ಸಕಲ ನರಸಿಂಹಲು ಚೆಟ್ಟಿ ಜನ್ಮ ಶತಮಾನೋತ್ಸವ; ಸಂಪೂರ್ಣ ರಾಮಾಯಣದ ಸಂಗೀತ-ನೃತ್ಯ ರೂಪಕ “ರಾಮ ಪ್ರತೀಕ್ಷೆ” ಹಾಗೂ “ರಾಮ ಭಕ್ತಿಸುಧಾ” ಪ್ರದರ್ಶನ
ಡಾ. ವಿಷ್ಣು ಭರತ್ ಆಲಂಪಳ್ಳಿ ಅವರ ರಚಿತ ವೀ ಏರ್ ಟೆಂಪರರಿ ಇನ್ ಥಿಸ್ ಪರ್ಮನೆಂಟ್ ವರ್ಲ್ಡ್ ಪುಸ್ತಕಗಳನ್ನು ಬಿಡುಗಡೆ
ಬೆಂಗಳೂರು: ಸಮಾಜ ಸೇವಕ ಸಕಲ ನರಸಿಂಹಲು ಚೆಟ್ಟಿ(Narasimhalu Chetti) ಅವರ ಜನ್ಮ ಶತಮಾನೋತ್ಸವ(birth centenary)ಹಾಗೂ ಮೂರನೇ ಆರಾಧನೆ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪ್ರಿಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಭಾಂಗಣದಲ್ಲಿ ಶತಮಾನೋತ್ಸವದ ಪ್ರಮುಖ ಆಕರ್ಷಣೆಯಾಗಿ ಪ್ರಭಾತ ಕಲಾವಿದರು ಅಭಿನಯಿಸಿದ ಅದ್ಭುತ ಸಂಗೀತ-ನೃತ್ಯ ರೂಪಕ “ರಾಮ ಪ್ರತೀಕ್ಷೆ” ಹಾಗೂ “ರಾಮ ಭಕ್ತಿಸುಧಾ”. ಸಂಗೀತ, ವಾಚನ, ನೃತ್ಯ ಮತ್ತು ನಾಟಕದ ಮನೋಜ್ಞ ಸಂಯೋಜನೆಯ ಮೂಲಕ ಸಂಪೂರ್ಣ ರಾಮಾಯಣವನ್ನು ಒಂದೇ ನಿರಂತರ ಪ್ರದರ್ಶನದಲ್ಲಿ ಮನಮೋಹಕವಾಗಿ ಅನಾವರಣಗೊಳಿಸಿದರು.
ಸಮಾಜಸೇವಕ, ಧಾರ್ಮಿಕ ಚಿಂತಕ ಹಾಗೂ ಶ್ರೀರಾಮನ ಅನನ್ಯ ಭಕ್ತರಾಗಿದ್ದ ನರಸಿಂಹಲು ಚೆಟ್ಟಿ ಅವರು ತಮ್ಮ ಜೀವನವನ್ನು ಸಮಾಜದ ಸೇವೆಗೆ ಸಮರ್ಪಿಸಿಕೊಂಡು, ಸತ್ಯ, ಧರ್ಮ, ವಿನಯ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು.
ಈ ಪುಣ್ಯ ಸಮಾರಂಭಕ್ಕೆ ಚಿನ್ಮಯ ಮಿಷನ್ ಕರ್ನಾಟಕದ ಅಧ್ಯಕ್ಷರಾದ ಸ್ವಾಮಿ ಬ್ರಹ್ಮಾನಂದಜೀ ಆಶೀರ್ವಚನ ನೀಡಿ ಕಾರ್ಯಕ್ರಮಕ್ಕೆ ದಿವ್ಯ ಮೆರುಗು ತಂದರು. ನರಸಿಂಹಲು ಚೆಟ್ಟಿಯವರ ವ್ಯಕ್ತಿತ್ವವನ್ನು ಸ್ಮರಿಸಿದ ಸ್ವಾಮೀಜಿಯವರು, ಅವರ ಜೀವನವು ರಾಮಾಯಣದ ಶಾಶ್ವತ ಮೌಲ್ಯಗಳ ಜೀವಂತ ಪ್ರತಿಬಿಂಬವಾಗಿತ್ತು. ಶ್ರೀರಾಮನನ್ನು ಕೇವಲ ಆರಾಧಿಸುವುದಷ್ಟೇ ಅಲ್ಲದೆ, ಧರ್ಮ, ಸತ್ಯನಿಷ್ಠೆ ಮತ್ತು ಆದರ್ಶ ಜೀವನವನ್ನು ಅಚಲವಾದ ನಂಬಿಕೆ ಹಾಗೂ ಪ್ರಾಮಾಣಿಕತೆಯಿಂದ ಆಚರಿಸಿದ ಮಹಾನ್ ಚೇತನ ಎಂದು ಬಣ್ಣಿಸಿದರು.
