ಬೆಂಗಳೂರು: ಶಿಕ್ಷಣ, ಸಂಸ್ಕೃತ, (Sanskrit) ವೇದಾಂತ ಹಾಗೂ ಆಗಮಶಾಸ್ತ್ರ ಕ್ಷೇತ್ರಗಳಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ಬೆಂಗಳೂರಿನ ನಿವೃತ್ತ ಸಂಸ್ಕೃತ ಶಿಕ್ಷಕರಾದ ಎಸ್. ಶ್ರೀನಿವಾಸ (S. Srinivas) ಅವರಿಗೆ ತಮಿಳುನಾಡಿನ (Hosur) ಹೊಸೂರಿನ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ವಿಶ್ವವಿದ್ಯಾಲಯ (Asia International Culture Research University) ಗೌರವ ಡಾಕ್ಟರೇಟ್ (Doctorate) ಪದವಿ ಪ್ರದಾನ ಮಾಡಿದೆ.
ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ಡಾ. ಕೃಷ್ಣಮೂರ್ತಿ ಸ್ವಾಮೀಜಿ, ಪದ್ಮಶ್ರೀ ಡಾ. ಎಸ್. ಜಿ. ಸುಶೀಲಮ್ಮ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸುಮಾರು 37 ವರ್ಷಗಳ ಶೈಕ್ಷಣಿಕ ಸೇವೆ ಸಲ್ಲಿಸಿರುವ ಶ್ರೀನಿವಾಸ ಅವರು ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿ ೩೬ ವರ್ಷ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು 5 ಕೋಟಿ ಮೌಲ್ಯದ ಕೊಡುಗೆ ನೀಡಿರುವ ಅವರು, ನಿವೃತ್ತಿಯ ಬಳಿಕವೂ ಸಂಸ್ಕೃತ, ವೇದಾಂತ, ಆಗಮಶಾಸ್ತ್ರ ಹಾಗೂ ಭಾರತೀಯ ಶಾಸ್ತ್ರಗಳ ಉಚಿತ ಬೋಧನೆಯ ಮೂಲಕ ಜ್ಞಾನಸೇವೆಯನ್ನು ಮುಂದುವರಿಸಿದ್ದಾರೆ.
ಅವರ ಸೇವೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ (ಮೂರು ಬಾರಿ), ಡಿಎಸ್ಇಆರ್ಟಿ ವಿಜ್ಞಾನಗೋಷ್ಠಿ ಪ್ರಶಸ್ತಿ (ಮೂರು ಬಾರಿ), ಆಗಮ ಮಂಗಳಶಾಸನ ಸನ್ಮಾನ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ಈಗ ಲಭಿಸಿರುವ ಗೌರವ ಡಾಕ್ಟರೇಟ್ ಅವರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವೆಗೆ ಸಂದ ಮತ್ತೊಂದು ಮಹತ್ವದ ಗೌರವವಾಗಿದೆ.

