BENGALURU : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬಸ್ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರ ವಿರುದ್ಧ ತಪಾಸಣೆಯನ್ನು ತೀವ್ರಗೊಳಿಸಿದ್ದು, ಕೇವಲ ಒಂದೇ ತಿಂಗಳಲ್ಲಿ ಸಾವಿರಾರು ಪ್ರಯಾಣಿಕರಿಗೆ ದಂಡ ವಿಧಿಸಿ ಒಟ್ಟು Rs. 8,67,590/- ಗಳ ಭಾರೀ ಮೊತ್ತವನ್ನು ದಂಡ ರೂಪದಲ್ಲಿ (FINE) ವಸೂಲಿ ಮಾಡಲಾಗಿದೆ.
ಏಪ್ರಿಲ್-2026ರ ಮಾಹೆಯಲ್ಲಿ ಕೆಎಸ್ಆರ್ಟಿಸಿಯ ವಿಶೇಷ ತನಿಖಾ ತಂಡಗಳು ಸಂಸ್ಥೆಯ ಆದಾಯ ಸೋರಿಕೆಯನ್ನು ತಡೆಯಲು ರಾಜ್ಯ ಹಾಗೂ ನೆರೆರಾಜ್ಯಗಳಲ್ಲಿ ಸಂಚರಿಸುವ ಒಟ್ಟು 41,308 ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸಿವೆ. ಈ ಕಾರ್ಯಾಚರಣೆಯ ವೇಳೆ ಒಟ್ಟು 4,337 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಬಸ್ಗಳಲ್ಲಿ ಟಿಕೆಟ್ ಪಡೆಯದೇ ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ 4,462 ಪ್ರಯಾಣಿಕರನ್ನು ತನಿಖಾ ತಂಡಗಳು ಪತ್ತೆಹಚ್ಚಿ ದಂಡ ವಿಧಿಸಿವೆ. ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು ₹8,67,590/- ಗಳ ಭಾರೀ ಮೊತ್ತವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ.
ನಿಗಮದ ಆದಾಯಕ್ಕೆ ನಷ್ಟ ಉಂಟುಮಾಡುತ್ತಿದ್ದ ₹1,32,973/- ಗಳ ಸೋರಿಕೆ ಮೊತ್ತವನ್ನು ತನಿಖಾಧಿಕಾರಿಗಳು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಆದಾಯ ಸೋರಿಕೆಗೆ ಕಾರಣರಾದ ಹಾಗೂ ಕರ್ತವ್ಯ ಲೋಪ ಎಸಗಿರುವ ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧವೂ ನಿಗಮವು ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ನಿಗಮದ ಬಸ್ಗಳಲ್ಲಿ ಪ್ರಯಾಣಿಸುವಾಗ ಸಾರ್ವಜನಿಕ ಪ್ರಯಾಣಿಕರು ಕಡ್ಡಾಯವಾಗಿ ಸೂಕ್ತ ಟಿಕೆಟ್ ಅಥವಾ ಪಾಸುಗಳನ್ನು ಪಡೆದೇ ಪ್ರಯಾಣಿಸಬೇಕು ಮತ್ತು ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ವಿನಂತಿಸಿದೆ.

