ಬೆಂಗಳೂರು: ಕಾರ್ಪೋರೇಟ್ ಸಂಸ್ಥೆಗಳು, ಕೈಗಾರಿಕೆಗಳು ಒಳಗೊಂಡಂತೆ ಸಾಮಾಜಿಕ ಹೊಣೆಗಾರಿಕೆ ನಿಧಿ – ಸಿಎಸ್ಆರ್ ಅಡಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ನೀತಿ ಜಾರಿಗೆ ತರಲು ಸರ್ಕಾರ ಕಾರ್ಯೋನ್ಮುಖವಾಗಿದ್ದು, ಸಿಎಸ್ಆರ್ ಚಟುವಟಿಕೆಗಳ ಮೇಲೆ ನಿಗಾವಹಿಸಲು ಐಎಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM.D.K.Shivakumar) ಹೇಳಿದ್ದಾರೆ.
ನಗರದ ಯುಬಿ ಸಿಟಿಯ ಮ್ಯಾರಿಯಟ್ ಹೋಟೆಲ್ ನಲ್ಲಿ(Mariyet Hotel) ಗ್ರೇಟರ್ ಬೆಂಗಳೂರು ಐಟಿ ಕಂಪೆನಿಗಳು(IT Companies) ಮತ್ತು ಕೈಗಾರಿಕೆಗಳ ಸಂಘದಿಂದ ಆಯೋಜಿಸಲಾದ ಸಿಎಸ್ಆರ್ ವಿಷಯನ್ – 2030 ಸಮಾವೇಶದಲ್ಲಿ ಮಾತನಾಡಿದ ಅವರು, ಸಿ.ಎಸ್.ಆರ್ ಚಟುವಟಿಕೆಯಲ್ಲಿ ಮೊದಲ ಹಂತದಲ್ಲಿ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ನಂತರ ಆರೋಗ್ಯ ಸೇವೆಗೆ ಆದ್ಯತೆ ನೀಡಲಾಗುವುದು. ಕಂಪೆನಿಗಳು ಸಿಎಸ್ಆರ್ ಚಟುವಟಿಕೆಯಲ್ಲಿ ವೆಚ್ಚ ಮಾಡುವ ಹಣ, ಚಟುವಟಿಕೆಗಳ ಮೇಲೆ ನಿಗಾವಹಿಸಲು ಸೂಕ್ತ ಕಣ್ಗಾವಲು ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದರು.
ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರು ನಗರದಲ್ಲಿ ಶಾಲೆಗಳ ಅಭಿವೃದ್ಧಿಗೆ ಅನುಮತಿ ನೀಡುವುದಿಲ್ಲ. ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲೂ ಶಾಲೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವಂತಿಲ್ಲ. ಗ್ರಾಮ ಪಂಚಾಯತ್ ಹಂತದಲ್ಲಿ ಶಾಲಾಭಿವೃದ್ಧಿಗೆ ಗಮನಹರಿಸಬೇಕು. ಯಾವ ಗ್ರಾಮದ ಶಾಲೆಯನ್ನಾದರೂ ಅಭಿವೃದ್ಧಿಪಡಿಸಿದರೂ ಸರ್ಕಾರ ನಿರ್ಬಂಧ ವಿಧಿಸುವುದಿಲ್ಲ. ಯಾರಿಗೆ ಬೇಕಾದರೂ ಗುತ್ತಿಗೆ ನೀಡಿ. ಆದರೆ ಗ್ರಾಮ ಪಂಚಾಯತ್ ಹಂತದಲ್ಲಿ ಉತ್ತಮ ಚಿಕಿತ್ಸೆ ದೊರೆಯುವಂತಹ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳು, ಸಿಎಸ್ಆರ್ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳು ಬಿಲ್ಡರ್ ಗಳನ್ನು ಒಳಗೊಂಡಂತೆ ಸಮಿತಿ ರಚಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಸಿ.