ಬೆಂಗಳೂರು: ಎಸ್ಐಆರ್ದಲ್ಲಿ ರಾಜ್ಯ ಸರಕಾರವು ಬಹಳಷ್ಟು ಷಡ್ಯಂತ್ರ ರಚಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ(jagannath bhavan) ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಸ್ಐಆರ್(SIR) ತಡೆಯಲು ಪ್ರಯತ್ನ ಮಾಡಿದ್ದರು. ಯಾವಾಗ ತಡೆಯಲು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಯಿತೋ ಆಗ ಒಪ್ಪಿದ್ದಾರೆ. ಸುಮಾರು 15-20 ವರ್ಷಗಳ ಮೊದಲು ಎಸ್ಐಆರ್ ಆಗಿದೆ. ಈಗ ಕೆಲವು ಕಡೆ 100 ಶೇ ಮ್ಯಾಪಿಂಗ್ ಆಗಿದೆ. ಇನ್ನೂ ಕೆಲವೆಡೆ ಶೇ 98 ಮ್ಯಾಪಿಂಗ್ ಆಗಿದೆ. ಹಾಗಿದ್ದರೆ ಅಲ್ಲಿ ಯಾರೂ ಸತ್ತೇ ಇಲ್ಲವೇ ಎಂದು ಕೇಳಿದರು.
ಅಶ್ವತ್ಥಾಮನಂತೆ ನಮ್ಮ ರಾಜ್ಯದಲ್ಲಿ ಚಿರಂಜೀವಿಗಳು ಇದ್ದಾರಾ?
ಅಶ್ವತ್ಥಾಮನಂತೆ ನಮ್ಮ ರಾಜ್ಯದಲ್ಲಿ ಚಿರಂಜೀವಿಗಳು ಇದ್ದಾರಾ ನಮ್ಮ ರಾಜ್ಯದಲ್ಲಿ ಎಂದು ಪ್ರಶ್ನಿಸಿದರು. ಎನ್ಯುಮರೇóಷನ್ಗೆ ಮನೆಗಳಿಗೆ ಹೋಗಬೇಕು. ಬಿಎಲ್ಎ-2ಗಳಿಗೆ ಬಿಎಲ್ಒಗಳು ತಿಳಿಸಬೇಕು. ಇದ್ಯಾವುದೂ ಆಗುತ್ತಿಲ್ಲ ಎಂದು ಆರೋಪಿಸಿದರು.
ಮಸೀದಿ- ದರ್ಗಾದಲ್ಲಿ ಕುಳಿತುಕೊಂಡು ಫಾರ್ಮ್ ಹಂಚುತ್ತಾರೆ..
ಜಗತ್ತಿನ ಎಲ್ಲ ವಿಷಯಗಳ ಕುರಿತು ಮಾತನಾಡುವ ಸಚಿವರಿದ್ದಾರೆ. ಕರ್ನಾಟಕ ರಾಜ್ಯದ ಡ್ರಗ್ನವರನ್ನು, ಡ್ರಗ್ ಪೆಡ್ಲರ್ಗಳು, ಸಿಂಥೆಟಿಕ್ ಡ್ರಗ್ ಉತ್ಪಾದಕರನ್ನು ಬೇರೆ ರಾಜ್ಯದವರು ಬಂದು ಹಿಡಿದರೆ ನಮ್ಮ ರಾಜ್ಯದವರಿಗೆ ಗೊತ್ತಾಗುವುದಿಲ್ಲ. ಹಾನಗಲ್ನ ರಟ್ಟಿಹಳ್ಳಿಯಲ್ಲಿ ಪಟಾಕಿ ಹಾರಿಸಿದವರ ಕೈ ಕಡಿಯುತ್ತಾರೆ. ಇದ್ಯಾವುದೂ ಏನೂ ಆಗುವುದಿಲ್ಲ. ಇವರು ಮಾತನಾಡಿ ಚುನಾವಣಾ ಆಯೋಗ ಕತ್ತೆ ಕಾಯುತ್ತಿದೆಯೇ ಎಂದು ಕೇಳುತ್ತಾರೆ. ಚುನಾವಣಾ ಆಯೋಗ ಎಲ್ಲ ಸರಿ ಮಾಡುವ ಪ್ರಯತ್ನ ಮಾಡಿದೆ. ಆದರೆ, ಕತ್ತೆ ಕಾಯಲೂ ಲಾಯಕ್ಕಿಲ್ಲದ ಸರಕಾರವು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಶೇ 100 ಮ್ಯಾಪಿಂಗ್, ಮಸೀದಿ- ದರ್ಗಾದಲ್ಲಿ ಕುಳಿತುಕೊಂಡು, ಸ್ಥಳೀಯ ಕಾಂಗ್ರೆಸ್ ನಾಯಕರ ಮನೆಯಲ್ಲಿ ಕುಳಿತುಕೊಂಡು ಫಾರ್ಮ್ ಹಂಚುತ್ತಿದ್ದಾರೆ ಎಂದು ಟೀಕಿಸಿದರು.
