ಅರಣ್ಯ ಭೂಮಿ ಈಗಲೂ ಉಳಿದಿದ್ದರೆ ಅದರ ಶ್ರೇಯಸ್ಸು ಸೇವೆ ಸಲ್ಲಿಸಿದ ಹಿಂದಿನ ಅಧಿಕಾರಿಗಳಿಗೆ ಸಲ್ಲುತ್ತದೆ: ಡಾ. ಮೀನಾಕ್ಷಿ ನೇಗಿ
ಭಾರತೀಯ ಅರಣ್ಯ ಸೇವೆಯಲ್ಲಿ ಮೊದಲ ಶ್ರೇಯಾಂಕದಲ್ಲಿ ಉತ್ತೀರ್ಣರಾದ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸವದಿ ಗ್ರಾಮದ ಬಸವರಾಜ್ ಕೆಂಪವಾಡ್
ಬೇರೆ ಬೇರೆ ಇಲಾಖೆಗಳ ಭೂಮಿ ನಶಿಸುತ್ತಿದ್ದು, ಅರಣ್ಯ ಇಲಾಖೆಯ ಭೂಮಿ ಈಗಲೂ ಉಳಿದಿದೆ. ಅರಣ್ಯ ಸಂಪತ್ತು (Forest Wealth) ಉಳಿಸಿದ ಶ್ರೇಯಸ್ಸು ಹಿಂದಿನ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (Principal Chief Conservator of Forests) ಹಾಗೂ ಅರಣ್ಯಪಡೆಯ ಮುಖ್ಯಸ್ಥರಾದ (Dr. Meenakshi Negi) ಡಾ. ಮೀನಾಕ್ಷಿ ನೇಗಿ ಹೇಳಿದ್ದಾರೆ.
ಭಾರತೀಯ ಅರಣ್ಯ ಸೇವೆ (ಐಎಫ್ ಎಸ್) ಪರೀಕ್ಷೆ 2025-26ರಲ್ಲಿ ಯಶಸ್ಸು ಸಾಧಿಸಿದ ಅಭ್ಯರ್ಥಿಗಳಿಗೆ ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಿಂದ ಅರಣ್ಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಅರಣ್ಯ ಸೇವೆಗೆ ಸೇರ್ಪಡೆಯಾದ ಹತ್ತು ಮಂದಿ ಸಾಧಕರನ್ನು ಅಭಿನಂದಿಸಿ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿಗಳು (PCCF) ಹಾಗೂ ಅರಣ್ಯ ಪಡೆಯ ಮುಖ್ಯಸ್ಥರಾದ ಡಾ. ಮೀನಾಕ್ಷಿ ನೇಗಿ, IFS , ಇಂತಹ ಭವ್ಯವಾದ ನೈಸರ್ಗಿಕ ಅರಣ್ಯ ಸಂಪನ್ಮೂಲ ಉಳಿಸಲು ಅವಿರತವಾಗಿ ಹಿಂದಿನವರು ಶ್ರಮಿಸಿದ್ದಾರೆ. ಪರಿಶ್ರಮ, ಶಿಸ್ತು ಹಾಗೂ ದೃಢ ಸಂಕಲ್ಪದಿಂದ ನಾಗರಿಕ ಸೇವೆಗಳಲ್ಲಿ ಯಶಸ್ಸು ಸಾಧಿಸಬಹುದು ಕಿವಿ ಮಾತು ಹೇಳಿದರು. ಸರ್ಕಾರಿ ಹುದ್ದೆ ಎಂದರೆ ಉತ್ತಮ ವೇತನ, ಭತ್ಯೆ ದೊರೆಯುವ ಜೊತೆಗೆ ಆರಾಮವಾಗಿರಬಹುದು ಎನ್ನುವ ಧೋರಣೆ ಹೆಚ್ಚಾಗಿದೆ. ಆದರೆ ಸರ್ಕಾರಿ ಹುದ್ದೆಯಲ್ಲಿ ಕಠಿಣ ಪರಿಶ್ರಮ ಹೊಂದಿರಬೇಕು.
ಕರ್ನಾಟಕಕ್ಕೆ ಮೊದಲ ಅರಣ್ಯ ಅಧಿಕಾರಿಯಾಗಿ ನಿಯೋಜನೆಗೊಂಡು ತಾವು ಸವಾಲಿನಿಂದ ಕೆಲಸ ಮಾಡಿರುವುದು ಸಮಾಧಾನ ತಂದಿದೆ. ಜನರ ನಿರೀಕ್ಷೆಗಳು, ಬೇಡಿಕೆಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಅರಣ್ಯ ಪುರಾತನವಾದದ್ದು. ಉಪನಿಷತ್ತಿನಲ್ಲಿ ಅತಿ ಹೆಚ್ಚು ಜ್ಞಾನವಿದ್ದು, ಉಪನಿಷತ್ತಿಗೆ ಮತ್ತೊಂದು ಹೆಸರು ಅರಣ್ಯಕ. ಅರಣ್ಯ ಸಕಲ ಜೀವ ರಾಶಿಗಳಷ್ಟೇ ಅಲ್ಲ ಜ್ಞಾನದ ಬಂಢಾರವಾಗಿದೆ. ಅರಣ್ಯ ಸಂರಕ್ಷಣೆಗೆ ಸಂಪ್ರದಾಯಿಕ ಪದ್ಧತಿ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಎರಡನ್ನೂ ಬಳಸಬೇಕು ಎಂದು ಕಿವಿ ಮಾತು ಹೇಳಿದರು.
