“ಪ್ರೀತಿ, ಶಾಂತಿ, ಸೇವೆ ಮತ್ತು ಸಾಮರಸ್ಯದ (love, peace and service) ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂಸಾಚಾರ-ಮುಕ್ತ ಮತ್ತು ಒತ್ತಡ-ಮುಕ್ತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮಿಕತೆ ಮತ್ತು ಮಾನವೀಯ ಸೇವೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ” ಎಂದು ಕರ್ನಾಟಕದ ಗೌರವಾನ್ವಿತ (Governor) ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Thawarchand Gehlot) ಹೇಳಿದರು.
ಬೆಂಗಳೂರಿನಲ್ಲಿ ನಡೆದ ಆರ್ಟ್ ಆಫ್ ಲಿವಿಂಗ್ (Art of Living) ಸಂಸ್ಥೆಯ 45ನೇ ವಾರ್ಷಿಕೋತ್ಸವ (45th Anniversary) ಹಾಗೂ ಪೂಜ್ಯ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ 70ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.
“ಪೂಜ್ಯ ಗುರುದೇವ್ ಶ್ರೀ ಶ್ರೀ ರವಿಶಂಕರ್ ಜಾಗತಿಕ ಮಾನವೀಯ, ಆಧ್ಯಾತ್ಮಿಕ ಗುರು ಹಾಗೂ ಶಾಂತಿ ರಾಯಭಾರಿಯಾಗಿದ್ದು, ಆರ್ಟ್ ಆಫ್ ಲಿವಿಂಗ್ ಮತ್ತು ಅಂತರರಾಷ್ಟ್ರೀಯ ಮಾನವ ಮೌಲ್ಯಗಳ ಸಂಘದ ಸ್ಥಾಪಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ಸಂಸ್ಥೆಗಳು 182 ದೇಶಗಳಲ್ಲಿ ಲಕ್ಷಾಂತರ ಜನರಿಗೆ ಬದುಕಿನ ಕಲೆ ಮತ್ತು ಆಂತರಿಕ ಶಾಂತಿಯ ಸಂದೇಶವನ್ನು ಸಾರುತ್ತಿವೆ” ಎಂದು ತಿಳಿಸಿದರು.

“ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಾಗತಿಕ ಚಳುವಳಿ ಕರ್ನಾಟಕದ ಪವಿತ್ರ ನೆಲದಲ್ಲಿ ಬೇರುಬಿಟ್ಟಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಬೆಂಗಳೂರಿನಲ್ಲಿರುವ ಸಂಸ್ಥೆಯ ಅಂತರರಾಷ್ಟ್ರೀಯ ಕೇಂದ್ರವು ವಿಶ್ವದಾದ್ಯಂತ ಜನರಿಗೆ ಶಾಂತಿ, ಧ್ಯಾನ ಮತ್ತು ಸಕಾರಾತ್ಮಕ ಶಕ್ತಿಯ ಪ್ರೇರಣಾ ಕೇಂದ್ರವಾಗಿದೆ ಕಳೆದ ನಾಲ್ಕು ದಶಕಗಳಿಂದ ಸಂಸ್ಥೆಯು ವಿವಿಧ ಕಾರ್ಯಕ್ರಮಗಳ ಮೂಲಕ ವ್ಯಕ್ತಿ, ಸಮುದಾಯ ಹಾಗೂ ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುತ್ತಿದೆ. ಶ್ರೀ ರವಿಶಂಕರ್ ಗುರುದೇವರ ಬೋಧನೆಗಳು ಪ್ರಾಚೀನ ಜ್ಞಾನವನ್ನು ಸರಳ ಮತ್ತು ಪ್ರಾಯೋಗಿಕ ರೀತಿಯಲ್ಲಿ ಜನರಿಗೆ ತಲುಪಿಸುತ್ತಿದ್ದು, ದೈನಂದಿನ ಜೀವನದಲ್ಲಿ ಆಂತರಿಕ ಶಾಂತಿಯನ್ನು ಅನುಭವಿಸಲು ಪ್ರೇರೇಪಿಸುತ್ತಿವೆ” ಎಂದು ಹೇಳಿದರು.
“ಮಾನವೀಯ ಸೇವೆಯೊಂದಿಗೆ ಪರಿಸರ ಸಂರಕ್ಷಣೆಯಲ್ಲಿಯೂ ಸಂಸ್ಥೆಯು ಮಹತ್ವದ ಕೊಡುಗೆ ನೀಡುತ್ತಿದೆ. ನವೀಕರಿಸಬಹುದಾದ ಇಂಧನ ಯೋಜನೆಗಳು, ತ್ಯಾಜ್ಯ ಮರುಬಳಕೆ ನವೀನತೆಗಳು ಹಾಗೂ ಗ್ರಾಮೀಣ ವಿದ್ಯುದ್ದೀಕರಣ ಉಪಕ್ರಮಗಳ ಮೂಲಕ ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ. ಇಂದಿನ ಜಗತ್ತು ಉದ್ವಿಗ್ನತೆ, ಹಿಂಸೆ, ಅಸಹಿಷ್ಣುತೆ ಮತ್ತು ಮಾನಸಿಕ ಅಶಾಂತಿಯಂತಹ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಗುರುದೇವರ ಸಂದೇಶ ಇನ್ನಷ್ಟು ಪ್ರಸ್ತುತವಾಗಿದೆ. ಧರ್ಮದ ನಿಜವಾದ ಸ್ವರೂಪವು ವಿಭಜನೆಯಲ್ಲ, ಮಾನವೀಯ ಒಗ್ಗಟ್ಟನ್ನು ಬೆಳೆಸುವುದಾಗಿದೆ ಎಂದು ಅವರು ತಿಳಿಸಿದರು.
“ಅಭಿವೃದ್ಧಿ ಹೊಂದಿದ ಭಾರತ” ನಿರ್ಮಾಣದ ಗುರಿ ಸಾಧಿಸಲು ನೈತಿಕತೆ, ಸೂಕ್ಷ್ಮತೆ ಹಾಗೂ ಆಧ್ಯಾತ್ಮಿಕ ಪ್ರಜ್ಞೆ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸಮಾಜದಲ್ಲಿ ಸಕಾರಾತ್ಮಕ ಶಕ್ತಿ ಮತ್ತು ನೈತಿಕ ಮೌಲ್ಯಗಳನ್ನು ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ರಾಜ್ಯಪಾಲರು ಹೇಳಿದರು.
ಪೂಜ್ಯ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ 70ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ ರಾಜ್ಯಪಾಲರು, ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಮಾನವೀಯ ಸೇವೆಯು ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರು ಉಪಸ್ಥಿತರಿದ್ದರು.

