಾಗಿ ಪುನರ್‌ಮನನ ಮಾಡಿ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಉತ್ತಮ.

ಅಗತ್ಯವಿದ್ದರೆ ಸಹಾಯ ಕೇಳಿ
ಶಿಕ್ಷಕರು, ಪೋಷಕರು ಅಥವಾ ಸ್ನೇಹಿತರ ಸಹಾಯ ಪಡೆಯಲು ಹಿಂಜರಿಯಬಾರದು. ಅವರ ಪ್ರೋತ್ಸಾಹವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುನ್ನ ಇವು ನಿಮಗೆ ತಿಳಿದಿರಲಿ:
ಉತ್ತರ ಪತ್ರಿಕೆಯಲ್ಲಿ ಬರವಣಿಗೆ ಅಂದವಾಗಿರಲಿ,ಅನಾವಶ್ಯಕವಾಗಿ ಗೀಚುವುದು ಬೇಡ. ಸಮಯದ ಅರಿವಿರಲಿ.

ಇರುವ ಸಮಯದಲ್ಲಿ ಸಾಕಷ್ಟು ಮಾದರಿ/ಹಿಂದಿನ ವರ್ಷದ/ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ.

ಓದುವ ಭರದಲಿ ಆರೋಗ್ಯವನ್ನು ಕಳೆದುಕೊಳ್ಳದಿರಿ. ಆರೋಗ್ಯಕರ ಆಹಾರವನ್ನು ಸೇವಿಸಿ. ಉತ್ತಮ ನಿದ್ದೆ ಅಗತ್ಯ

ಬಹು ಮುಖ್ಯವಾಗಿ ವಿದ್ಯಾರ್ಥಿಗಳು ಟಿ.ವಿ. ಮೊಬೈಲ್‌ನಿಂದ ದೂರವಿದ್ದು, ಅಧ್ಯಯನದ ಕಡೆ ಹೆಚ್ಚಿನ ಗಮನ ನೀಡಿ.

ಪರೀಕ್ಷೆಯ ಪ್ರವೇಶ ಪತ್ರ ಕಳೆದು ಹೋದಲ್ಲಿ ಆತಂಕಕ್ಕೆ ಒಳಗಾಗುವುದು ಬೆಡ ಮೊದಲೆ ಒಂದು ಅಥವಾ ಎರಡು ಜರಾಕ್ಸ್ ಪ್ರತಿಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ನಿಮ್ಮ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸುವುದು.

ಪರೀಕ್ಷೆಯೊಂದು ಭಯವಲ್ಲ, ಅದೊಂದು ಹಬ್ಬ ಸಂಭ್ರಮಿಸಿ. ಖಂಡಿತ ಯಶಸ್ಸು ನಿಮ್ಮದೇ. ನಿಮಗೆಲ್ಲರಿಗೂ ಶುಭವಾಗಲಿ.

ಸೋಮಶೇಖರ್ ಎನ್ ಎಸ್
(M.A, B.Ed, L.L.B)
ಖಚಾಂಚಿ, ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