ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದಲ್ಲಿ ಮೂರು ಜನರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರವು ಸ್ಪಷ್ಟನೆ ನೀಡಬೇಕು ಎಂದು ಬೇಡಿಕೆ ಇಟ್ಟರು.ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ ದಿನಾಂಕ: 15-08-2026ರಂದು ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದಲ್ಲಿ ನಡೆಸಲಾದ ಕಳ್ಳಬೇಟೆ ಕಾರ್ಯಾಚರಣೆಯ ಕುರಿತು ಇಲಾಖಾ ಸಿಬ್ಬಂದಿಯು ತಮಗೆ ನಿಗಧಿಪಡಿಸಲಾದ ಕರ್ತವ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಬೇಟೆಗಾರರು ದಾಳಿಯನ್ನು ನಡೆಸಿರುವುದರಿಂದ ಕೈಮೀರಿದ ಸನ್ನಿವೇಶದಲ್ಲಿ ಆತ್ಮ ರಕ್ಷಣೆಗಾಗಿ ಹಾಗೂ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಮಾತ್ರ ಮೇಲಿನಂತೆ ಕ್ರಮವನ್ನು ಕೈಗೊಂಡಿದ್ದು, ಇದರಲ್ಲಿ ಯಾವುದೇ ಪ್ರಾಣಹಾನಿಯನ್ನು ಮಾಡುವ ಉದ್ದೇಶವಾಗಲೀ ಅಥವಾ ವೈಯಕ್ತಿಕ ದ್ವೇಷವಾಗಲೀ ಕಂಡುಬಂದಿರುವುದಿಲ್ಲ ಎಂದು ನಡೆದ ಘಟನಾವಳಿಗಳನ್ನು ಸದನದಲ್ಲಿ ವಿವರಿಸಿದರು.
ಕಾವೇರಿ ವನ್ಯಜೀವಿ ವಿಭಾಗದ ಹನೂರು ಉಪ ವಿಭಾಗ ವ್ಯಾಪ್ತಿಯ ಹನೂರು ವನ್ಯಜೀವಿ ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಗಸ್ತಿನ ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿ ಕಳ್ಳಬೇಟೆ ಸಂಬಂಧ ಬೇಟೆಗಾರರು ಅಕ್ರಮವಾಗಿ ಅರಣ್ಯವನ್ನು ಪ್ರವೇಶಿಸಿರುವ ಕುರಿತು ದಿನಾಂಕ: 14.08.2026ರ ಅಂದಾಜು ರಾತ್ರಿ 8.00 ಗಂಟೆಗೆ ಇಲಾಖಾ ಸಿಬ್ಬಂದಿಗಳಿಗೆ ಮಾಹಿತಿ ದೊರೆತಿರುತ್ತದೆ. ಮಾಹಿತಿಯ ಮೇರೆಗೆ ಅರಣ್ಯ ಸಿಬ್ಬಂದಿಗಳು ಕೂಡಲೇ ಎರಡು ತಂಡಗಳಾಗಿ ಹನೂರು ವನ್ಯಜೀವಿ ಉಪವಿಭಾಗ ವ್ಯಾಪ್ತಿಯ ಇಲಾಖಾ ವಾಹನಗಳಾದ ಕೆಎ-04 ಜಿ-2052 ಮತ್ತು ಕೆಎ-10 ಜಿ-0684 ರಲ್ಲಿ ಸದರಿ ಅರಣ್ಯ ಪ್ರದೇಶದ ಸುತ್ತಮುತ್ತ ಕಾರ್ಯಾಚರಣೆ ನಡೆಸಲು ಪ್ರಾರಂಭಿಸಿದರು. ಆ ಮೇರೆಗೆ ಗೋಮಡಿನಹಳ್ಳ ಅರಣ್ಯ ಪ್ರದೇಶ, ಹಳೆಯೂರುನತ್ತ ಅರಣ್ಯ ಪ್ರದೇಶ, ಗಣಿಗಲ ಮರದ ವಾಚ್ ಟವರ್, ಮೂಸಿಮರದ ಆಗ್ಗು ಅರಣ್ಯ ಪ್ರದೇಶ ಹಾಗೂ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಪರಿಶೀಲಿಸಲಾಗಿ ಯಾವುದೇ ಟಾರ್ಚ್ ಬೆಳಕು ಕಂಡುಬಂದಿರುವುದಿಲ್ಲ. ನಂತರ ಎಲ್ಲಾ ಸಿಬ್ಬಂದಿಗಳು ಕೊನೆಯದಾಗಿ ಸೀರನ ಮಡ ಅರಣ್ಯ ಪ್ರದೇಶದಲ್ಲಿ ಟಾರ್ಚ್ ಬೆಳಕು ಕಂಡುಬಂದಿರುವುದರಿಂದ ಸದರಿ ಪ್ರದೇಶವು ಸ್ಪಷ್ಟವಾಗಿ ಕಾಣುವಂತಹ ಕರಡಿಕಲ್ಲು ಒಡ್ಡು ಎತ್ತರದ ಅರಣ್ಯ ಪ್ರದೇಶದಲ್ಲಿ ವೀಕ್ಷಿಸುವ ಸಲುವಾಗಿ ಬೆಳಗಿನ ಜಾವ ಅಂದಾಜು 5.00 ಗಂಟೆಗೆ ಸಿಬ್ಬಂದಿಗಳು ತೆರಳಿರುತ್ತಾರೆ. ಸದರಿ ಕರಡಿಕಲ್ಲು ಒಡ್ಡು ಅರಣ್ಯ ಪ್ರದೇಶದಲ್ಲಿ ಕಲ್ಲುಬಂಡೆಗಳು ಮತ್ತು ಮೊದೆಯ ಮರೆಯಲ್ಲಿ ಅವಿತ್ತಿದ್ದ ಬೇಟೆಗಾರರು ಅರಣ್ಯ ಸಿಬ್ಬಂದಿಗಳನ್ನು ನೋಡಿ ಅಕ್ರಮ ನಾಡ ಬಂದೂಕಿನಿಂದ ಗುಂಡಿನ ದಾಳಿ ನಡೆಸಲು ಮುಂದಾಗಿದ್ದು, ಗುಂಡಿನ ಕಿಡಿಯ ಬೆಳಕು ಸಿಬ್ಬಂದಿಗಳಿಗೆ ಗೋಚರವಾಗಿರುತ್ತದೆ. ಸಿಬ್ಬಂದಿಗಳು ಸದರಿ ಬೇಟೆದಾರರಿಗೆ ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸಿದಾಗಿಯೂ ಸಹ ದಾಳಿ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ, ಇಲಾಖಾ ಸಿಬ್ಬಂದಿಗಳು ಸದರಿಯವರನ್ನು ನಿಯಂತ್ರಿಸುವ ಉದ್ದೇಶದಿಂದ ಮತ್ತು ಆತ್ಮ ರಕ್ಷಣೆ ಹಾಗೂ ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂರಕ್ಷಣೆ ಹಿತದೃಷ್ಟಿಯಿಂದ ಶ್ರೀ ಶಿವರಾಜ ಸಾಸಲವಾಡದ, ಗಸ್ತು ಅರಣ್ಯ ಪಾಲಕ ಇವರಿಗೆ ಇಲಾಖೆಯಿಂದ ವಿತರಿಸಲಾದ ಬಂದೂಕು ಸಂಖ್ಯೆ: R721035 ರಿಂದ ಕಿಡಿಯ ಬೆಳಕು ಗೋಚರವಾದ ದಿಕ್ಕಿನಲ್ಲಿ ಸದರಿಯವರು ಪ್ರತಿದಾಳಿ ನಡೆಸಿರುತ್ತಾರೆ. ಇಲಾಖಾ ಸಿಬ್ಬಂದಿಗಳು ಇದ್ದ ಸ್ಥಳಕ್ಕಿಂತ ಬೇಟೆಗಾರರು ಎತ್ತರದ ಪ್ರದೇಶದಲ್ಲಿರುವುದು ಕಂಡುಬಂದಿದ್ದು, ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಬಳಕೆ ಮಾಡಿರುವ Slide Action Gun ನಿಂದ ಮೂರು ಸುತ್ತು ಕಾಡತೂಸನ್ನು ಹಾರಿಸಿದಾಗ ಗುಂಡು ನೇರವಾಗಿ ವ್ಯಕ್ತಿಯ ನಿರ್ದಿಷ್ಟವಾದ ಭಾಗಕ್ಕೆ ತಗಲುವುದಿಲ್ಲ. ಕಾರಣ ಸದರಿ ಕಾಡತೂಸು ಸಣ್ಣ ಸಣ್ಣ ಪೆಲ್ಲೆಟ್ಸ್ಗಳು ಹಾಗೂ ಮದ್ದನ್ನು ಒಳಗೊಂಡಿದ್ದು, ಕಾಡತೂಸಿನಿಂದ ಹೊರಬರುವಾಗ ಚದುರುವುದರಿಂದ ಆರೋಪಿಗಳ ವಿವಿಧ ಅಂಗಾಂಗಗಳಿಗೆ ಗುಂಡು ತಗುಲಿರುತ್ತದೆ. ಸದರಿ ಘಟನೆಯು ಜರುಗುವ ವೇಳೆಯಲ್ಲಿ ಬೇಟೆಗಾರರು ಕರಡಿಕಲ್ಲು ಒಡ್ಡು ಎತ್ತರದ ಅರಣ್ಯ ಪ್ರದೇಶದಲ್ಲಿ ಇಲಾಖಾ ಸಿಬ್ಬಂದಿಗಳಿಗಿಂತ ಎತ್ತರದ ಪ್ರದೇಶದಲ್ಲಿ ನಿಂತು ಗುಂಡಿನ ದಾಳಿ ನಡೆಸಿದ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿಗಳಿಗೆ ಸದರಿ ಬೇಟೆಗಾರರು ಅಸ್ಪಷ್ಟವಾಗಿ ಗೋಚರಿಸಿರುವುದರಿಂದ ಸಿಬ್ಬಂದಿಗಳು ಆತ್ಮ ರಕ್ಷಣೆಗಾಗಿ ಪ್ರತಿ ದಾಳಿ ನಡೆಸಿದಾಗ ಬೇಟೆಗಾರರಿಗೆ ಸೊಂಟದಿಂದ ಮೇಲ್ಬಾಗದಲ್ಲಿ ಗುಂಡೇಟು ತಗುಲಿದ್ದು, ಸಿಬ್ಬಂದಿಗಳು ಯಾವುದೇ ದುರುದ್ದೇಶದಿಂದ ಸದರಿ ಕ್ರಮವನ್ನು ಕೈಗೊಂಡಿರುವುದಿಲ್ಲ. ನಂತರ ಬೇಟೆಗಾರರ ನೋವಿನ ಶಬ್ದ ಕೇಳಿಸಿರುವುದರಿಂದ, ಸಿಬ್ಬಂದಿಗಳು ಟಾರ್ಚ್ ಬೆಳಕಿನಿಂದ ಪರಿಶೀಲಿಸಿ ನೋಡಲಾಗಿ, ಓರ್ವ ಬೇಟೆಗಾರ ಸದರಿ ಸ್ಥಳದಿಂದ ಓಡುತ್ತಿರುವುದು ಕಂಡುಬಂದಿದ್ದು, 03 ಜನ ಬೇಟೆಗಾರರು ನೆಲದ ಮೇಲೆ ನರಳಾಡುತ್ತಾ ಒದ್ದಾಡುತ್ತಿರುವುದು ಕಂಡುಬಂದಿರುತ್ತದೆ.
ದಿನಾಂಕ: 15.08.2026 ರಂದು ಸದರಿ ಬೇಟೆಗಾರರ ಜೀವ ರಕ್ಷಣೆಯ ಉದ್ದೇಶದಿಂದ ಘಟನಾ ಸ್ಥಳದಲ್ಲಿದ್ದ 02 ಸಂಖ್ಯೆ ನಾಡ ಬಂದೂಕಿನ ಜೊತೆಗೆ 04 ಬ್ಯಾಗ್ಗಳನ್ನು ಇಲಾಖಾ ವಶಕ್ಕೆ ಪಡೆದು ಆರೋಪಿತರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿರುತ್ತದೆ. ದಿನಾಂಕ: 15.08.2026 ರಂದು ಘಟನಾ ಸ್ಥಳದಲ್ಲಿ ಇಲಾಖಾಪರ ಅಮಾನತ್ತುಪಡಿಸಿಕೊಂಡ ಸ್ವತ್ತುಗಳ ವಿವರ:- ನಾಡ ಬಂದೂಕು 02 ಸಂಖ್ಯೆ, ನೀಲಿಬಣ್ಣದ ಬಟ್ಟೆ ಬ್ಲಾಗ್ ಹಾಗೂ ಅದರೊಳಗೆ ಇದ್ದ (ಸ್ಟೀಲ್ ಚಮಚ-01, ಪಾತ್ರೆ ಸಣ್ಣದು-01, ಪಾತ್ರೆ ದೊಡ್ಡದು-01, ಸ್ಟೀಲ್ ತಟ್ಟೆ-01, ಟೀ ಲೋಟ-01, ಕಪ್ಪು ಪ್ಲಾಸ್ಟಿಕ್ ಒಳಗೆ ಇದ್ದ ಅಕ್ಕಿ, ಈರುಳ್ಳಿ, ಟೊಮೊಟೊ, ಉಪ್ಪು, ಪಾರ್ಲೆ-ಜಿ ಬಿಸ್ಕೆಟ್ ಚಿಕ್ಕದು-03 ಮತ್ತು ಮಾರಿಗೋಲ್ಡ್ ಬಿಸ್ಕೆಟ್-01, 05 ಅಚ್ಚು ಬೆಲ್ಲ, ದನಿಯಾ ಪೌಡರ್-01, ಕ್ಯಾಮಾಪ್ಲೇಜ್ ಬ್ಯಾಗ್ ಹಾಗೂ ಅದರೊಳಗೆ ಇದ್ದ VIVO ANDROID Mobile, NOKIA Keypad Mobile, ಚಾಕುಗಳು-03, ಮಚ್ಚು-01, 08 ಇಂಚು ಅಳತೆಯ ಪ್ಯಾರಾಗನ್ ಚಪ್ಪಲಿ ನೀಲಿಬಣ್ಣದ್ದು 02 ಸಂಖ್ಯೆ). ಕಂದುಬಣ್ಣದ ಬಟ್ಟೆಬ್ಯಾಗ್ ಹಾಗೂ ಅದರೊಳಗೆ ಇದ್ದ (ಪಟಾಕಿ ಮದ್ದು, Jio Keypad Mobile, ತಲೆ ಬ್ಯಾಟರಿ-01, ಮದ್ದಿನ ಬಾಕ್ಸ್-02, ಮದ್ದಿನ ಪೌಡರ್-04, ನಾಡಬಂದೂಕಿಗೆ ಬಳಸುವ ಗುಂಡುಗಳು-38), ಕಂದುಬಣ್ಣದ ಬಟ್ಟೆಬಾಗ್ ಹಾಗೂ ಅದರೊಳಗೆ ಇದ್ದ ಚಾಕು-01, ತಲೆ ಬ್ಯಾಟರಿ ಮತ್ತು ಚಾರ್ಜರ್-01. ದಿನಾಂಕ: 15.08.2026 ರಂದು ಇಲಾಖಾ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿಗಳಿಗೆ 02 ಚೀಲಗಳಲ್ಲಿ ಯಾವುದೋ ವನ್ಯಪ್ರಾಣಿಯ ಮಾಂಸ ತುಂಬಿರುವುದು ಕಂಡುಬಂದಿದ್ದು, ತನಿಖಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸದರಿ ಮಾಂಸವನ್ನು ಇಲಾಖೆಯ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿಯೇ ಸಂರಕ್ಷಿಸಿರುತ್ತಾರೆ. ದಿನಾಂಕ: 16.08.2026 ರಂದು ಘಟನಾ ಸ್ಥಳದಲ್ಲಿ ಇಲಾಖಾಪರ ಅಮಾನತ್ತುಪಡಿಸಿಕೊಂಡ ಸ್ವತ್ತುಗಳ ವಿವರ:- 04 ಜೊತೆ ಪ್ಯಾರಾಗಾನ್ ಹವಾಯ್ ಚಪ್ಪಲಿಗಳು, 02 ಲೀಟರ್ ನೀಲಿ ಕ್ಯಾಪ್ ಹೊಂದಿರುವ ಮೆರಿಂಡಾ ಪ್ಲಾಸ್ಟಿಕ್ ಬಾಟಲ್ನಲ್ಲಿ ಅಂದಾಜು 4 ಲೀಟರ್ ನೀರು ಮತ್ತು 02 ಚೀಲಗಳಲ್ಲಿ ತುಂಬಿದ ಅಂದಾಜು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸ. ಮೇಲ್ಕಂಡ ಪ್ರಕರಣದಲ್ಲಿ ಆರೋಪಿಗಳಾದ ಅಂತೋಣಿಸ್ವಾಮಿ ಬಿನ್ ಪೆರಿಯನಾಯಗಂ, 50 ವರ್ಷ, ಕ್ರಿಶ್ಚಿಯನ್ ಜನಾಂಗ, ವ್ಯವಸಾಯ, ಮರಿಯಮಂಗಲ ಗ್ರಾಮ, ಜಾನ್ ರೋಸ್ ಪೀಟರ್ ಬಿನ್ ಯಾಕೂಬ್, 42 ವರ್ಷ, ಕ್ರಿಶ್ಚಿಯನ್ ಜನಾಂಗ, ವ್ಯವಸಾಯ, ಜಗನ್ನಾಥದೊಡ್ಡಿ ಗ್ರಾಮ, ಕುಮಾರ್ ಬಿನ್ ಲೇಟ್ ಸವಾರಿಯಪ್ಪನ್, 33 ವರ್ಷ, ಕ್ರಿಶ್ಚಿಯನ್ ಜನಾಂಗ, ಹಿಟಾಚಿ ಅಪರೇಟರ್, ಲಾರಸ್ ದೊಡ್ಡಿ ಗ್ರಾಮ ಮತ್ತು ಮಹಿಮದಾಸ್ ಬಿನ್ ಬೆಂಜಮಿನ್ 45 ವರ್ಷ, ವ್ಯವಸಾಯ, ಕ್ರಿಶ್ಚಿಯನ್ ಜನಾಂಗ, ಮರಿಯಮಂಗಲ ಗ್ರಾಮ ಇವರ ವಾಸಸ್ಥಳಕ್ಕೆ ಘಟನಾ ಸ್ಥಳವು ಸುಮಾರು 5 ರಿಂದ 8 ಕಿ.ಮೀ. ವೈಮಾನಿಕ ದೂರದಲ್ಲಿದ್ದು, ಘಟನಾ ಸ್ಥಳವು ಅರಣ್ಯ ಗಡಿಯಿಂದ ಸುಮಾರು 4 ಕಿ.ಮೀ. ವೈಮಾನಿಕ ದೂರದಲ್ಲಿರುತ್ತದೆ.