ಎಸ್.ಆರ್ ವ್ಯಾಪ್ತಿಯಡಿ ಪ್ರಸ್ತುತ 3394 ಕೋಟಿ ರೂ ವೆಚ್ಚ ಮಾಡುತ್ತಿದ್ದು, ಇದು ಅತ್ಯಂತ ಕಡಿಮೆಯಾಗಿದೆ. ವಾರ್ಷಿಕ ಸುಮಾರು 10 ಸಾವಿರ ಕೋಟಿ ರೂ ವೆಚ್ಚ ಮಾಡಬೇಕಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಐಎಎಸ್ ಅಧಿಕಾರಿಯೊಬ್ಬರು ಈ ಬಗ್ಗೆ ಗಮನಹರಿಸಲಿದ್ದಾರೆ. ಸರ್ಕಾರ ನಿರ್ಮಾಣ ಚಟುವಟಿಕೆ ಮಾಡಿದರೆ ಶೇ 18 ರಷ್ಟು ಜಿ.ಎಸ್.ಟಿ ಪಾವತಿಸಬೇಕಾಗುತ್ತದೆ. ಹಾಗಾಗಿ ಗುಣಮಟ್ಟದ ನಿರ್ಮಾಣ ಕಾರ್ಯಗಳನ್ನು ನೀವೇ ನಿರ್ವಹಿಸಬೇಕು. ಜೊತೆಗೆ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಸಹ ರಾಜ್ಯದಲ್ಲಿ ತಲಾ ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ನಿರ್ವಹಣೆ ಮಾಡಬೇಕು. ನನ್ನ ಮಗಳು ಸಹ ಮೂರು ಶಾಲೆಗಳನ್ನು ದತ್ತು ಪಡೆದಿದ್ದಾಳೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಗ್ರಾಮೀಣ ಬಾಗದಲ್ಲಿ ಹಲವು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಸಿ.ಎಸ್.ಆರ್ ಚಟುವಟಿಕೆಯಡಿ ಆರೋಗ್ಯ ಕ್ಷೇತ್ರಕ್ಕೂ ಸಹ ಒತ್ತು ನೀಡುತ್ತಿದ್ದು, ರಾಜ್ಯದಲ್ಲಿ ಉತ್ತಮ ವೈದ್ಯಕೀಯ ಶಿಕ್ಷಣವಿದೆ. ಜೊತೆಗೆ ನರ್ಸಿಂಗ್ ಶಿಕ್ಷಣದ ಮೂಲಕ ಪ್ರತಿ ವರ್ಷ ಒಂದು ಲಕ್ಷ ಅರೆ ವೈದ್ಯಕೀಯ ಸಿಬ್ಬಂದಿ ಶಿಕ್ಷಣ, ತರಬೇತಿ ಪಡೆದು ಹೊರ ಬರುತ್ತಿದ್ದಾರೆ. ರಾಜ್ಯದಲ್ಲಿ ಇಡೀ ವಿಶ್ವದಲ್ಲಿಯೇ ಅತ್ಯುತ್ತಮ ವೈದ್ಯರಿದ್ದು, ಗುಣಮಟ್ಟದ
ಚಿಕಿತ್ಸೆ ದೊರೆಯುತ್ತಿದೆ. ಬೆಂಗಳೂರು ನಗರದ ಬೆಳವಣಿಗೆಗೆ ಪಂಡಿತ್ ಜವಾಹರ್ ಲಾಲ್ ನೆಹರು ಸ್ವಾತಂತ್ರೋತ್ತರದಲ್ಲಿ ಉತ್ತಮ ಅಡಿಪಾಯ ಹಾಕಿದ್ದು, ಜಗತ್ತಿನ ಅತ್ಯುತ್ತಮ ಕಂಪೆನಿಗಳು ಇಲ್ಲಿವೆ. ಈ ನಗರದಲ್ಲಿ ನಾವು ಮಾತನಾಡುವ ಎಲ್ಲವೂ ಲಭ್ಯವಿದೆ. ಆದರೆ ಮುಂಬೈನಂತೆ ಬೆಂಗಳೂರು ನಗರ ದುಬಾರಿಯಲ್ಲ. ಒಂದು, ಒಂದೂವರೆ ಕೋಟಿಗೆ ನಗರದ ಆಸುಪಾಸಿನಲ್ಲಿ ಉತ್ತಮ ಮನೆಗಳನ್ನು ಖರೀದಿಸಬಹುದು. ಮುಂಬರುವ ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಈ ನಗರಕ್ಕೆ ಮತ್ತಷ್ಟು ಅಚ್ಚರಿಗಳು ದೊರೆಯಲಿವೆ ಎಂದರು.