ಇಂಡಿಯಾಫಾರ್ ಐಎಎಸ್ ಅಕಾಡೆಮೆಯ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾದ ಡಾ. ಸಿ.ಎನ್. ಖೇದಾರ್ ಮಾತನಾಡಿ, ಈ ಬಾರಿ ದಾಖಲೆ ಪ್ರಮಾಣದಲ್ಲಿ ಕರ್ನಾಟಕದಿಂದ ಅರಣ್ಯ ಸೇವೆಗೆ ಸೇರ್ಪಡೆಯಾಗಿದ್ದು, ಇದು ಅತ್ಯುತ್ತಮ ಬೆಳವಣಿಗೆಯಾಗಿದೆ. ಅರಣ್ಯ ಸೇವೆ ಮಾಡಿದರೆ ಮಾನವೀಯ ಸೇವೆ ಮಾಡಿದಂತೆ. ಈ ಉದ್ದೇಶದಿಂದ ನಮ್ಮ ಅಕಾಡೆಮೆಯಲ್ಲಿ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹ ನೀಡುತ್ತಿದ್ದೇವೆ. ಲೋಕಸೇವಾ ಆಯೋಗದಿಂದ ಪ್ರತಿ ವರ್ಷ ರಾಜ್ಯದ ನೂರು ಮಂದಿ ಆಯ್ಕೆಯಾಗಬೇಕು ಎಂಬುದು ನಮ್ಮ ಮಹತ್ವಾಕಾಂಕ್ಷೆ ಗುರಿಯಾಗಿದೆ ಎಂದರು.
ಭಾರತೀಯ ಅರಣ್ಯ ಸೇವೆಯಲ್ಲಿ ಮೊದಲ ಶ್ರೇಯಾಂಕದಲ್ಲಿ ಉತ್ತೀರ್ಣರಾದ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸವದಿ ಗ್ರಾಮದ ಬಸವರಾಜ್ ಕೆಂಪವಾಡ್ ಮಾತನಾಡಿ, ಎರಡನೇ ಪ್ರಯತ್ನದಲ್ಲಿ ತಮಗೆ ಉನ್ನತ ಸಾಧನೆ ಮಾಡಲು ತಮಗೆ ಸಾಧ್ಯವಾಯಿತು. ಮೊದಲ ಪ್ರಯತ್ನದಲ್ಲಿ ಆದ ತಪ್ಪುಗಳನ್ನು ತಿದ್ದಿಕೊಂಡು ಯಶಸ್ಸು ಸಾಧಿಸಿದ್ದೇನೆ. ಗ್ರಂಥಾಲಯ ತಮಗೆ ಜ್ಞಾನಬಂಢಾರವಾಗಿತ್ತು.
ಇಂಡಿಯಾಫಾರ್ ಐಎಎಸ್ ಅಕಾಡೆಮೆ ತಮಗೆ ವಿದ್ಯಾರ್ಥಿ ವೇತನದ ಜೊತೆಗೆ ಸೂಕ್ತ ಮಾರ್ಗದರ್ಶನ ನೀಡಿದೆ. ನಾಗರಿಕ ಸೇವೆಗೆ ಸೇರ್ಪಡೆಯಾಗಲು ತಾಳ್ಮೆ, ಪರಿಶ್ರಮದ ಜೊತೆಗೆ ತಪಸ್ಸಿನಂತೆ ಕಾರ್ಯನಿರ್ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪಿಸಿಸಿಎಫ್ [ಡಬ್ಲ್ಯು ಎಲ್] ಕುಮಾರ್ ಪುಸ್ಕಾರ್, ಮಾಜಿ ಪಿಸಿಸಿಎಫ್ ಶ್ರೀಧರ್ ಮೂರ್ತಿ, ಇಂಡಿಯಾಫಾರ್ ಐಎಎಸ್ ಅಕಾಡೆಮೆಯ ಉಪಾಧ್ಯಕ್ಷರು ಡಾ. ಜಿ.ಎನ್. ಶ್ರೀಕಂಠಯ್ಯ, ನಿವೃತ್ತ ಐಎಫ್ಎಸ್ ಶ್ರೀನಿವಾಸ್ ಸಂಸ್ಥೆಯ ಸಂಚಾಲಕರು, ನಿರ್ದೇಶಕರಾದ ಜಿ.ಎನ್., ಸಮೀರ್ ಕುಮಾರ್, ನವೀನ್ ಕೆ.ಎಂ., ಹಾಗೂ ಬಾಬು ಸಂದೀಪ್ ಎಸ್.ಎಂ. ಮತ್ತಿತರರು ಉಪಸ್ಥಿತರಿದ್ದರು.