ನಾಳೆ ಚುನಾವಣಾ ಆಯೋಗಕ್ಕೆ ದೂರು..
ಇಂಥ ಅಕ್ರಮಗಳ ಬಗ್ಗೆ ನಾನು, ಎಚ್.ಡಿ.ಕುಮಾರಸ್ವಾಮಿ, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿ ನಾಳೆ ಇಲ್ಲಿನ ಕರ್ನಾಟಕ ರಾಜ್ಯದ ಕೇಂದ್ರ ಚುನಾವಣಾ ಆಯೋಗದ ಮುಖ್ಯಾಧಿಕಾರಿಯನ್ನು ಭೇಟಿ ಮಾಡುತ್ತೇವೆ. ಇದರ ಬಗ್ಗೆ ನಾವು ಅವರಿಗೆ ದೂರು ನೀಡುತ್ತೇವೆ ಎಂದು ವಿವರ ನೀಡಿದರು. ತಕ್ಷಣ ಅವರು ಕಾರ್ಯತತ್ಪರರಾಗಿ ಕ್ರಮ ತೆಗೆದುಕೊಳ್ಳುವ ನಂಬಿಕೆ ಇದೆ. ಅದು ಆಗದಿದ್ದರೆ ಕೇಂದ್ರ ಚುನಾವಣಾ ಆಯೋಗಕ್ಕೆ ಇದರ ಬಗ್ಗೆ ದೂರು ಕೊಡಲಿದ್ದೇವೆ ಎಂದು ತಿಳಿಸಿದರು.
ಗ್ರಾಮ ವಾಸ್ತವ್ಯಕ್ಕೆ ತೆರಳುವ ರಾಜ್ಯಾಧ್ಯಕ್ಷರು..
ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇಂದಿನ ಸಭೆಯಲ್ಲಿದ್ದರು. ನಿನ್ನೆ ತುರ್ತಾಗಿ ದೂರು ನೀಡಿದ್ದಾರೆ. ಇವೆಲ್ಲ ಚರ್ಚೆ ಆದ ನಂತರ ರಾಜ್ಯಾಧ್ಯಕ್ಷರು ಹೆಚ್ಚಿನ ಮಾಹಿತಿ ಇರುವ ಕಾರಣ ಮತ್ತೆ ದೂರು ಕೊಡಲು ತಿಳಿಸಿದ್ದಾರೆ. ವಿಜಯೇಂದ್ರ ಅವರು ನಾಳೆ ಗ್ರಾಮ ವಾಸ್ತವ್ಯಕ್ಕೆ ಹೋಗಲಿದ್ದಾರೆ. ಅದು ಮೊದಲೇ ಪ್ರಕಟಿತ ಕಾರ್ಯಕ್ರಮ. ಅದನ್ನು ತಪ್ಪಿಸಲಾಗದು ಎಂದು ನುಡಿದರು.

