ಬೆಂಗಳೂರು: ಜಾಣಜಾಣೆಯರ ಸಾಹಿತಿ ಕಲಾವಿದರ ಟ್ರಸ್ಟ್ ವತಿಯಿಂದ “ಜಾಣಜಾಣೆಯರ ನಗೆ ಉತ್ಸವ”, (Jana Janeyara Utsava) ಟ್ರಸ್ಟ್ ಉದ್ಘಾಟನೆ ಹಾಗೂ ಕಲಾವಿದರ ನೆರವಿಗಾಗಿ ಆರೋಗ್ಯ ವಿಮಾ ಯೋಜನೆ (Free Insurance Policy) ಚಾಲನೆ ಕಾರ್ಯಕ್ರಮವು ಮೇ 31ರಂದು ಸಂಜೆ 5 ಗಂಟೆಗೆ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ (Chowdaiah Memorial Hall) ಅದ್ದೂರಿಯಾಗಿ ನಡೆಯಲಿದೆ ಎಂದು ಚೌಡಯ್ಯ ಮೆಮೋರಿಯಲ್ ಹಾಲ್ ಕಾರ್ಯದರ್ಶಿ ಡಾ. ಸುಮ ಸುಧೀಂದ್ರ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಈ ಕುರಿತು ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಹಾಸ್ಯ ಕಲಾವಿದ ಎಂ.ಎಸ್. ನರಸಿಂಹಮೂರ್ತಿ, ಚೌಡಯ್ಯ ಮೆಮೋರಿಯಲ್ ಹಾಲ್ ಕಾರ್ಯದರ್ಶಿ ಡಾ. ಸುಮ ಸುಧೀಂದ್ರ, ಟ್ರಸ್ಟಿ ಉದಯ್ ಎಂ., ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಗೀತಾ ಸುರತ್ಕಲ್ , ಮೀನಾ ರವರು ಮಾಧ್ಯಮ ಉದ್ದೇಶಿಸಿ ಮಾತನಾಡಲಿದ್ದಾರೆ. ಕಳೆದ 30 ವರ್ಷಗಳಿಂದ ಜಾಣಜಾಣೆಯರು ಸಂಸ್ಥೆ ರಾಜ್ಯಾದ್ಯಂತ ನಗೆಜಾಗರಣೆ ಮತ್ತು ನಗೆ ಉತ್ಸವಗಳನ್ನು ಆಯೋಜಿಸಿ ಜನಮನ ಗೆದ್ದಿದೆ. ಭರತನಾಟ್ಯ, ಶಾಸ್ತ್ರೀಯ ಸಂಗೀತ, ಯಕ್ಷಗಾನ, ಮಿಮಿಕ್ರಿ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಸದಭಿರುಚಿಯ ಹಾಸ್ಯದೊಂದಿಗೆ ಜನರಿಗೆ ತಲುಪಿಸುವ ಮೂಲಕ ಸಂಸ್ಥೆ ವಿಶಿಷ್ಟ ಗುರುತನ್ನು ಪಡೆದಿದೆ. ವಯೋಸಹಜ ಆರೋಗ್ಯ ಸಮಸ್ಯೆಗಳು ಅನೇಕ ಕಲಾವಿದರನ್ನು ಸಂಕಷ್ಟಕ್ಕೆ ತಳ್ಳುತ್ತಿರುವ ಹಿನ್ನೆಲೆಯಲ್ಲಿ ಬಡ ಹಾಗೂ ಅಶಕ್ತ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ “ಜಾಣಜಾಣೆಯರ ಸಾಹಿತಿ ಕಲಾವಿದರ ಟ್ರಸ್ಟ್” ಸ್ಥಾಪನೆಯಾಗಿದೆ. ಪಂಚವೀಣಾ ಖ್ಯಾತಿಯ ಅಂತಾರಾಷ್ಟ್ರೀಯ ವೀಣಾ ವಿದುಷಿ ಡಾ. ಸುಮ ಸುಧೀಂದ್ರ ಟ್ರಸ್ಟ್ಗೆ ಕೈಜೋಡಿಸಿದ್ದು, ಸಮಾಜ ಸೇವಾ ನಿರತ ಸಚಿವರಾದ ದಿನೇಶ್ ಗುಂಡೂರಾವ್, ಎಂ.ಆರ್. ಸೀತಾರಾಮ್, ಎಂ. ಕೃಷ್ಣಪ್ಪ, ಡಿ.ಕೆ. ಸುರೇಶ್, ಪ್ರಿಯಾಕೃಷ್ಣ, ರಕ್ಷ ರಾಮಯ್ಯ ಹಾಗೂ ಹಿರಿಯ ವಕೀಲ ಚಂದ್ರಮೌಳಿ ಮಾರ್ಗದರ್ಶನದಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ.

