* ಸಿಎಂ ಡಿಕೆಶಿ ʼಜೈಲು ಹೇಳಿಕೆʼ ಸಿಂಪತಿಗೆ; ಜೋಶಿ ಆರೋಪ
* ಪ್ರಾಮಾಣಿರಾಗಿದ್ದರೆ ಅವರಿಗೇಕೆ ಆ ಭಯ? ಕೇಂದ್ರ ಸಚಿವರ ತಿರುಗೇಟು
* ಯಾರೂ ಜೈಲಿಗೆ ಕಳಿಸಲು ನೋಡುತ್ತಿಲ್ಲ; ಅನುಕಂಪ ಗಿಟ್ಟಿಸಿಕೊಳ್ಳೋ ಯತ್ನ
ಬೆಂಗಳೂರು: ʼಮುಖ್ಯಮಂತ್ರಿ ಡಿಕೆ ಶಿವಕುಮಾರ್(CM.D.K.ShivaKumar) ಅವರನ್ನು ಯಾರೂ ಜೈಲಿಗೆ ಕಳಿಸುತ್ತಿಲ್ಲ. ಪ್ರಾಮಾಣಿಕರಾಗಿದ್ದರೆ ಅವರಿಗೇಕೆ ಅದರ ಭಯ? ಜನರ ಸಿಂಪತಿ ಗಿಟ್ಟಿಸಿಕೊಳ್ಳಲು ನೋಡುತ್ತಿದ್ದಾರವರುʼ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಮಾದ್ಯಮದವರೊಂದಿಗೆ ಮಾತನಾಡಿ, ಸಿಎಂ ಡಿಕೆಶಿ ಅವರ ʼನನ್ನನ್ನು ಜೈಲಿಗೆ ಕಳಿಸಲು ನೋಡುತ್ತಿದ್ದಾರೆʼ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಇದೆಲ್ಲಾ ಅನುಕಂಪ ಗಿಟ್ಟಿಸಿಕೊಳ್ಳುವ ಒಂದು ಪ್ರಯತ್ನ ಎಂದು ಟೀಕಿಸಿದರು.
‘ಯಾರೇ ಆಗಲಿ ಅಪರಾಧ ಮಾಡಿದವರು ಮಾತ್ರ ಜೈಲಿಗೆ ಹೋಗುತ್ತಾರೆ. ಹಾಗಾದರೆ ಸಿಎಂ ಡಿಕೆ ಶಿವಕುಮಾರ್ ಏನು ತಪ್ಪು ಮಾಡಿದ್ದಾರಾ? ಭ್ರಷ್ಟಾಚಾರ ಎಸಗಿದ್ದಾರಾ? ವಿನಾಕಾರಣ ಅವರಿಗೇಕೆ ಜೈಲಿಗೆ ಹೋಗುವ ಭಯ? ಈಗೇಕೆ ಆ ಮಾತನಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಯಾರೂ ಜೈಲಿಗೆ ಕಳಿಸುತ್ತಿಲ್ಲ: ಭ್ರಷ್ಟಾಚಾರ ಮತ್ತು ತಪ್ಪು ಮಾಡಿದ ಯಾರೇ ಆಗಲಿ ಜೈಲಿಗೆ ಹೋಗುತ್ತಾರೆ. ನಾವೇನೂ ಅವರನ್ನು ಜೈಲಿಗೆ ಕಳಿಸಲು ನೋಡುತ್ತಿಲ್ಲ. ಅವರು ತಪ್ಪು ಮಾಡಿ, ಭ್ರಷ್ಟಾಚಾರ ಎಸಗಿ ಜೈಲಿಗೆ ಹೋದರೆ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯರಿಗೆ ಇರದಿದ್ದ ಟೌನ್ಶಿಪ್ ಆಸಕ್ತಿ ನಿಮಗೇಕೆ?:
ಸಿದ್ದರಾಮಯ್ಯ ಅವರಿಗೆ ಇರದಿದ್ದ ʼಬಿಡದಿ ಟೌನ್ಶಿಪ್ʼ ಆಸಕ್ತಿ ನಿಮಗೇಕೆ? ಅಂದರೆ ಇದರಲ್ಲೇನೋ ಡೀಲ್ ಆಗಿದೆ ಎಂಬ ಸಂಶಯ ಬರುತ್ತದೆ ಅಲ್ಲವೇ? ಈ ಬಗ್ಗೆ ಏಕೆ ಉತ್ತರಿಸುತ್ತಿಲ್ಲ? ಮಾಜಿ ಪ್ರಧಾನಿ ದೇವೇಗೌಡರ ಆರೋಪಕ್ಕೆ ಸ್ಪಷ್ಟನೆ ಕೊಡುವುದನ್ನು ಬಿಟ್ಟು ಅವರ ಮೇಲೇಕೆ ರೇಗಾಡುತ್ತಿದ್ದೀರಿ? ಎಂದು ಸಿಎಂ ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಲವಂತದಿಂದ ರೈತರ ಭೂಮಿ ಕಿತ್ತುಕೊಂಡು ಟೌನ್ಶಿಪ್ ನಿರ್ಮಿಸುವ ಬದಲು ಮೊದಲು ರೈತರ ಮನವೊಲಿಸಬೇಕಿತ್ತು. ಬಿಡದಿ ವಿಚಾರದಲ್ಲಿ ಅನೇಕರು ನಾನಾ ಸಲಹೆ ಕೊಟ್ಟರೂ ಸ್ವೀಕರಿಸದೆ ಸಿಎಂ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಜೋಶಿ ಕಿಡಿ ಕಾರಿದರು.
ವಿಪಕ್ಷ ನಾಯಕ ರಾಹುಲ್ ಗಾಂಧಿ ಎಲ್ಲಿ?:
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ 25 ದಿನಗಳಿಂದ ಎಲ್ಲಿದ್ದಾರೆ? ಈ ಬಗ್ಗೆ ಕಾಂಗ್ರೆಸ್ ನಾಯಕರು ಜನತೆಗೆ ತಿಳಿಸಲಿ. ನಾವೆಲ್ಲೇ ಹೋದರು ಹೇಳುತ್ತೇವೆ. ಅವರೇಕೆ ಹಾಗೆ ಹೇಳುತ್ತಿಲ್ಲ? ವಿಪಕ್ಷ ನಾಯಕರಾಗಿರುವ ಅವರಿಗೆ ಜವಾಬ್ದಾರಿ ಇಲ್ಲವೇ? ರಾಜ್ಯದಲ್ಲಿ ಅರೆಬರೆ ಸಚಿವ ಸಂಪುಟ ರಚಿಸಿ ಅರ್ಧಾಡಳಿತಕ್ಕೆ ನಾಂದಿ ಹಾಡಿದಂತಿದೆ ಎಂದು ಟೀಕಿಸಿದರು.
ಬರದ ವಿಚಾರದಲ್ಲಿ ರಾಜಕೀಯ ಸರಿಯಲ್ಲ;
ಬರದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುವುದು ಸರಿಯಲ್ಲ. ಬರ ಅಧ್ಯಯನಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುವ ಮುನ್ನ ಬರ ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕು ಎಂದರು.
ರಾಜ್ಯದಲ್ಲಿ ಎಲ್ಲೆಲ್ಲಿ ಮಳೆಯಾಗಿದೆ? ಎಲ್ಲೆಲ್ಲಿ ಬರ ಸಮಸ್ಯೆ ಎದುರಾಗಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮೊದಲು ಅಧ್ಯಯನ ಮಾಡಿ ಕೇಂದ್ರಕ್ಕೆ ಸಲ್ಲಿಸಬೇಕು. ಅದು ಬಿಟ್ಟು ವಿನಾಕಾರಣ ರಾಜಕೀಯ ಮಾಡುವುದು ಸಲ್ಲದು ಎಂದು ಚಾಟಿ ಬೀಸಿದರು.
ʼಮಳೆ ಹೆಚ್ಚಾದರೂ ಪ್ರಧಾನಿ ಮೋದಿಯೇ ಕಾರಣ, ಮಳೆ ಕಡಿಮೆಯಾದರೂ ಮೋದಿಯೇ ಕಾರಣ, ದೇಶದಲ್ಲಿ ಜನಸಂಖ್ಯೆ ಹೆಚ್ಚಿದರೂ ಮೋದಿಯವರೇ ಕಾರಣʼ. ಎನ್ನುವಂತಹ ಧೋರಣೆಯನ್ನು ಕಾಂಗ್ರೆಸ್ ಬಿಡಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