ಸಿಎಸ್ಆರ್ ಚಟುವಟಿಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಸಲ್ಯೂಟ್ ಮಾಡುತ್ತೇನೆ. ರಾಜ್ಯದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಅನನ್ಯ. ನಿಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಬಾಗಿಲು ಸದಾ ತೆರೆದಿರುತ್ತದೆ. ಶಿಕ್ಷಣಕ್ಕಾಗಿ ಗ್ರಾಮೀಣ ಭಾಗದ ಜನತೆ ನಗರ ಪ್ರದೇಶಗಳಿಗೆ ವಲಸೆ ಬರುವಂತಾಗಬಾರದು. ನಗರ ಪ್ರದೇಶದಲ್ಲಿ ದೊರೆಯುವಂತಹ ಶಿಕ್ಷಣ ಗ್ರಾಮೀಣರಿಗೂ ಲಭ್ಯವಾಗುವಂತೆ ನೋಡಿಕೊಳ್ಳಿ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಈಗಾಗಲೇ 13 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಿದ್ದು, ಇನ್ನೂ ಕೆಲವು ಶಾಲೆಗಳ ಅಭಿವೃದ್ಧಿ ವಿವಿಧ ಹಂತಗಳಲ್ಲಿವೆ. ಮುಂದಿನ ವರ್ಷ ಹತ್ತು ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರತಿಯೊಂದು ಶಾಲೆಗಳಿಗೆ ಹತ್ತು ಕೋಟಿ ವೆಚ್ಚ ಮಾಡುವ ಗುರಿ ಹೊಂದಲಾಗಿದೆ. ಒಟ್ಟು ನೂರು ಕೋಟಿ ಮೊತ್ತವನ್ನು ಮುಂದಿನ ವರ್ಷ ಕ್ರೋಡೀಕರಣ ಮಾಡುವ ಗುರಿ ಹೊಂದಲಾಗಿದೆ. ಸಮ್ಮೇಳನದಲ್ಲಿ 150ಕ್ಕೂ ಅಧಿಕ ಕಂಪೆನಿಗಳು ಪಾಲ್ಗೊಂಡಿದ್ದವು.
ಸಮ್ಮೇಳನದಲ್ಲಿ ಗ್ರೇಟರ್ ಬೆಂಗಳೂರು ಐಟಿ ಕಂಪೆನಿಗಳು ಮತ್ತು ಕೈಗಾರಿಕೆಗಳ ಸಂಘದ ಸಲಹೆಗಾರ, ಮಾಜಿ ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್ ಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನ ಸಿಇಒ ಸಂಜೀವ್ ಕುಮಾರ್ ಗುಪ್ತಾ, ಜಿಬಿಐಟಿಸಿಐಎ ಚೇರ್ ಮನ್ ಆದಿತ್ಯ ಪಿ.ಎಸ್, ಜಿಬಿಐಟಿಸಿಐಎ ಅಧ್ಯಕ್ಷ ಗಿರೀಶ್ ಎಚ್.ಕೆ., ಖಜಾಂಚಿ ಎಸ್. ಮಯೂರ್, ಸಿಎಸ್ಆರ್ ಮುಖ್ಯಸ್ಥರಾದ ವಾಸುದೇವ್ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್ ಶಾಲಾ ಹಂತದಲ್ಲಿ ತಮಗೆ ಉತ್ತಮ ಶಾಲೆಗಳಲ್ಲಿ ಪ್ರವೇಶ ದೊರೆತಿರಲಿಲ್ಲ. ಶಾಲಾ ಪ್ರವೇಶಾತಿಗಾಗಿ ತಾವು ಶಾಸಕರಿಂದ ಹಿಡಿದು ಮುಖ್ಯಮಂತ್ರಿವರೆಗೆ ಅಲೆದಾಡಿದ ಪ್ರಸಂಗಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೆನಪಿಸಿಕೊಂಡರು.
