BENGALURU: ಆರೋಗ್ಯ ವಿಮೆ (Health Insurance) ಮಾಡಿಸುವಾಗ ವ್ಯಾಪಕ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದ್ದು, ಜನ ಸಾಮಾನ್ಯರು ಮೋಸಹೋಗಬಾರದು ಎಂದು ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ( State Consumer Disputes Redressal Commission) ಅಧ್ಯಕ್ಷರಾದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ (T.G. Shivashankaregowda) ಹೇಳಿದ್ದಾರೆ.
ದೇವಾಂಗ ಸಂಘ ಕಾಲೇಜ್ ಆಫ್ ಲಾ ಹಾಗೂ ಯುವ ವಕೀಲರ ಸ್ನೇಹ ಬಳಗದಿಂದ ದೇವಾಂಗ ಸಂಘದ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ “ಫೋಕ್ಸ್ ಕಾಯ್ದೆ” ಕುರಿತು ಶ್ರೀ ಪತಿಯಪ್ಪ ಸ್ಮರಣಾರ್ಥ ಅಖಿಲ ಕರ್ನಾಟಕ ಪ್ರಥಮ ಕನ್ನಡ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರು ವಿಮೆ ಕ್ಲೈಮ್ ಮಾಡುವಾಗ ಆರೋಗ್ಯ ವಿಮಾ ಕಂಪೆನಿಗಳು ಅನಗತ್ಯವಾಗಿ ಖ್ಯಾತೆ ತೆಗೆಯುತ್ತಿವೆ. ರೋಗಿಗೆ ಅಧಿಕ ರಕ್ತದೊತ್ತಡವಿತ್ತು. ಮಧುಮೇಹವಿದೆ. ಹೀಗಾಗಿ ವಿಮಾ ಮೊತ್ತ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿವೆ.

ಸಹಸ್ರಾರು ರೂಪಾಯಿ ಪಾವತಿಸಿ ವಿಮೆ ಪಡೆಯುವವರಿಗೆ ವಂಚನೆಯಾಗುತ್ತಿದೆ. ಇಂತಹ ಹಲವು ಪ್ರಕರಣಗಳಲ್ಲಿ ಗ್ರಾಹಕರ ಪರವಾಗಿ ತೀರ್ಪುಗಳು ಬಂದಿವೆ. ವಿಮಾ ಕಂಪೆನಿಗಳನ್ನು ಪ್ರತಿಬಾರಿ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಯುವ ವಕೀಲರು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಮೊದಲು ವೃತ್ತಿ ಆರಂಭಿಸಬೇಕು. ಏಕೆಂದರೆ ಪ್ರಕರಣಗಳು ಕೇವಲ ಮೂರು, ನಾಲ್ಕು ತಿಂಗಳಲ್ಲಿ ಇತ್ಯರ್ಥವಾಗಿ ತೀರ್ಪುಗಳು ಬರುತ್ತಿವೆ. ಪ್ರತಿಯೊಂದು ಪ್ರಕರಣವೂ ವಿಭಿನ್ನವಾಗಿದ್ದು, ಕಲಿಯಲು ವಿಪುಲ ಅವಕಾಶಗಳಿವೆ ಎಂದರು.
ಫೋಕ್ಸೋ ಕಾಯ್ದೆ ಬಗ್ಗೆ ಇಂದು ಚಿಂತನ ನಡೆಯುತ್ತಿದ್ದು, ಯುವ ವಕೀಲರು ವಿಷಯದ ಬಗ್ಗೆ ಬೆಳಕು ಚೆಲ್ಲಬೇಕು. 45 ಕಾಲೇಜುಗಳು ಸ್ಪರ್ಧೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ. ಕೇಂದ್ರ ಸರ್ಕಾರ ಬಾಲಪರಾಧಿ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದು, ಬಾಲನ್ಯಾಯ ವ್ಯವಸ್ಥೆಯಲ್ಲಿ ವಯೋಮಿತಿಯನ್ನು 18 ರಿಂದ 16 ವರ್ಷಕ್ಕೆ ಇಳಿಸಲು ಚಿಂತನೆ ನಡೆಯುತ್ತಿದೆ. ಹಾಗೇನಾದರೂ ತಿದ್ದುಪಡಿಯಾದರೆ ದೇಶದಲ್ಲಿರುವ ಪೋಕ್ಸೋ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲಿದೆ. ಫೋಕ್ಸೋ ಕಾಯ್ದೆಯಲ್ಲಿ ಸಂತ್ರಸ್ತರಿಗೆ ನ್ಯಾಯ ದೊರೆಯಬೇಕು. ಜೊತೆಗೆ ದುರ್ಬಳಕೆ ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಹೈಕೋರ್ಟ್ ನ್ಯಾಯವಾದಿ ಡಾ. ಜಗಹದೀಶ್ ಹಾಲಶೆಟ್ಟಿ, ದೇವಾಂಗ ಸಂಘದ ಅಧ್ಯಕ್ಷ ಡಾ. ಜಿ. ರಮೇಶ್, ಖಜಾಂಚಿ ಶ್ವೇತಾ ರವಿಶಂಕರ್, ವಕೀಲರಾದ ಗೌರೀಶ್ ಎಸ್, ದೇವಾಂಗ ಸಂಘದ ಉಪಾಧ್ಯಕ್ಷರಾದ ಎ.ವಿಜಯ್ ಕುಮಾರ್, ಪಾರ್ವತಿ, ಯುವ ವಕೀಲರ ಸ್ನೇಹ ಬಳಗದ ಅಧ್ಯಕ್ಷ ಅನಿಲ್ ರೆಡ್ಡಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿಲ್ಪ, ದೇವಾಂಗ ಸಂಘದ ಕಾರ್ಯದರ್ಶಿ ಆರ್. ಭಾಸ್ಕರ್, ಖಜಾಂಚಿ ಎಂ. ಲಕ್ಷ್ಮೀ ನಾರಾಯಣ, ಜಂಟಿ ಕಾರ್ಯದರ್ಶಿ ಊರುಕರೆ ಜಿ. ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

