ಮೈಸೂರು : ಬರ ಪರಿಸ್ಥಿತಿಯನ್ನು ಅವಲೋಕಿಸುವ ಸಲುವಾಗಿ ಮೈಸೂರು ಜಿಲ್ಲೆಗೆ ಭೇಟಿ ನೀಡಿರುವ ಉಪ ಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ(Dr.G.Parameshwar) ಅವರು ಇಂದು ಕೆ.ಆರ್.ನಗರ ತಾಲ್ಲೂಕಿನ(K.R.Nagar Taluk) ಕಂಚುಗಾರ ಕೊಪ್ಪಲು ಗ್ರಾಮದಲ್ಲಿ (Kanchugara Koppala Grama) ಮಳೆ ಕೊರತೆಯಿಂದ ಹಾನಿಗೊಳಗಾದ ರೈತರ ಜಮೀನಿಗೆ ತೆರಳಿ ಬರ ವೀಕ್ಷಣೆ ಮಾಡಿದರು.
ಬರ ವೀಕ್ಷಣೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ರಾಮದಲ್ಲಿ ರಾಗಿ ಮತ್ತು ಹೊಗೆಸೊಪ್ಪು ಬೆಳೆದ ರೈತರ ಜಮೀನುಗಳಿಗೆ ಸ್ಥಳೀಯ ಶಾಸಕರಾದ ರವಿಶಂಕರ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದೆ. ಬೆಳೆ ಬಿತ್ತನೆಯಾಗಿ ಮೊಳಕೆಯೊಡೆದ ಕೆಲವೇ ದಿನಕ್ಕೆ ಮಳೆ ಕೊರತೆ ಎದುರಾದ ಕಾರಣ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇಡೀ ತಾಲ್ಲೂಕಿನಲ್ಲಿ ಈ ಬಾರಿ ಕೇವಲ 10 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಸದ್ಯ ಆ ಬೆಳೆ ಕೂಡ ನಾಶವಾಗಿದೆ. ವಸ್ತುಸ್ಥಿತಿಯನ್ನು ಗಮನಿಸಿದಾಗ ಇಡೀ ತಾಲ್ಲೂಕಿನಲ್ಲಿ ಬೆಳೆಹಾನಿ ಉಂಟಾಗಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಕೆ.ಆರ್ ನಗರ ತಾಲ್ಲೂಕನ್ನು ಈಗಾಗಲೇ ಬರಗಾಲಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.
ಮುಂದುವರೆದು, ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ಜ್ಞಾಪನಾ ಪತ್ರವನ್ನು ಸಲ್ಲಿಸಲಾಗುವುದು. ಸೂಕ್ತ ಪರಿಹಾರವನ್ನು ನೀಡಲಾಗುವುದು. ಮುಖ್ಯಮಂತ್ರಿಗಳು ಇಂದು ಗದಗ ಜಿಲ್ಲೆಗೆ ಬರಪೀಡಿತ ಪ್ರದೇಶದ ವೀಕ್ಷಣೆಗೆ ತೆರಳಿದ್ದಾರೆ. ನಾನು ಇಂದು ಮತ್ತು ನಾಳೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಬರ ವೀಕ್ಷಣೆ ಮಾಡುತ್ತೇನೆ. ಅಂತಿಮವಾಗಿ ನಮ್ಮ ಸರ್ಕಾರ ಚರ್ಚಿಸಿ ರೈತರ ಸಮಸ್ಯೆ ಪರಿಹಾರಕ್ಕೆ ತೀರ್ಮಾನ ತೆಗೆದುಕೊಳ್ಳುತ್ತದೆ. ಕೆ.ಆರ್.ನಗರ ತಾಲೂಕಿನಲ್ಲಿ ಹೊಗೆಸೊಪ್ಪು, ರಾಗಿ ಹೆಚ್ಚು ಬೆಳೆಯುತ್ತಾರೆ. ಆದರೆ ಎಲ್ಲಾ ಬೆಳೆಗಳು ನಷ್ಟವಾಗಿದೆ. ರೈತರಿಗೆ ಯಾವ ಬೆಳೆಯೂ ಸಿಕ್ಕಿಲ್ಲ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಈಗಾಗಲೇ ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರವನ್ನು ಬರೆದಿದ್ದೇವೆ. ಬರಪೀಡಿತ ಘೋಷಣೆಗೆ ಇರುವ ನಿಯಮಗಳನ್ನು ಸಡಿಲಿಸುವಂತೆ ಕೋರಿದ್ದೇವೆ. ನಿಯಮ ಸಡಿಲಿಸಿದರೆ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬಹುದು. ಆದರೆ ಕೇಂದ್ರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ವಿಸ್ತೃತ ಮೆಮೊರಾಂಡಮ್ ಅನ್ನು ಸದ್ಯದಲ್ಲೇ ಸಲ್ಲಿಸುತ್ತೇವೆ. ಅವರ ತಂಡ ಇಲ್ಲಿಗೆ ಬಂದು ಪರಿಶೀಲನೆ ನಡೆಸಿದ ಬಳಿಕ ಹಣ ಬಿಡುಗಡೆಯಾಗುತ್ತದೆ ಎಂದು ಡಿಸಿಎಂ ವಿವರಿಸಿದರು.
ಮೈಕ್ರೋ ಫೈನಾನ್ಸ್ಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ನಾವು ಕಾನೂನನ್ನು ಮಾಡಿದ್ದೇವೆ. ಯಾವುದೇ ರೀತಿಯಲ್ಲಿ ರೈತನಿಗೆ ಒತ್ತಾಯ ಮಾಡಬಾರದು. ಅವರಿಗೆ ಕಿರುಕುಳ ನೀಡಬಾರದು ಎಂದು ಸೂಚಿಸಿದ್ದೇನೆ. ಸೂಚನೆ ಮೀರಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಹುಣಸೂರು ಶಾಸಕ ಹರೀಶ್ಗೌಡ, ಕೆ.ಆರ್.ನಗರ ಶಾಸಕ ರವಿಶಂಕರ್, ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ತಹಶೀಲ್ದಾರ್ ಮತ್ತು ಕೃಷಿ ಅಧಿಕಾರಿಗಳು ಇದ್ದರು.

