ಮಸ್ಕಿ (ರಾಯಚೂರು ಜಿಲ್ಲೆ): ನಾಗೇಂದ್ರ(Nagendra) ಅವರೇನೋ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಬಹುದು. ಆದರೆ, ಲೂಟಿ ಮಾಡಿದ ಹಣ ವಾಲ್ಮೀಕಿ ನಿಗಮದ ಖಾತೆಗೆ ವಾಪಸ್ ಬಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B.Y.Vijayendra) ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಇಂದು ಮಾತನಾಡಿದ ಅವರು, ರೈತರು ಇವತ್ತು ಭೀಕರ ಬರಗಾಲ ಎದುರಿಸುತ್ತಿದ್ದಾರೆ. 200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ತೀವ್ರ ಬರಗಾಲ ಇದ್ದರೂ 101 ತಾಲ್ಲೂಕನ್ನು ಮಾತ್ರ ಬರಪೀಡಿತ ಪ್ರದೇಶ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ರಾಜ್ಯ ಸರಕಾರ, ಮುಖ್ಯಮಂತ್ರಿಗಳು ಮತ್ತು ಅವರ ಸಚಿವ ಸಂಪುಟದ ಸದಸ್ಯರಿಗೆ ವಾಸ್ತವಿಕ ಸತ್ಯ ಏನು? ರೈತರು ಯಾವ ರೀತಿ ಸಂಕಷ್ಟದಲ್ಲಿದ್ದಾರೆ ಎಂಬುದರ ಜ್ಞಾನೋದಯ ಆದಂತಿಲ್ಲ ಎಂದು ಟೀಕಿಸಿದರು.
ಬರ ಪರಿಹಾರವನ್ನೂ ಕೊಟ್ಟಿಲ್ಲ… ಲಿಂಗಸುಗೂರು, ರಾಯಚೂರು, ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಒಂದು ಸಾವಿರ ಅಡಿ ಕೊಳವೆಬಾವಿ ತೋಡಿದರೂ ಒಂದು ಹನಿ ನೀರು ಬರುತ್ತಿಲ್ಲ. ಬರ ಪರಿಹಾರವನ್ನೂ ಕೊಟ್ಟಿಲ್ಲ. ಮಾತೆತ್ತಿದರೆ ಕೇಂದ್ರ ಸರಕಾರದತ್ತ ತೋರಿಸುವ ಮುಖ್ಯಮಂತ್ರಿಗಳೇ, ನಿಮ್ಮ ಸರಕಾರ ಏನು ಕತ್ತೆ ಕಾಯುವುದಕ್ಕೆ ಇದೆಯೇ ಎಂದು ರಾಜ್ಯದ ರೈತರು ಕೇಳುತ್ತಿದ್ದಾರೆ ಎಂದು ಗಮನ ಸೆಳೆದರು.
ಸರಕಾರ ಬುಡಸಮೇತ ಕಿತ್ತು ಹಾಕುವ ಸಂಕಲ್ಪ : ಒಂದು ಕಡೆ ದಲಿತರ ಹಣ ಲೂಟಿ ಮಾಡುತ್ತ ಇದ್ದೀರಿ. ಮಹಿಳೆಯರಿಗೆ ಇವತ್ತು ಅನ್ಯಾಯ ಮಾಡುತ್ತ ಇದ್ದೀರಿ. ದುಡಿಯುವ ಯುವಜನತೆಗೆ ಕೆಲಸ ಇಲ್ಲ; ಮತ್ತೊಂದು ಕಡೆ ಭ್ರಷ್ಟಾಚಾರ. ಭ್ರಷ್ಟ, ಜನವಿರೋಧಿ, ದಲಿತವಿರೋಧಿ, ರೈತವಿರೋಧಿ ಕಾಂಗ್ರೆಸ್ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ಸಂಕಲ್ಪವನ್ನು ನಾವು, ನೀವು ಸೇರಿ ಮಾಡಬೇಕಿದೆ ಎಂದು ತಿಳಿಸಿದರು.
ಮೊದಲ ದಿನದ ಪಾದಯಾತ್ರೆ ಯಶಸ್ಸಿಗಾಗಿ ಪಕ್ಷದ ಎಲ್ಲ ಹಿರಿಯ ನಾಯಕರು, ಜಿಲ್ಲಾಧ್ಯಕ್ಷರಿಗೆ, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರಿಗೆ, ಸಂಸದರು, ಮಾಜಿ ಸಂಸದರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.