ನಮ್ಮ ತಂದೆ ತಾಲ್ಲೂಕು ಮಂಡಳಿ ಸದಸ್ಯರಾಗಿದ್ದು, ಅವರು ನನ್ನನ್ನು 8ನೇ ತರಗತಿಗೆ ವಸತಿ ಶಾಲೆಗೆ ಸೇರಲು ಶಿಕ್ಷಣ ಸಚಿವರಿಗೆ ಶಿಫಾರಸ್ಸು ಪತ್ರಕ್ಕಾಗಿ ಕನಕಪುರದ ಶಾಸಕರಾದ ಡಿ. ಕರಿಯಪ್ಪ ಗೌಡ ಅವರ ಬಳಿ ಕರೆದೊಯ್ತಿದ್ದರು. ನಂತರ ಶಿಕ್ಷಣ ಸಚಿವರಾಗಿದ್ದ ಡಾ. ಕೆ.ಪಿ. ಗೋಪಾಲ ಕೃಷ್ಣ, ಅದಾದ ಬಳಿಕ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸ್ ಅವರ ಬಳಿಗೂ ತೆರೆಳಿ ಎನ್.ಪಿ.ಎಸ್ ಶಾಲೆಗೆ ಪ್ರವೇಶ ಪಡೆಯಲು ಶಿಫಾರಸ್ಸು ಮಾಡುವಂತೆ ಕೇಳಿದೆವು. ಆಗ ಅರಸು ಅವರು ಎನ್.ಪಿ.ಎಸ್ ಶಾಲೆ ಮುಖ್ಯಸ್ಥ ಗೋಪಾಲ ಗೌಡ ತುಂಬ ನಿಷ್ಠುರ ವ್ಯಕ್ತಿ. ಶಿಫಾರಸ್ಸು ಮಾಡಲು ಸಾಧ್ಯವಿಲ್ಲ, ಕ್ಷಮಿಸಿ ಎಂದು ಹೇಳಿದರು. ಬಳಿಕ ವಿದ್ಯಾ ವರ್ಧಕ ಸಂಘದ ಶಿಕ್ಷಣ ನಡೆಸುತ್ತಿದ್ದ ಸರ್ದಾರ್ ಪಟೇಲ್ ಶಾಲೆಗಳ ಶಾಖೆಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಕೋರಿದ್ದ ಪತ್ರಕ್ಕೆ ಸಹಿ ಮಾಡಿ ತಮ್ಮನ್ನು ಒಳಗೊಂಡಂತೆ ಮೂವರಿಗೆ ವಿದ್ಯಾ ವರ್ಧಕ ಶಾಲೆಯಲ್ಲಿ ಪ್ರವೇಶ ಕಲ್ಪಿಸುವಂತೆ ಸೂಚಿಸಿದರು. ಹೀಗೆ ಮುಖ್ಯಮಂತ್ರಿಯಾಗಿದ್ದವರೂ ಶಾಲೆ ಪ್ರವೇಶಕ್ಕೆ ಅಲೆದಿದಾಡಿದ್ದು ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾಋ ನೆನಪು ಮಾಡಿಕೊಂಡರು.
ReplyForward