ಉದ್ಘಾಟನಾ ದಿನವಾದ ಮೇ 31ರಂದು 60 ಕಲಾವಿದರಿಗೆ ತಲಾ 10 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮಾ ಪಾಲಿಸಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮೂರು ಗಂಟೆಗಳ ನಿರಂತರ ನಗೆರಸದೌತಣ ನೀಡಲು ರಾಜ್ಯದ ಖ್ಯಾತ ಹಾಸ್ಯ ಕಲಾವಿದರು ಭಾಗವಹಿಸಲಿದ್ದಾರೆ. ಮಿಮಿಕ್ರಿ ದಯಾನಂದ್, ಪ್ರೊ. ಎಂ. ಕೃಷ್ಣಗೌಡ, ಮಿಮಿಕ್ರಿ ಗೋಪಿ, ಗಂಗಾವತಿ ಪ್ರಾಣೇಶ್, ವೈ.ವಿ. ಗುಂಡೂರಾವ್, ಕೋಗಳಿ ಕೊಟ್ರೇಶ್, ಕಿರ್ಲೋಸ್ಕರ್ ಸತ್ಯ, ಶಿವಾರ ಉಮೇಶ್, ಪ್ರಹ್ಲಾದಾಚಾರ್ಯ ಹಾಗೂ ಎಂ.ಎಸ್. ನರಸಿಂಹಮೂರ್ತಿ ವಿಶೇಷ ನಗೆಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದು, ಐಪಿಎಲ್ನಲ್ಲಿ ಜನಪ್ರಿಯತೆ ಪಡೆದ ಡ್ರಮ್ಸ್ ದೇವ್ ವಿಶೇಷ ಪ್ರದರ್ಶನ ನೀಡಲಿದ್ದಾರೆ. ಮಿಮಿಕ್ರಿ ದಯಾನಂದ್ ಅವರ ಸಂಪೂರ್ಣ ತಂಡವೂ ರಂಜನಾ ಕಾರ್ಯಕ್ರಮ ನೀಡಲಿದೆ.
ಕಲಾವಿದರ ನೆರವಿಗಾಗಿ ಈ ಕಾರ್ಯಕ್ರಮವನ್ನು ಸಹಾಯಾರ್ಥ ಟಿಕೆಟ್ ಪ್ರದರ್ಶನವಾಗಿ ಆಯೋಜಿಸಲಾಗಿದ್ದು, ಸಾರ್ವಜನಿಕರು ‘ಬುಕ್ ಮೈ ಶೋ’ (Book My Show) ಮೂಲಕ ಟಿಕೆಟ್ ಖರೀದಿಸಿ ಕಲಾವಿದರಿಗೆ ಬೆಂಬಲ ನೀಡಬಹುದು. ಮೇ 31ರಂದು ಸಂಜೆ 5 ಗಂಟೆಗೆ ಆರಂಭವಾಗುವ ಈ ನಗೆಹಬ್ಬ ಪ್ರೇಕ್ಷಕರನ್ನು ಮನರಂಜಿಸುವುದರ ಜೊತೆಗೆ ಅಶಕ್ತ ಕಲಾವಿದರಿಗೆ ಹೊಸ ಭರವಸೆ ಮತ್ತು ಚೈತನ್ಯ ನೀಡಲಿದೆ ಎಂದು ತಿಳಿಸಿದರು.