ಇದನ್ನು ಪರಿಶೀಲಿಸಿದಾಗ, ಸದರಿ ಆರೋಪಿತರ ಸಂಬಂಧಿಕರು ಮಾಧ್ಯಮಗಳಲ್ಲಿ ತಿಳಿಸಿದಂತೆ ಕಳೆದು ಹೋದ ದನಗಳನ್ನು ಹುಡುಕಿಕೊಂಡು ಹೋಗಿರುವಂತೆ ಕಂಡುಬಂದಿರುವುದಿಲ್ಲ. ಅಲ್ಲದೇ, ಸದರಿಯವರ ದನಗಳು ಕಳೆದು ಹೋಗಿರುವ ಕುರಿತು ಇಲಾಖೆಯಲ್ಲಿ ಯಾವುದೇ ಲಿಖಿತವಾಗಿ ಅಥವಾ ಮೌಖಿಕವಾಗಿ ದೂರನ್ನು ನೀಡಿರುವುದಿಲ್ಲ ಹಾಗೂ ಅರಣ್ಯ ಪ್ರದೇಶದೊಳಗೆ ಯಾವುದೇ ದನಗಳು ಸತ್ತಿರುವುದು ಕಂಡುಬಂದಿರುವುದಿಲ್ಲ. ಮುಂದುವರೆದು, ಸದರಿ ಆರೋಪಿಗಳ ದನಗಳು ಕಾಣೆಯಾಗಿದ್ದಲ್ಲಿ. ಸಂಬಂಧಿಸಿದ ವಲಯ ಅರಣ್ಯಾಧಿಕಾರಿಗಳಿಗೆ ಪ್ರಾಥಮಿಕ ಮಾಹಿತಿಯನ್ನು ನೀಡಿ ಅನುಮತಿಯನ್ನು ಪಡೆದು ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಬೇಕಾಗಿರುತ್ತದೆ. ಆದರೆ ಸದರಿ ಆರೋಪಿತರು ಯಾವುದೇ ಅನುಮತಿಯಿಲ್ಲದೇ ಮೀಸಲು ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರಧಾರಿಗಳಾಗಿ ಪ್ರವೇಶಿಸಿರುವುದನ್ನು ಗಮನಿಸಿದಾಗ ಬೇಟೆಯನ್ನು ಹೊರತುಪಡಿಸಿ ಯಾವುದೇ ಸದುದ್ದೇಶದಿಂದ ಕಾಡಿನೊಳಗೆ ಪ್ರವೇಶಿಸಿರುವುದು ಕಂಡುಬಂದಿರುವುದಿಲ್ಲ.
ಸದರಿ ಪ್ರಕರಣದಲ್ಲಿ ಭಾಗಿಯಾಗಿರುವ ಬೇಟೆಗಾರರು ಬೇರೆ ಯಾವುದೇ ಇಲಾಖಾ ಪ್ರಕರಣಗಳಲ್ಲಿ ಪಾಲ್ಗೊಂಡಿರುತ್ತಾರೆಯೇ ಎಂಬುದರ ಬಗ್ಗೆ ಪರಿಶೀಲಿಸಲಾಗಿ, ಅಂತೋಣಿಸ್ವಾಮಿ ಬಿನ್ ಪೆರಿಯನಾಯಗಂ ಇವರು ಅರಣ್ಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಿರುವುದಿಲ್ಲ. ಆದರೆ ಇವರ ಕುಟುಂಬದ ಮತ್ತೋರ್ವ ಸದಸ್ಯರಾದ ಪೀಟರ್ ತೂಮಸ್ ಬಿನ್ ಪೆರಿಯನಾಯಗಂ ಇವರ ಮೇಲೆ ಹನೂರು ವನ್ಯಜೀವಿ ವಲಯದ ಶಾಗ್ಯಂ ಶಾಖೆಯ ಬೇಟೆಗಾರನಗುಡ್ಡ ಅರಣ್ಯ ಗಸ್ತಿನ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಸದರಿಯವರ ಬಳಿಯಿದ್ದ ನಾಡಬಂದೂಕು ಮತ್ತು ಮದ್ದುಗುಂಡುಗಳನ್ನು ತುಂಬಿರುವ ಬ್ಲಾಗ್ ಅನ್ನು ವಶಪಡಿಸಿಕೊಂಡಿದ್ದು, ಯಾವುದೇ ಅನುಮತಿ ಇಲ್ಲದೇ ಅಕ್ರಮವಾಗಿ ಬಂದೂಕು ಮತ್ತು ಮದ್ದುಗುಂಡುಗಳನ್ನು ಇಟ್ಟಿಕೊಂಡಿರುವುದು ಕಾನೂನು ವಿರುದ್ಧದ ಚಟುವಟಿಕೆಯಾಗಿರುವುದರಿಂದ ಹನೂರು ಪೆÇೀಲಿಸ್ ಠಾಣಾ ವ್ಯಾಪ್ತಿಯಲ್ಲಿ ಮೊಕದ್ದಮೆ ಸಂಖ್ಯೆ: 135/26 ರಂತೆ ಪ್ರಕರಣವನ್ನು ದಾಖಲಿಸಿರುವುದು ತಿಳಿದುಬಂದಿರುತ್ತದೆ.
ಸರ್ಕಾರದ ಆದೇಶ ಸಂಖ್ಯೆ:AHFF 30 FNW 88 ಬೆಂಗಳೂರು ದಿನಾಂಕ: 20.09.1991 ರಲ್ಲಿ ಗಸ್ತು ಅರಣ್ಯ ಪಾಲಕರು ಹಾಗೂ ಅದಕ್ಕೂ ಮೇಲಿನ ದರ್ಜೆಯ ಅರಣ್ಯ ಸಿಬ್ಬಂದಿ ಅರಣ್ಯ ಅಪರಾಧಗಳಿಂದ ಅರಣ್ಯ ಸ್ವತ್ತನ್ನು ರಕ್ಷಿಸಲು ಹಾಗೂ ಪ್ರಾಣ ರಕ್ಷಣೆಯನ್ನು ಮಾಡಿಕೊಳ್ಳಲು ಮೀಸಲು ಅರಣ್ಯ ಪ್ರದೇಶದ ಒಳಗಡೆ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಬಹುದಾಗಿದ್ದು, ವನ್ಯಜೀವಿಗಳು ಸೇರಿದಂತೆ ಅರಣ್ಯ ಸ್ವತ್ತನ್ನು ರಕ್ಷಿಸಲು ಹಾಗೂ ಬೇರೆ ಮಾರ್ಗೋಪಾಯ ಇಲ್ಲದಿದ್ದಾಗ ಅರಣ್ಯ ಸಿಬ್ಬಂದಿಗಳ ಜೀವ ರಕ್ಷಣೆ ಮಾಡುವ ಸಂದರ್ಭದಲ್ಲಿ ಬಂದೂಕನ್ನು ಉಪಯೋಗಿಸಬಹುದಾಗಿದ್ದು, ಮೇಲ್ಕಂಡ ಪ್ರಕರಣದಲ್ಲಿಯೂ ಇಲಾಖಾ ಸಿಬ್ಬಂದಿಯು ತಮಗೆ ನಿಗಧಿಪಡಿಸಲಾದ ಕರ್ತವ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಬೇಟೆಗಾರರು ದಾಳಿಯನ್ನು ನಡೆಸಿರುವುದರಿಂದ ಕೈಮೀರಿದ ಸನ್ನಿವೇಶದಲ್ಲಿ ಆತ್ಮ ರಕ್ಷಣೆಗಾಗಿ ಹಾಗೂ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಮಾತ್ರ ಮೇಲಿನಂತೆ ಕ್ರಮವನ್ನು ಕೈಗೊಳ್ಳಲಾಗಿದೆ. ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಒಳಪಡಿಸಲಾಗಿದೆ. ಇಲಾಖೆಯು ತಪ್ಪಿತಸ್ಠ ಕೆಲಸ ಮಾಡಿದ್ದರೆ ನಿಯಮಾನುಸಾರ ಅಗತ್ಯ ಕ್ರಮ ವಹಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