ಈ ಕಲಾರೂಪದಲ್ಲಿ ಸೀತಾ ಕಲ್ಯಾಣ, ಶ್ರೀರಾಮರ ವನವಾಸ, ಶಬರಿಯ ಭಕ್ತಿ, ಸುಗ್ರೀವನ ಸ್ನೇಹ, ಹನುಮಂತರ ಪರಾಕ್ರಮ, ವಿಭೀಷಣನ ಶರಣಾಗತಿ, ರಾಮಸೇತು ನಿರ್ಮಾಣ, ರಾವಣನ ವಿರುದ್ಧದ ಮಹಾಯುದ್ಧ ಹಾಗೂ ಅಂತಿಮವಾಗಿ ಅಧರ್ಮದ ಮೇಲೆ ಧರ್ಮದ ವಿಜಯ ಮುಂತಾದ ರಾಮಾಯಣದ ಅಮರ ಪ್ರಸಂಗಗಳನ್ನು ಅತ್ಯಂತ ಭಾವಪೂರ್ಣವಾಗಿ ಚಿತ್ರಿಸಲಾಯಿತು. ಕಲಾವಿದರ ಅದ್ಭುತ ಅಭಿನಯ, ಸಂಗೀತದ ಮಾಧುರ್ಯ ಮತ್ತು ಭಕ್ತಿಯ ಪರಿಮಳವು ಆರಂಭದಿಂದ ಅಂತ್ಯದವರೆಗೆ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಸುಮಾರು ಸಾವಿರಕ್ಕೂ ಹೆಚ್ಚು ಭಕ್ತರು ಹಾಗೂ ಗಣ್ಯರಿಂದ ಕಿಕ್ಕಿರಿದು ತುಂಬಿದ್ದ ಆಧ್ಯಾತ್ಮಿಕತೆ ಮತ್ತು ಭಾರತೀಯ ಸಂಸ್ಕೃತಿಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ಈ ಅದ್ಭುತ ಕಾರ್ಯಕ್ರಮವು ಶ್ರೀರಾಮನ ಆದರ್ಶಗಳಿಗೆ ತಮ್ಮ ಜೀವನವನ್ನೇ ಅರ್ಪಿಸಿದ್ದ ಸಕಲ ನರಸಿಂಹಲು ಚೆಟ್ಟಿಯವರಿಗೆ ಸಲ್ಲಿಸಿದ ಅತ್ಯಂತ ಅರ್ಥಪೂರ್ಣ ನಮನವಾಗಿತ್ತು.
ಈ ಸಂದರ್ಭದಲ್ಲಿ ಪೂಜ್ಯ ಸಕಲ ನರಸಿಂಹಲು ಚೆಟ್ಟಿ ಅವರ ಜೀವನಚರಿತ್ರೆ ಕೃತಿ ಹಾಗೂ ಸಿ.ಎ. ಡಾ. ವಿಷ್ಣು ಭರತ್ ಆಲಂಪಳ್ಳಿ ಅವರ ರಚಿತ 54ನೇ ಕೃತಿ “ನಾವು ಈ ಶಾಶ್ವತ ಜಗತ್ತಿನಲ್ಲಿ ತಾತ್ಕಾಲಿಕರು” (WE ARE TEMPORARY IN THIS PERMANENT WORLD) ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಕಲ ನರಸಿಂಹಲು ಚೆಟ್ಟಿ ಅವರ ಪುತ್ರರಾದ ಶರತ್ ಕುಮಾರ್ ಮತ್ತು ಮುರಳಿ ಮೋಹನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

